ಉತ್ತರ ಪ್ರದೇಶದಲ್ಲಿ ಹೆಂಡತಿಯ ಕೊಂದು ಮೃತದೇಹ ಕತ್ತರಿಸಿದ ಪಾಪಿ ಗಂಡ
ಲಕ್ನೋ, ನವೆಂಬರ್ 24: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭೀಕರ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದ ಸೀತಾಪುರದಲ್ಲಿ ಮಹಿಳೆಯ ಶವವನ್ನು ತುಂಡು ತುಂಡಾಗಿ ಕತ್ತರಿಸಿ ದೂರದ ಸ್ಥಳದಲ್ಲಿ ಎಸೆದಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಸೀತಾಪುರ ಪೊಲೀಸರ ಪ್ರಕಾರ, ಕಳೆದ ನವೆಂಬರ್ 8ರಂದು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರಾಮ್ಪುರ ಕಲಾನ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾರಿಹಾದಲ್ಲಿ ಜ್ಯೋತಿ ಅಲಿಯಾಸ್ ಸ್ನೇಹ ಎಂದು ಗುರುತಿಸಲಾದ ಮಹಿಳೆಯ ಶವವನ್ನು ಪತ್ತೆ ಮಾಡಲಾಯಿತು. ಈ ಪ್ರಕರಣ ಸಂಬಂಧ ದುರ್ಜನ್ ಪಾಸಿ ಮತ್ತು ಪಂಕಜ್ ಮೌರ್ಯ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದರು.
ಉತ್ತರ ಪ್ರದೇಶ: ಯುವತಿಯ ದೇಹವನ್ನು ಕತ್ತರಿಸಿ ಬಾವಿಗೆ ಬೀಸಾಕಿದ ಮಾಜಿ ಪ್ರಿಯಕರ
ಸೀತಾಪುರದ ರಾಮ್ಪುರ ಕಲಾನ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾರಿಹಾದಲ್ಲಿ ಮಹಿಳೆಯ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳಲ್ಲಿ ಒಬ್ಬನಾದ ಪಂಕಜ್ ಮೌರ್ಯನ ಮಹಿಳೆಯ ಪತಿ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಪಂಕಜ್ ಮೌರ್ಯ
ಸೀತಾಪುರ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಪಂಕಜ್ ಮೌರ್ಯ ತನ್ನ ಸಹಚರನೊಬ್ಬನ ಜೊತೆ ಸೇರಿ ಪತ್ನಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಪತ್ನಿ ಜ್ಯೋತಿ ಅಲಿಯಾಸ್ ಸ್ನೇಹಾ ನಿತ್ಯ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರು ಎಂದು ಆರೋಪಿಯು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.
"ಅವಳು ಹಲವಾರು ದಿನಗಳಿಂದ ಬೇರೆ ಯಾರದ್ದೋ ಮನೆಯಲ್ಲಿ ವಾಸವಾಗಿದ್ದಳು, ಇದರಿಂದ ಅವರ ಸಂಬಂಧವು ಹಳಸಿತ್ತು," ಎಂದು ಆರೋಪಿ ಪಂಕಜ್ ಹೇಳಿದ್ದಾರೆ. ಪಂಕಜ್ ಮೌರ್ಯ ಎಂದು ಗುರುತಿಸಲಾದ ಆರೋಪಿಯು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಜ್ಯೋತಿಯು ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಶಂಕಿಸಿದ್ದಾರೆ. ತದನಂತರ ಪತ್ನಿಯನ್ನು ಕೊಂದೇ ಬಿಡಬೇಕು ಎಂದು ನಿರ್ಧರಿಸಿದ್ದಾರೆ ಎಂದು ಸೀತಾಪುರ ಪೊಲೀಸರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಈ ಹಂತದಲ್ಲಿ ಅಪರಾಧದಲ್ಲಿ ಪಂಕಜ್ ಮಾರ್ಯಗೆ ಸಹಾಯ ಮಾಡಿದ್ದಕ್ಕಾಗಿ ಆತನ ಸ್ನೇಹಿತನನ್ನು ಸಹ ಬಂಧಿಸಲಾಗಿದೆ ಎಂದು ಸೀತಾಪುರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳು (SWAT) ಮತ್ತು ರಾಂಪುರ ಪೊಲೀಸರ ಜಂಟಿ ಪ್ರಯತ್ನದ ಮೂಲಕ ಯಶಸ್ವಿ ಕಣ್ಗಾವಲಿನ ನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಲಾಗಿದೆ.