Breaking: ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ
ಡೆಹ್ರಾಡೂನ್, ಮಾರ್ಚ್ 09: ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಲ್ಲಿಸಿದ್ದಾರೆ.
ಈಗಷ್ಟೇ ರಾಜ್ಯಪಾಲರನ್ನು ಭೇಟಿಯಾದ ರಾವತ್ ರಾಜೀನಾಮೆ ಸಲ್ಲಿಸಿದ್ದಾರೆ, ಪಕ್ಷದದಲ್ಲಿನ ಆಂತರಿಕ ಬೆಳವಣಿಗೆ ಬಳಿಕ ರಾವತ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಮುಂದಿನ ಫೆಬ್ರವರಿಯಲ್ಲಿ ಉತ್ತರಾಖಂಡ್ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ರಾವತ್ ಅವರು ಬಿಜೆಪಿ ಸ್ಥಳೀಯ ಶಾಸಕರು ಹಾಗೂ ಜನರ ಮೆಚ್ಚುಗೆ ಗಳಿಸಲು ವಿಫಲರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಹೀಗಾಗಿ ತನ್ನಿಂದ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎನ್ನುವ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಇಂದೇ ರಾಜೀನಾಮೆ?
ರಾವತ್ ಅವರ ಕಾರ್ಯ ವೈಖರಿ ವಿರೋಧಿಸಿ ಹೈಕಮಾಂಡ್ಗೂ ಕೆಲವರು ದೂರು ಸಲ್ಲಿಸಿದ್ದಾರೆ. ಹೀಗಾಗಿ ರಮಣ್ ಸಿಂಗ್ ಹಾಗೂ ದುಷ್ಯಂತ್ ಸಿಂಗ್ ಸಮಿತಿಯು ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವರದಿ ಸಲ್ಲಿಸಿತ್ತು. ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಭೇಟಿ ಬಳಿಕ ರಾಜೀನಾಮೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಧ್ಯದ ಮಟ್ಟಿಗೆ ಮುಖ್ಯಮಂತ್ರಿ ಹುದ್ದೆಗೆ ಧನ್ಸಿಂಗ್ ರಾವತ್ ಹೆಸರು ಮುಂಚೂಣಿಯಲ್ಲಿದೆ.
ಇದಲ್ಲದೆ ಸತ್ಪಾಲ್ ಮಹಾರಾಜ್, ಅನಿಲ್ ಬಲೂನಿ, ಅಜಯ್ ಭಟ್, ಸುರೇಶ್ ಭಟ್, ಭಗತ್ ಸಿಂಗ್ ಕೋಶಿಯಾರೋ, ರಮೇಶ್ ಪೋಖ್ರಿಯಾಲ್ ಹೆಸರೂ ಕೂಡ ಕೇಳಿಬರುತ್ತಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು ಈ ಕುರಿತು ಮಾತುಕತೆ ನಡೆಯಲಿದೆ.