US Venezuela Conflict: ಹಣ ಮತ್ತು ನಿಯಂತ್ರಣಕ್ಕಾಗಿ ನಡೆಯುತ್ತಿದೆ ಬಿಗ್ ಫೈಟ್: ರಂಗಸ್ವಾಮಿ ಮೂಕನಹಳ್ಳಿ
ಬೆಂಗಳೂರು: ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶವು ನೆನ್ನೆ ಶನಿವಾರ ವೆನೆಜುವೆಲಾ ದೇಶದ ಮೇಲೆ ಭೀಕರ ದಾಳಿ ನಡೆಸಿ ಅಧ್ಯಕ್ಷರನ್ನು ಬಂಧಿಸಿತು. ಜಾಗತಿಕವಾಗಿ ಈ ಸಂಘರ್ಷ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಹೀಗೆ ಮಿತ್ರ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಒಂದಷ್ಟು ಚರ್ಚೆಗಳು ಆಗುತ್ತಿವೆ. ಈ ವೆನೆಜುವೆಲಾ ಮೇಲಿನ ಯುಎಸ್ ದಾಳಿಯನ್ನು 'ಹಣ ಮತ್ತು ನಿಯಂತ್ರಣಕ್ಕಾಗಿ ನಡೆಯುತ್ತಿದೆ ಬಿಗ್ ಫೈಟ್!' ಎಂದು ಆರ್ಥಿಕ ತಜ್ಞ ರಂಸ್ವಾಮಿ ಮೂಕನಹಳ್ಳಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ವಿವರವಾದ ಮಾಹಿತಿ ಹಿಂಚಿಕೊಂಡಿದ್ದು, ಅವರ ಬರಹ ಮುಂದಿದೆ.
''ಸದ್ದಾಂ ಹುಸೇನ್ ಅವರ ಹೆಸರು ನೆನಪಿದೆಯಾ? ಅಥವಾ ಮರೆತು ಹೋಗಿದೆಯಾ? ಇರಾಕಿನ ಮೇಲೆ 2003 ರಲ್ಲಿ ಅಮೆರಿಕಾ ತನ್ನ ಮಿತ್ರ ದೇಶಗಳ ಜೊತೆ ಸೇರಿ ದಾಳಿ ಮಾಡಿ ಅದನ್ನು ಮುಂದುವರೆದ ದೇಶದಿಂದ ಶಿಲಾಯುಗಕ್ಕೆ ಕಳಿಸಿ ಬಿಟ್ಟಿತು. ಜಗತ್ತಿಗೆ ಹೇಳಿದ್ದು' ಇರಾಕಿನಲ್ಲಿ ಜಗತ್ತನ್ನು ನಾಶ ಪಡಿಸುವ ಅಸ್ತ್ರಗಳಿವೆ, (ವೆಪನ್ ಆಫ್ ಮಾಸ್ ಡಿಸ್ಟ್ರಕ್ಷನ್) ಹೀಗಾಗಿ ಇದು ಜಾಗತಿಕ ಶಾಂತಿಗೆ ಒಳ್ಳೆಯದಲ್ಲ' ಎನ್ನುವುದು. ಅಸಲಿ ಕಥೆ ಬೇರೆಯದಿತ್ತು.

ಸದ್ದಾಂ ತನ್ನ ಬಳಿಯಿದ್ದ ತೈಲವನ್ನು ಅಮೆರಿಕಾದ ಡಾಲರ್ ಮಧ್ಯಸ್ಥಿಕೆ ಇಲ್ಲದೆ ಲೋಕಲ್ ಕರೆನ್ಸಿಯಲ್ಲಿ ಮಾರಾಟ ಮಾಡಲು ಯೋಚಿಸಿದ್ದರು. ಅದನ್ನು ಜಗತ್ತಿನ ಮುಂದೆ ಹೇಳಿದ್ದರು ಕೂಡ! ಡಿ ಡಾಲರೈಸೇಷನ್ ಅಂದರೆ ಡಾಲರ್ ಹೊರತು ಪಡಿಸಿ ಟ್ರೇಡ್ ಮಾಡುವುದಾಗಿ ಯಾರೇ ಹೇಳಿದರೂ ಅವರನ್ನು ವ್ಯವಸ್ಥಿತವಾಗಿ ಅಮೇರಿಕಾ ಮಟ್ಟ ಹಾಕಿ ಬಿಡುತ್ತದೆ. ಏಕೆಂದರೆ ಜಗತ್ತಿನ ಮೇಲೆ ತನ್ನ ನಿಯಂತ್ರಣವನ್ನು ಖಾಯಂ ಆಗಿ ಉಳಿಸಿಕೊಳ್ಳಲು ಅದರ ಬಳಿ ಇರುವ ಅತ್ಯಂತ ಪ್ರಬಲ ಆಯುಧವೆಂದರೆ ಅದು ಡಾಲರ್. 2006ರ ವೇಳೆಗೆ ಸದ್ದಾಂ ಹುಸೇನ್ ಎನ್ನುವ ವ್ಯಕ್ತಿಯನ್ನು ಇಲ್ಲವಾಗಿಸಿ ಬಿಡುತ್ತಾರೆ.
ಹುಗೊ ಚಾವೇಸ್ ಯಾರೆಂದು ನಿಮಗೊತ್ತಾ?
ಹುಗೊ ಚಾವೇಸ್ ಹೆಸರು ಕೇಳಿದ್ದೀರಾ? ಅಥವಾ ಮರೆತಿದ್ದೀರಾ? 1999 ರಿಂದ 2013ರ ವರೆಗೆ 14 ವರ್ಷಗಳ ಕಾಲ ವೆನಿಜುವೆಲಾ ದೇಶವನ್ನು ಮುನ್ನೆಡಿಸಿದ ವ್ಯಕ್ತಿ. ನಿಮಗೆ ಗೊತ್ತಿರಲಿ ಎಂದು ಈ ಸಾಲುಗಳನ್ನು ಬರೆಯುತ್ತಿದ್ದೇನೆ. ಈತ ವೆನಿಜುವೆಲಾ ದೇಶದಲ್ಲಿ ಆ ಸಮಯದಲ್ಲಿ ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರಿಗೆ ಯಾವ ಔರ, ವರ್ಚಸ್ಸು, ಪ್ರಸಿದ್ಧಿ ಇದೆ , ಅದಕ್ಕಿಂತ ಒಂದೆರೆಡು ಪಟ್ಟು ಹೆಚ್ಚಾಗಿತ್ತು! ವೆನಿಜುವೆಲಾ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಆಯಿಲ್ ರಿಸೆರ್ವ್ ಹೊಂದಿರುವ ದೇಶವಾಗಿದೆ. ಹತ್ತಾರು ದಶಕ ಜಗತ್ತಿನ ತೈಲದ ಹಸಿವನ್ನು ಇದೊಂದು ದೇಶ ಪೂರ್ಣಗೊಳಿಸುವಷ್ಟು ತೈಲ ಇಲ್ಲಿದೆ. ಚಾವೇಸ್ ಕೂಡ ಸೇಮ್ ತಪ್ಪನ್ನು ಮಾಡಿದರು.
ತಪ್ಪು ಎಂದರೆ ಅದು ಯೂರೋಪಿಯನ್ನರ ಮತ್ತು ಅಮೆರಿಕನ್ನರ ಕಣ್ಣಲ್ಲಿ ತಪ್ಪು. ತನ್ನ ದೇಶದ ತೈಲ ಮಾರಿ ಆ ದೇಶವನ್ನು ಉನ್ನತಿಯ ಕಡೆಗೆ ಒಯ್ದಿದ್ದ, ಅಮೆರಿಕಾ ಮತ್ತು ಯೂರೋಪಿಯನ್ನರ ವಿರುದ್ಧ ಥೇಟ್ ನಮ್ಮ ಜೈ ಶಂಕರ್ ಸಾಹೇಬರ ರೀತಿಯಲ್ಲಿ ಲಾಜಿಕ್ ಹಾಕಿ ಮಾತಾಡುತ್ತಿದ್ದರು. ಅಮೆರಿಕನ್ನರ ಡಬ್ಬಲ್ ಸ್ಟ್ಯಾಂಡರ್ಡ್ ಓಪನ್ ಆಗಿ ಖಂಡಿಸುತ್ತಿದ್ದರು. ಇದಕ್ಕಿದ್ದಂತೆ ಸತ್ತರು. ಸಾವಿಗೆ ಕ್ಯಾನ್ಸರ್ ಕಾರಣ ಎಂದರು. ಬರಿಯುತ್ತಾ ಹೋದರೆ ಇದೆ ಒಂದು ದೊಡ್ಡ ಎಪಿಸೋಡ್ ಆಗುತ್ತೆ. ಅಮೇರಿಕಾ ಈ ರೀತಿ ತನ್ನ ವಿರುದ್ಧ ಧ್ವನಿ ಎತ್ತಿದ ಸೌತ್ ಅಮೆರಿಕನ್ ಲೀಡರ್ ಗಳನ್ನು ಸದ್ದಿಲ್ಲದೇ ಮುಗಿಸಿಬಿಡುತ್ತದೆ. ಇರಲಿ
ಇವತ್ತಿನ ದಿನದ ಘಟನೆಗೆ ಬರೋಣ..
ಹುಗೊ ಚಾವೇಸ್ ನ ನೆರಳು, ಆತನ ಬಲಗೈ ಬಂಟ ಎಂದು ಕರೆಸಿಕೊಂಡಿದ್ದ ನಿಕೋಲಸ್ ಮದುರೋ ಆ, ಚಾವೇಸ್ ಸಾವಿನ ನಂತರ ವೆನಿಜುವೆಲಾದ ಚುಕ್ಕಾಣಿ ಹಿಡಿಯುತ್ತಾರೆ. ಆದರೆ ಚಾವೇಸ್ ಮಟ್ಟದ ವರ್ಚಸ್ಸು, ಹೆಸರು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಬೇರೆ ಮಾತು. ಆತನ ವೈಯಕ್ತಿಕ ಕಥೆ ಇನ್ನೊಂದು ದಿನ ಬರೆಯುವೆ. ಈತನನ್ನು ಡಿ ಸ್ಟೆಬಿಲೈಸ್ ಮಾಡಲು ವಿರೋಧಪಕ್ಷದ ನಾಯಕರನ್ನು ಎತ್ತಿ ಕಟ್ಟಿ ಬಹಳಷ್ಟು ಆಂತರಿಕ ಗಲಭೆಗಳನ್ನು ಕೂಡ ಮಾಡಿಸಲಾಗುತ್ತದೆ.
ತೈಲ ಖರೀದಿಸದಂತೆ ತಾಕೀತು
ಅವೆಲ್ಲವನ್ನೂ ಆತ ಹೇಗೋ ಸಹಿಸಿಕೊಂಡು ಗೆಲ್ಲುತ್ತಾನೆ. ಅಮೆರಿಕಾ ಜಗತ್ತಿಗೆ ವೆನಿಜುವೆಲಾ ದಿಂದ ತೈಲವನ್ನು ಖರೀದಿ ಮಾಡಬೇಡಿ ಎಂದು ತಾಕೀತು ಮಾಡುತ್ತದೆ. ಅಷ್ಟೊಂದು ತೈಲ ಸಂಪತ್ತು ಒಡಲಿನಲ್ಲಿ ಇಟ್ಟು ಕೊಂಡು ಕೂಡ ವೆನಿಜುವೆಲಾ ಹಸಿವಿನಿಂದ ಬಳಲುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಇಡೀ ದೇಶ ಸರಿಸುಮಾರು ಹನ್ನೊಂದು ಕೇಜಿ ತೂಕ ಕಳೆದುಕೊಳ್ಳುವಷ್ಟು ! ಮೊನ್ನೆ ಟ್ರಂಪ್ ಎಲ್ಲಾ ಜಾಗತಿಕ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ. ಒಂದು ದೇಶದ ಒಳಗೆ ಅತಿಕ್ರಮವಾಗಿ ಪ್ರವೇಶಿಸಿ ನಿಕೋಲಸ್ ಮದುರೋ ಮತ್ತವನ ಹೆಂಡತಿಯನ್ನು ಕಿಡ್ನಾಪ್ ಮಾಡಿದ್ದಾರೆ. ಇದು ಜಗತ್ತಿನ ಎಲ್ಲಾ ಕಾನೂನು ಇತಿಮಿತಿಯನ್ನೂ ಮೀರಿದೆ. ಹೀಗಾಗಿ ಅಮೆರಿಕಾ ಓಪನ್ನಾಗಿ ಗೊಂಡಾಗಿರಿ ಇಳಿದಿದೆ. ಇದು ಜಗತ್ತಿನ ಬಲಶಾಲಿ ದೇಶಗಳಿಗೆ ಇದೆ ರೀತಿ ಮಾಡಲು ಲೈಸನ್ಸ್ ಮತ್ತು ಪ್ರಚೋದನೆ ಕೊಟ್ಟಂತೆ ಆಗಿದೆ.
ಪುಟಿನ್ ಈಗಾಗಲೇ ನ್ಯಾಟೋ ಗೆ ಸೊಪ್ಪು ಹಾಕದೆ ಉಕ್ರೈನ್ ಆಕ್ರಮಿಸಿರುವುದು ಗೊತ್ತೇ ಇದೆ. ನಾಳೆ ಆತ ಉಕ್ರೈನ್ ಅಧ್ಯಕ್ಷನನ್ನು ಥೇಟ್ ಇದೆ ಮಾದರಿಯಲ್ಲಿ ಕಿಡ್ನಾಪ್ ಮಾಡುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಉಳಿದಿದೆ?. ದಶಕಗಳಿಂದ ಜಗತ್ತಿನ AI ಮತ್ತು ಚಿಪ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತೈವಾನ್ ದೇಶವನ್ನು ಚೀನಾ ನಾಳೆ ಆಕ್ರಮಿಸುವುದಿಲ್ಲ ಎಂದು ಹೇಗೆ ಹೇಳುವುದು?. ಅದನ್ನು ತಡೆಯುವ ಶಕ್ತಿ ಯಾರಿಗಿದೆ? ಯಾವ ದೊಣ್ಣೆ ನಾಯಕನ ಅಪ್ಪಣೆ ಅದಕ್ಕೆ ಬೇಕಿದೆ? ಭಾರತ ಈಗಾಗಲೇ ತನ್ನ ವಿರುದ್ಧ ಮಾತಾಡಿದ, ತನ್ನ ದೇಶದ ಇಂಟರೆಸ್ಟ್ ವಿರುದ್ಧ ಕೆಲಸ ಮಾಡುವವರನ್ನು ಅವರ ದೇಶದಲ್ಲೇ ಮುಗಿಸುವ ಕೆಲಸ ಮಾಡುತ್ತಿದೆ. ಮುಸಕುಧಾರಿ ವ್ಯಕ್ತಿಗಳು ಮುನೀರ್ ಮತ್ತು ಯೂಸಫ್ ರನ್ನು ಹರಹರ ಎನ್ನಿಸುವುದು ಅದ್ಯಾವ ದೊಡ್ಡ ಕೆಲಸ? ರೀತಿ ನೀತಿ , ನಿಯಮಗಳ ಪ್ರಕಾರ ಹೋದರೆ ಇವೆಲ್ಲವೂ ದೊಡ್ಡ ಕೆಲಸ. ಆದರೆ ಅಮೆರಿಕಾ ಎಲ್ಲಾ ನಿಯಮ ಮುರಿದಿದೆ. ಇದನ್ನು ಈಗ ಜಗತ್ತಿನ ಇತರ ಬಲಶಾಲಿ ದೇಶಗಳು ಹೇಗೆ ಬಳಸಿಕೊಳ್ಳುತ್ತವೆ ಎನ್ನವುದನ್ನು ನೋಡಬೇಕಿದೆ.
ಡಿಸೆಂಬರ್ ತಿಂಗಳ ಕೊನೆಯಿಂದ ಇರಾನಿನಲ್ಲಿ ಅಶಾಂತಿ ಶುರುವಾಗಿದೆ. ಜಗತ್ತಿನ ಮೂರನೇ ಅತಿದೊಡ್ಡ ತೈಲ ಸಂಗ್ರಹಣೆಯನ್ನು ಹೊಂದಿರುವ ಇರಾನ್ ಕೂಡ ಡಾಲರ್ ಹೊರತುಪಡಿಸಿ ತೈಲ ಮಾರಾಟ ಮಾಡಲು ಶುರು ಮಾಡಿತ್ತು. ಅದು ಎಂದಿಗೂ ಅಮೇರಿಕಾ ಹೇಳಿದ್ದಕ್ಕೆಲ್ಲಾ ತಲೆ ಆಡಿಸಿಲ್ಲ. ಫಲಿತಾಂಶ ಆ ದೇಶ ಇನ್ನೇನು ನೆಲ ಕಚ್ಚಲಿದೆ.
ವೆನಿಜುವೆಲಾ ರೀತಿ ಇರಾನ್ ಧಕ್ಕದು
ವೆನಿಜುವೆಲಾ ಮತ್ತು ಇರಾನಿನ ತೈಲದ ಮೇಲೆ ಅಮೇರಿಕಾ ನಿಯಂತ್ರಣ ಹೊಂದಿದರೆ ವರ್ಲ್ಡ್ ಡೈನಾಮಿಕ್ಸ್ ಮತ್ತೆ ಬದಲಾಗುತ್ತದೆ. ವೆನಿಜುವೆಲಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಷ್ಟು ಸುಲಭವಾಗಿ ಇರಾನ್ ದಕ್ಕುವುದಿಲ್ಲ. ಅದು ಬೇರೆ ಮಾತು. ಆದರೂ ವೆನಿಜುವೆಲಾ ತೈಲವನ್ನು ಅಮೇರಿಕಾ ಮಾರಾಟ ಮಾಡಲು ನಿಂತರೆ ಭಾರತಕ್ಕೆ ಯೂರೋಪಿಯನ್ ಯೂನಿಯನ್ ಕೈ ತಪ್ಪುತ್ತದೆ. ನಿನ್ನೆ ಟ್ರಂಪ್ ಅದಾಗಲೇ ತನ್ನ ದೇಶದ ವ್ಯಾಪಾರಿಗಳಿಗೆ ವೆನಿಜುವೆಲಾದಲ್ಲಿ ಹೂಡಿಕೆ ಮಾಡಿ ಎನ್ನುವ ಕರೆಯನ್ನು ನೀಡಿದ್ದಾರೆ.
ರಷ್ಯಾ, ಭಾರತ, ಚೀನಾ ದೇಶಗಳು ಮಾತ್ರ ಇವತ್ತಿಗೆ ಅಮೆರಿಕಾ ವಿರುದ್ಧ ಮಾತಾಡಿ ಕೂಡ ಅರಗಿಸಿಕೊಳ್ಳುವ ಸ್ಥಿತಿಯಲ್ಲಿವೆ. ಉಳಿದಂತೆ ಯೂರೋಪಿಯನ್ ಯೂನಿಯನ್ ಮತ್ತು ಇಸ್ರೇಲ್ ಮತ್ತು ಜಪಾನ್ ಅಮೆರಿಕಾ ವಿರುದ್ಧ ಎಂದಿಗೂ ಹೋಗುವುದಿಲ್ಲ. ಹೀಗಾಗಿ ಚೀನಾ, ರಷ್ಯಾ ಮತ್ತು ಭಾರತ ಅಮೆರಿಕಾ ಮುರಿದಿರುವ ಈ ಕಾನೂನನ್ನು ಹೇಗೆ ಬಳಸಿಕೊಳ್ಳುತ್ತವೆ ಎನ್ನವುದರ ಮೇಲೆ ಜಾಗತಿಕ ವಿತ್ತ ಜಗತ್ತು ಇನ್ನೊಂದು ಮಗ್ಗುಲು ಬದಲಿಸುತ್ತದೆ. ಕೊನೆಗೂ ಎಲ್ಲವೂ ಬಂದು ನಿಲ್ಲುವುದು ಹಣ ಮತ್ತು ನಿಯಂತ್ರಣ ಎನ್ನುವ ಎರಡು ಅಂಶಗಳಲ್ಲಿ ಎನ್ನವುದನ್ನು ನಾವು ಮರೆಯಬಾರದು.
ಜಗತ್ತಿನಲ್ಲಿ ಅತ್ಯಂತ ಕೆಟ್ಟ ಪ್ರಾಣಿ ಯಾರಾದರೂ ಇದ್ದರೆ ಅದು ವೈಟ್ ಆಲ್ಫಾ ಮೇಲ್. ಜಗತ್ತಿನ ಇವತ್ತಿನ ಎಲ್ಲಾ ಸಂಕಷ್ಟಕ್ಕೂ ಅವರೇ ಕಾರಣ. ಅವರಿಗೆ ಸುಖವಿರಬೇಕು. ಅವರಿಗೆ ಚೂರು ಕಷ್ಟ ಬಂದರೂ ಸಾಕು , ಅವರು ಜಗತ್ತಿನ ಶಾಂತಿಯನ್ನು ಕದಡಿ ಬಿಡುತ್ತಾರೆ. ನಮಗೆ ಇದ್ಯಾವುದೂ ಬೇಕಿಲ್ಲ. ಅವರು ಸೃಷ್ಟಿಸುವ ನರೇಟಿವ್ ನಂಬಿಕೊಂಡು ಆರಾಮಾಗಿ ಇರುತ್ತೇವೆ. ಅಷ್ಟೆಲ್ಲಾ ಯಾಕೆ ನಮ್ಮ ಒಳ ಜಗಳಗಳಿಂದ ಪುರುಸೊತ್ತು ಎಲ್ಲಿ ಸಿಗುತ್ತೆ ಅಲ್ವಾ? ರಾಮಚಂದ್ರ ಮಠ, ಶೃಂಗೇರಿ ಮಠ ಹೀಗೆ ನಮ್ಮ ನಮ್ಮ ಮಠಗಳ ಬಗ್ಗೆ ನಾವೇ ಬಡಿದಾಡಿ ಕೊಳ್ಳುತ್ತೇವೆ. ಅಷ್ಟೇಕೆ, ಕೊನೆಗೆ ಯಾವುದೇ ಕಾರಣವಿಲ್ಲ ಎಂದರೆ ನಮ್ಮ ಎಡಗೈ ಮೇಲೆ ಬಲಗೈ ಕಡೆಯಿಂದ ಯುದ್ಧ ಸಾರಿಸುವ ಬುದ್ದಿವಂತರು ನಾವು!
ಟ್ರಂಪ್ ಎನ್ನುವ ಜಾಗತಿಕ ಗೂಂಡಾ ಎಲ್ಲಾ ಜಾಗತಿಕ ನಿಯಮಗಳನ್ನು ಮುರಿದಿದ್ದಾರೆ. ಒಟ್ಟಿನಲ್ಲಿ ಇನ್ನೊಂದೆರೆಡು ವರ್ಷ ಜಾಗತಿಕ ಶಾಂತಿ ಮರೀಚಿಕೆ'' ಎಂದು ಅವರು ಬರೆದುಕೊಂಡು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications