"ವ್ಯಾಪಂ ಹಗರಣ, ಸತ್ಯಕ್ಕೆ ತಲೆ ಬಾಗುವೆ, ಸಿಬಿಐ ತನಿಖೆಗೆ ಸಿದ್ಧ"
ಭೋಪಾಲ್, ಜುಲೈ 07: ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(Vyapam) ನೇಮಕಾತಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸಿದ್ಧ, ಸತ್ಯಕ್ಕೆ ತಲೆ ಬಾಗುವೆ, ಜನರ ಮನಸ್ಸಿನಲ್ಲಿ ನಂಬಿಕೆ ಉಳಿಸಿಕೊಳ್ಳಬೇಕಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಸುಮಾರು 48ಕ್ಕೂ ಹೆಚ್ಚಿ ಜನರನ್ನು ಬಲಿ ಪಡೆದಿರುವ ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಕೊನೆಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಮುಂದಾಗಿದ್ದಾರೆ. ಈ ಬಗ್ಗೆ ಮಧ್ಯಪ್ರದೇಶ ಹೈಕೋರ್ಟಿಗೆ ಶಿಫಾರಸು ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಬಹುಕೋಟಿ ರೂ.ಗಳ ವ್ಯಾಪಂ ಹಗರಣ ಇದುವರೆಗೆ ಹಲವರನ್ನು ಬಲಿ ತೆಗೆದುಕೊಂಡಿದ್ದು, ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಅನೇಕ ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಸದ್ಯ ಬಿಜೆಪಿ ಸರ್ಕಾರ ಈ ಹಗರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿತ್ತು. ಹೈಕೋರ್ಟ್ ಉಸ್ತುವಾರಿಯಲ್ಲಿ ನಡೆಸುತ್ತಿರುವುದರಿಂದ ಸಿಬಿಐಗೆ ಯಾವುದೇ ಕಾರಣಕ್ಕೂ ಒಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.

ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಅವರೂ ಕೂಡ ಮಧ್ಯಪ್ರದೇಶದ ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. ಅದರೆ, ನಿರಂತರವಾಗಿ ನಿಗೂಢ ಸಾವು ಸಂಭವಿಸುತ್ತಿರುವುದು ಹಾಗೂ ಎಲ್ಲೆಡೆಯಿಂದ ಒತ್ತಡ ಹೆಚ್ಚಾಗಿರುವುದರಿಂದ ವಿಧಿ ಇಲ್ಲದೆ ಸಿಬಿಐ ತನಿಖೆಗೆ ವಹಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ.
ಈ ಮಧ್ಯೆ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ಸಿಂಗ್ ಹಾಗೂ ಈ ಹಗರಣವನ್ನು ಬಯಲಿಗೆಳೆದ ಕೆಲ ಖಾಸಗಿ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳನ್ನು ಜು.9ರಂದು ವಿಚಾರಣೆಗೆ ಬರಲಿದೆ.
ಮಧ್ಯಪ್ರದೇಶದ ತಿಕಾಮ್ ಘರ್ನ ಓರ್ಚಾದ ನಿವಾಸದಲ್ಲಿ ಪೊಲೀಸ್ ಪೇದೆ ರಮಾಕಾಂತ್ ಪಂಡ ನೇಣಿಗೆ ಶರಣಾಗಿದ್ದು, ಇದು ಮತ್ತೊಂದು ವ್ಯಾಪಂ ಸಾವು ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೂ ಮುನ್ನ ಟ್ರೈನಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಬಲಿಯಾಗಿದ್ದರು. ಸಾವಿನ ಸಂಖ್ಯೆ 48 ದಾಟಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications