Uttar Pradesh: ಯುಪಿ ಮೀರತ್ ಸೌರಬ್ ಕೊಲೆ ಪ್ರಕರಣದ 5 ಆಘಾತಕಾರಿ ಸಂಗತಿಗಳು
ಲಕ್ನೋ ಮಾರ್ಚ್ 21: ಉತ್ತರ ಪ್ರದೇಶದ ಮೀರತ್ ಸೌರಬ್ ಕೊಲೆ ಪ್ರಕರಣದ 5 ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. 28 ವರ್ಷದ ಮುಸ್ಕನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೂಡಿ ಮಾರ್ಚ್ 03ರ ರಾತ್ರಿ ತನ್ನ ಪತಿ ಸೌರಭ್ ರಜಪೂತ್ ನನ್ನು ಕೊಲೆ ಮಾಡಿದ್ದಳು. ಅದಾದ ನಂತರ ದೇಹವನ್ನು ಡ್ರಮ್ನಲ್ಲಿ ಹಾಕಿ ಕಾಂಕ್ರೀಟ್ನಿಂದ ಮುಚ್ಚಲಾಗಿತ್ತು. ಈ ಕೊಲೆಯ ನಂತರ ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ಶಿಮ್ಲಾಕ್ಕೆ ಪ್ರವಾಸಕ್ಕೆ ಹೋಗಿದ್ದರು. ಪ್ರಕರಣ ಬೆಳಕಿಗೆ ಬಂದು ಆರೋಪಿಗಳನ್ನು ಬಂಧಿಸಿದಾಗ ಕೆಲ ಅಚ್ಚರಿ ಸಂಗತಿಗಳು ಗೊತ್ತಾಗಿವೆ.
29 ವರ್ಷದ ಸೌರಭ್ ರಜಪೂತ್ ಲಂಡನ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಾಜಿ ಮರ್ಚೆಂಟ್ ನೇವಿ ಉದ್ಯೋಗಿ. ಕಳೆದ ಫೆಬ್ರವರಿ 2025ರಲ್ಲಿ ಮೀರತ್ಗೆ ಬಂದಿದ್ದರು. ಅದಾದ ಬಳಿಕ ಸೌರಭ್ ಕುಟುಂಬಸ್ಥರನ್ನು ಭೇಟಿ ಮಾಡಿರಲಿಲ್ಲ. ಕೆಲ ದಿನಗಳ ಬಳಿಕ ಸೌರಭ್ ಕುಟುಂಬವು ಮೀರತ್ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿತ್ತು. ನಂತರ ಪೊಲೀಸರು ತನಿಖೆ ನಡೆಸಿದಾಗ ಸೌರಭ್ನ ದೇಹವನ್ನು ಇಟ್ಟಿದ್ದ ಡ್ರಮ್ ಪತ್ತೆಯಾಗಿದೆ.

ಪೊಲೀಸರು ಕಟರ್ ನಿಂದ ಡ್ರಮ್ ಕತ್ತರಿಸಿ ಶವವನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಪೊಲೀಸರು ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಈಗ ಈ ಘೋರ ಅಪರಾಧದ ಬಗ್ಗೆ ಆಘಾತಕಾರಿ ಸಂಗತಿಗಳು ಹೊರಬರಲು ಪ್ರಾರಂಭಿಸಿವೆ.
ಪತಿಯೊಂದಿಗೆ ಬೇರೆ ನಂಬರ್ನಿಂದ ಚಾಟ್ ಮಾಡಿದ ಪತ್ನಿ
ಮೀರತ್ನ ಬ್ರಹ್ಮಪುರಿ ಪ್ರದೇಶದಲ್ಲಿ ಸೌರಭ್ ಹತ್ಯೆಯ ನಂತರ ಪೊಲೀಸರು ಆತನ ಪತ್ನಿ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ನನ್ನು ವಿಚಾರಣೆ ನಡೆಸಿದಾಗ, ಆಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಮುಸ್ಕಾನ್ ಮತ್ತು ಸಾಹಿಲ್ ಹಲವಾರು ತಿಂಗಳುಗಳಿಂದ ಸೌರಭ್ ಕೊಲೆಗೆ ಸಂಚು ರೂಪಿಸುತ್ತಿದ್ದರು.
ಪತ್ನಿ ಮುಸ್ಕಾನ್ ಕೊಲೆಯ ನಂತರ ತಮ್ಮ ಮೇಲೆ ಅನುಮಾನ ಬರದಿರಲು ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಳು. ಅದೇನೆಂದರೆ ಸೌರಭ್ನ್ನೊಂದಿಗೆ ಬೇರೆ ನಂಬರ್ನಿಂದ ಸ್ನ್ಯಾಪ್ಚಾಟ್ನಲ್ಲಿ ಚಾಟ್ ಮಾಡುತ್ತಿದ್ದರು. ಚಾಟ್ ಮಾಡುವಾಗ ಸೌರಭ್ ನಿನ್ನನ್ನು ಕೊಲ್ಲಲಾಗುತ್ತದೆ ಎಂದು ನಿನ್ನ ಕೈಯಲ್ಲಿ ಬರೆಯಲಾಗಿದೆ ಎಂದು ಮುಸ್ಕಾನ್ ಹೇಳಿದ್ದಳು. ಇದರಿಂದ ಕೊಂದ ನಂತರ ಪೊಲೀಸರ ಗಮನ ತಮ್ಮ ಮೇಲೆ ಬಾರದಿರಲು ಮುಸ್ಕಾನ್ ಈ ಸಂಚು ರೂಪಿಸಿದ್ದಳು. ಪೊಲೀಸರ ಪ್ರಕಾರ, ಪತ್ನಿ ಮುಸ್ಕಾನ್ ಸ್ನ್ಯಾಪ್ ಚಾಟ್ನಲ್ಲಿ ನಕಲಿ ಐಡಿ ಸೃಷ್ಟಿಸುವ ಮೂಲಕ ಇದನ್ನು ಮಾಡಿದ್ದಾಳೆ.
ಮಾಟಮಂತ್ರದೊಂದಿಗೆ ಸಂಬಂಧ ಹೊಂದಿದ ಪ್ರಕರಣ?
ಮೀರತ್ ಕೊಲೆ ಪ್ರಕರಣವೂ ಮಾಟಮಂತ್ರಕ್ಕೆ ಸಂಬಂಧಿಸಿದೆ. ಆರೋಪಿ ಸಾಹಿಲ್ ಶುಕ್ಲಾ ತಂತ್ರ-ಮಂತ್ರ ಮತ್ತು ಮಾಟಮಂತ್ರದಂತಹ ವಿಷಯಗಳಲ್ಲಿಯೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಾಹಿಲ್ ಕೋಣೆಯ ವಿಡಿಯೋದಲ್ಲಿ ಗೋಡೆಗಳ ಮೇಲೆ ಮಾಟಮಂತ್ರದಂತಹ ವಿಷಯಗಳು ಗೋಚರಿಸುತ್ತಿವೆ. ಅವನ ಕೋಣೆಯಿಂದ ಗಾಂಜಾ ಮತ್ತು ಸೈತಾನನ ಫೋಟೋ ಮುಂತಾದ ವಸ್ತುಗಳು ಪತ್ತೆಯಾಗಿವೆ.
'ಅಪ್ಪ ಡ್ರಮ್ನಲ್ಲಿದ್ದಾರೆ...'- ಸೌರಭ್ ಅವರ 5 ವರ್ಷದ ಮಗಳು ಹೇಳಿದ ತೊದಲು ಮಾತು
ಸೌರಭ್ ಮತ್ತು ಮುಸ್ಕಾನ್ ದಂಪತಿಗೆ ಐದು ವರ್ಷದ ಮಗಳಿದ್ದಾಳೆ. ಸೌರಭ್ ಅವರ ತಾಯಿಗೆ ತನ್ನ ಐದು ವರ್ಷದ ಮೊಮ್ಮಗಳು ತನ್ನ ತಂದೆ ಡ್ರಮ್ ಒಳಗೆ ಇದ್ದಾರೆ ಎಂದು ಹೇಳಿದ್ದಾಳಂತೆ. ಅಲ್ಲದೆ ಸೌರಭ್ ಮತ್ತು ಮುಸ್ಕಾನ್ ಅವರ ಮಗಳು ನೆರೆಹೊರೆಯವರಿಗೆ "ಅಪ್ಪ ಡ್ರಮ್ನಲ್ಲಿದ್ದಾರೆ" ಎಂದು ಹೇಳಿದ್ದರು ಎಂದು ಸೌರಭ್ ಅವರ ತಾಯಿ ತಿಳಿಸಿದ್ದಾರೆ. "ಸೌರಭ್ ಮತ್ತು ಮುಸ್ಕಾನ್ ಅವರ ಮಗಳು ಈ ಬಗ್ಗೆ ತಿಳಿದಿರಬಹುದು. ಅದಕ್ಕೆ ಅವಳು ಹಾಗೆ ಹೇಳಿದ್ದಾಳೆ. ಅವಳು (ಮಗಳು) ಏನನ್ನಾದರೂ ನೋಡಿರಬಹುದು, ಅದಕ್ಕಾಗಿಯೇ ಅವಳು ಹಾಗೆ ಹೇಳುತ್ತಿದ್ದಾಳೆ" ಎಂದು ಸೌರಭ್ ತಾಯಿ ಕಣ್ಣೀರು ಹಾಕಿದ್ದಾರೆ.
ಮೀರತ್ ಪೊಲೀಸರ ಪ್ರಕಾರ, ತನಿಖೆಯ ಸಮಯದಲ್ಲಿ ಸಾಹಿಲ್ ಮತ್ತು ಮುಸ್ಕಾನ್ ಸೌರಭ್ನನ್ನು ಕೊಂದಿದ್ದಾರೆ. ಅದರ ನಂತರ ಮೃತ ದೇಹದ ತಲೆ, ಎರಡೂ ಕೈಗಳ ಅಂಗೈಗಳನ್ನು ಕತ್ತರಿಸಿ ಡ್ರಮ್ನಲ್ಲಿ ಇರಿಸಿ ಅದನ್ನು ಸಿಮೆಂಟ್ ನಿಂದ ಮುಚ್ಚಿದ್ದಾರೆ. ಸೌರಭ್ ಅವರ ದೇಹವನ್ನು 15 ತುಂಡುಗಳಾಗಿ ಕತ್ತರಿಸಲಾಗಿತ್ತು. ನಂತರ ಇಬ್ಬರೂ ಶಿಮ್ಲಾ, ಮನಾಲಿ ಮತ್ತು ಕಸೌಲಿಗೆ ಪ್ರವಾಸಕ್ಕೆ ಹೋಗಿದ್ದಾರೆ.
'ಮುಸ್ಕಾನ್ ಕುಟುಂಬಕ್ಕೆ ಎಲ್ಲವೂ ಮೊದಲೇ ತಿಳಿದಿತ್ತು'
ಸೌರಭ್ ಅವರ ತಾಯಿ, 'ಮುಸ್ಕಾನ್ ಅವರ ಕುಟುಂಬಕ್ಕೆ ಇಡೀ ಘಟನೆಯ ಬಗ್ಗೆ ತಿಳಿದಿತ್ತು' ಎಂದು ಆರೋಪಿಸಿದ್ದಾರೆ. 'ಪೊಲೀಸರನ್ನು ಸಂಪರ್ಕಿಸುವ ಮೊದಲು ಅವರು ವಕೀಲರೊಂದಿಗೆ ಸಮಾಲೋಚಿಸಿ, ತಮ್ಮ ಮಗಳು ಸೌರಭ್ನನ್ನು ಕೊಲೆ ಮಾಡಿದ್ದಾಳೆಂದು ಹೇಳಿಕೊಂಡಿದ್ದರು. ಪೊಲೀಸರು ಬಂದ ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದಂತೆ ನಟಿಸಿದ್ದಾರೆ. ಮುಸ್ಕನ್ ತಮ್ಮ ತಾಯಿಯ ಮನೆಗೆ ಬಂದು ಹೇಳುವ ಹೊತ್ತಿಗೆ ಮುಸ್ಕಾನ್ ತಾಯಿಗೆ ಈಗಾಗಲೇ ಎಲ್ಲವೂ ತಿಳಿದಿತ್ತು. ಆದರೆ ತಪ್ಪು ದಾರಿಗೆಳೆಯಲು ಪ್ರಯತ್ನಿಸಿದ್ದಾರೆ. ಮುಸ್ಕನ್ ಅವರ ಕುಟುಂಬ, ಆ ಹುಡುಗ (ಸಾಹಿಲ್) ಜೊತೆಗೆ ಗಲ್ಲಿಗೇರಿಸಬೇಕು" ಎಂದು ಸೌರಭ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ.
ಸೌರಭ್ಗೆ ಆಹಾರದಲ್ಲಿ ನಿದ್ರೆ ಮಾತ್ರೆ
ಸಾಹಿಲ್ ಮತ್ತು ಮುಸ್ಕಾನ್ ಸೌರಭ್ ನನ್ನು ಕೊಲ್ಲಲು ಈಗಾಗಲೇ ಎಲ್ಲಾ ಯೋಜನೆಗಳನ್ನು ರೂಪಿಸಿದ್ದರು. ವಿಚಾರಣೆಯ ಸಮಯದಲ್ಲಿ ಮಾರ್ಚ್ 3-4ರ ರಾತ್ರಿ ಮುಸ್ಕಾನ್ ಸೌರಭ್ನ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿರುವುದಾಗಿ ಹೇಳಿಕೊಂಡಿದ್ದಾರೆ. ಊಟ ಮಾಡುವಾಗ ಸೌರಭ್ ಪ್ರಜ್ಞೆ ತಪ್ಪಲು ಪ್ರಾರಂಭಿಸಿದಾಗ, ಸಾಹಿಲ್ ಸೌರಭ್ ನ ಕೈಯನ್ನು ಹಿಡಿದನು ಮತ್ತು ಮುಸ್ಕಾನ್ ಅವನನ್ನು ಚಾಕುವಿನಿಂದ ಹಲವಾರು ಬಾರಿ ಇರಿದಳು. ಅದಾದ ನಂತರ ದೇಹವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ ತುಂಡುಗಳಾಗಿ ಕತ್ತರಿಸಲಾಯಿತು. ಸಾಕ್ಷ್ಯಗಳನ್ನು ತೆಗೆದುಹಾಕಲು ಕೊಠಡಿಯನ್ನು ಬ್ಲೀಚಿಂಗ್ ಪೌಡರ್ನಿಂದ ತೊಳೆಯಲಾಯಿತು. ಅದಾದ ನಂತರ ಮಾರ್ಚ್ 4 ರಂದು ಸಾಹಿಲ್ ಮಾರುಕಟ್ಟೆಯಿಂದ ಡ್ರಮ್ ಮತ್ತು ಸಿಮೆಂಟ್ ಖರೀದಿಸಿ, ಸೌರಭ್ ದೇಹದ ತುಂಡುಗಳನ್ನು ಡ್ರಮ್ನಲ್ಲಿ ತುಂಬಿಸಿದನು. ಮುಸ್ಕಾನ್ ಮತ್ತು ಸಾಹಿಲ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.












Click it and Unblock the Notifications