ವಿವಿಪ್ಯಾಟ್ನಿಂದ ಚುನಾವಣಾ ಅಕ್ರಮ ಸಾಧ್ಯ: ಮಾಜಿ ಐಎಎಸ್ ಅಧಿಕಾರಿ
ಬೆಂಗಳೂರು, ಸೆಪ್ಟೆಂಬರ್ 25: ಉಪಚುನಾವಣೆ ಮತ್ತು ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದ ಮತ್ತೆ ಇವಿಎಂ ಮತ್ತು ವಿವಿಪ್ಯಾಟ್ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ ವಿಷಯವನ್ನು ಚರ್ಚೆಗೆ ತಂದವರು ಕಾಂಗ್ರೆಸ್ ಅಲ್ಲ, ಬದಲಿಗೆ ಓರ್ವ ಮಾಜಿ ಐಎಎಸ್ ಅಧಿಕಾರಿ.
ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರ ವಿಷಯದಲ್ಲಿ ಕೇಂದ್ರದ ನಿಲವಿನ ಬಗ್ಗೆ ಅಸಂತೋಶ ವ್ಯಕ್ತಪಡಿಸಿ ಸೇವೆಗೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಕನ್ನನ್ ಗೋಪಿನಾತನ್ ಅವರು ವಿವಿಪ್ಯಾಟ್ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಗೋಪಿನಾತನ್, ವಿವಿಪ್ಯಾಟ್ಗಳ ಸಹಾಯದಿಂದ ಚುನಾವಣೆ ಅಕ್ರಮ ಎಸಗಲು ಸಾಧ್ಯ. ವಿವಿಪ್ಯಾಟ್ಗಳನ್ನು ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ.

'ಮೊದಲಿನಂತೆ ಈಗ ಬ್ಯಾಲೆಟ್ ಯೂನಿಟ್ (ಬಟನ್ ಒತ್ತಿ ಮತ ಹಾಕುವ ಯಂತ್ರ) ಕಂಟ್ರೋಲ್ ಯುನಿಟ್ (ಇವಿಎಂನ ಸ್ಮರಣೆ) ಗೆ ನೇರವಾಗಿ ಸಂಬಂಧ ಹೊಂದಿರುವುದಿಲ್ಲ. ಆದರೆ ಅದನ್ನು ವಿವಿಪ್ಯಾಟ್ ಮೂಲಕ ಸಂಪರ್ಕ ಕಲ್ಪಿಸಲಾಗಿರುತ್ತದೆ.
ಜನ ಏನು ಬ್ಯಾಲೆಟ್ ಯೂನಿಟ್ನಲ್ಲಿ ಬಟನ್ ಪ್ರೆಸ್ ಮಾಡುತ್ತಾರೆಯೋ ಆ ಮತದ ಮಾಹಿತಿ ಕಂಟ್ರೋಲ್ ಯೂನಿಟ್ನಲ್ಲಿ ದಾಖಲಾಗುತ್ತಿಲ್ಲ, ಬದಲಿಗೆ ವಿವಿಪ್ಯಾಟ್ ಏನು ಮಾಹಿತಿ ರವಾನಿಸುತ್ತದೆಯೊ ಅದು ದಾಖಲಾಗುತ್ತದೆ ಎಂದು ಹೇಳಿದ್ದಾರೆ.
ವಿವಿಪ್ಯಾಟ್ಗಳನ್ನು ಇವಿಎಂ ಗಳು ಬಂದ ಮೇಲೆ ಪರಿಚಯಿಸಲಾಯಿತು. ಮತದಾರ ಹಾಕಿದ ಮತ ಬ್ಯಾಲೆಟ್ ಯೂನಿಟ್ ಪಕ್ಕದಲ್ಲೇ ಇರುವ ವಿವಿಪ್ಯಾಟ್ನಲ್ಲಿ ತೋರಿಸಲಾಗುತ್ತದೆ. ಮತ ಹಾಕಿದ ಕೂಡಲೇ ಯಾವ ಪಕ್ಷಕ್ಕೆ ಮತ ಹಾಕಿದ್ದೇವೆ ಎಂಬ ಚೀಟಿಯೊಂದು ಅಲ್ಲಿ ಕಾಣಿಸುತ್ತದೆ. ಏಳು ಸೆಕೆಂಡ್ ನಂತರ ಆ ಚೀಟಿ ವಿವಿಪ್ಯಾಟ್ ಒಳಗಿನ ಡಬ್ಬಕ್ಕೆ ಬೀಳುತ್ತದೆ.
ಗೋಪಿನಾಥನ್ ಅವರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಹಲವು ಚುನಾವಣೆಗಳಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ಅವರೇ ವಿವಿಪ್ಯಾಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಇವಿಎಂ ಹ್ಯಾಕ್ ಚರ್ಚೆಗೆ ಹೆಚ್ಚಿನ ಪುಷ್ಠಿ ನೀಡಿದೆ.












Click it and Unblock the Notifications