ಉತ್ತರಾಖಂಡ್ ವಿಪತ್ತು: ಸುರಂಗದಲ್ಲಿ 30, ನಾಪತ್ತೆ ಆದವರು 170..!
ಡೆಹ್ರಾಡೂನ್, ಫೆಬ್ರವರಿ.07: ಉತ್ತರಾಖಂಡ್ ಚಮೋಲಿ ಜಿಲ್ಲೆಯ ಜೋಶಿಮಠ್ ಪ್ರದೇಶದಲ್ಲಿ ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈವರೆಗೂ 14 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದೆ.
ಚಮೋಲಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಐದು ಸೇತುವೆಗಳು ಕೊಚ್ಚಿ ಹೋಗಿದ್ದು, ಎನ್ ಟಿಪಿಸಿ ಪವರ್ ಪ್ರಾಜೆಕ್ಟ್ ಬಳಿ ಮನೆಗಳಿಗೆ ಹಾನಿಯಾಗಿದೆ. ರಿಷಿ ಗಂಗಾದಲ್ಲಿರುವ ಸಣ್ಣ ಪವರ್ ಪ್ರಾಜೆಕ್ಟ್ ಗೂ ಹಾನಿಯಾಗಿದೆ.
ಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟ
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸರ ತಂಡವು ಉತ್ತರಾಖಂಡ್ ನ ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ಸೇನಾ ಪಡೆಯ 6 ತಂಡ ಮತ್ತು ನೌಕಾಪಡೆಯ ಆರು ತಂಡವನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು
ಉತ್ತರಾಖಂಡ್ ದ ಎನ್ ಟಿಪಿಸಿ ಪವರ್ ಪ್ರಾಜೆಕ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 148 ಮಂದಿ ಕಾರ್ಮಿಕರು ಮತ್ತು ರಿಷಿ ಗಂಗಾ ಪವರ್ ಪ್ರಾಜೆಕ್ಟ್ ಕೆಲಸ ಮಾಡುತ್ತಿದ್ದ 22 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಒಂದು ಸುರಂಗದಲ್ಲಿ ಸಿಲುಕಿದ್ದ 12 ಮಂದಿ ಕಾರ್ಮಿಕರನ್ನು ಐಟಿಬಿಪಿ ತಂಡವು ರಕ್ಷಿಸಿದೆ. 2.5 ಕಿಲೋ ಮೀಟರ್ ಉದ್ದದ ಮತ್ತೊಂದು ಸುರಂಗದಲ್ಲಿ 30 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಚಮೋಲಿ ಜಿಲ್ಲೆಗೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್
ಉತ್ತರಾಖಂಡ್ ಹಿಮನದಿ ಸ್ಭೋಟ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಈವರೆಗೂ ಮೃತಪಟ್ಟಿರುವ 14 ಮಂದಿ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಭಾನುವಾರವೇ ಚಮೋಲಿ ಜಿಲ್ಲೆಗೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು. ಹಿಮನದಿ ಸ್ಫೋಟದ ಹಿಂದಿನ ಕಾರಣದ ಬಗ್ಗೆ ತಜ್ಞರು ಪರಿಶೋಧನೆ ನಡೆಸಲಿದ್ದಾರೆ. ಕಾರ್ಮಿಕರ ರಕ್ಷಣೆ ಮಾಡುವುದಷ್ಟೇ ಸದ್ಯದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ತುರ್ತು ಚಿಕಿತ್ಸೆಗಾಗಿ 30 ಬೆಡ್ ಗಳ ಆಸ್ಪತ್ರೆ
ಉತ್ತರಾಖಂಡ್ ನಲ್ಲಿ ಹಿಮನದಿ ಸ್ಫೋಟ ಮತ್ತು ಜಲಪ್ರಳಯ ಸೃಷ್ಟಿಯಾಗಿರುವ ಪ್ರದೇಶಗಳಿಗೆ ವೈದ್ಯಕೀಯ ತಂಡಗಳನ್ನು ಕೂಡಾ ರವಾನಿಸಲಾಗಿದೆ. ಗಾಯಗೊಂಡವರ ತುರ್ತು ಚಿಕಿತ್ಸೆಗಾಗಿ ಶ್ರೀನಗರ್, ರಿಷಿಕೇಶ್, ಡೆಹ್ರಾಡೂನ್, ಜೋಲಿಗ್ರ್ಯಾಂಟ್ ಪ್ರದೇಶಗಳಲ್ಲಿ 30 ಹಾಸಿಗೆಗಳ ಆಸ್ಪತ್ರೆಗಳನ್ನು ತೆರೆಯಲಾಗಿದೆ.
ಮೃತರ ಕುಟುಂಬಕ್ಕೆ ಕೇಂದ್ರ, ರಾಜ್ಯದಿಂದ ಪರಿಹಾರ ಘೋಷಣೆ
ಉತ್ತರಾಖಂಡ್ ಹಿಮಪರ್ವತ ಸ್ಫೋಟ ಮತ್ತು ಜಲಪ್ರಳಯದಲ್ಲಿ ಮೃತಪಟ್ಟವರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.