ಆಹಾರದಲ್ಲಿ ಮೂತ್ರ ಮಿಶ್ರಣ, ಉಗಿಯುವುದು ಬಂದ್: UP ಯೋಗಿ ಆದಿತ್ಯನಾಥ್ ತಂದ್ರು ಟಫ್ ರೂಲ್ಸ್
ನವದೆಹಲಿ, ಸೆಪ್ಟಂಬರ್ 24: ಪಾನಿಪುರಿ ಮಾರಾಟ, ಹೋಟೆಲ್, ರೆಸ್ಟೋರೆಂಟ್ ಇನ್ನಿತರ ಕಡೆಗಳಲ್ಲಿ ತಿನ್ನುವ ಆಹಾರ ಪದಾರ್ಥಗಳಲ್ಲಿ ಉಗಿಯುವುದು, ಮೂತ್ರ ಮಿಶ್ರಣ ಮಾಡುವುದನ್ನು ನೀವು ನೋಡಿಯೇ ಇರುತ್ತೀರಿ. ಇಂತಹ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಕಾರಣ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದೆ.
ಹೌದು, ರಾಜ್ಯದಲ್ಲಿ ದುರುದ್ದೇಶದಿಂದಲೇ ತಿನ್ನುವ ಆಹಾರ ಪದಾರ್ಥಗಳಲ್ಲಿ ಉಗುಳುವುದು ಮತ್ತು ಮೂತ್ರ ಮಿಶ್ರಣ ಮಾಡುವ ಘಟನೆಗಳು ಹೆಚ್ಚಾಗಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎಲ್ಲ ಆಹಾರ ಕೇಂದ್ರಗಳಲ್ಲಿ (ಹೋಟೆಲ್, ರೆಸ್ಟೋರೆಂಟ್ etc) ನಿರ್ವಾಹಕರು, ಮಾಲೀಕರು ಹಾಗೂ ವ್ಯವಸ್ಥಾಪಕರ ಹೆಸರು, ವಿಳಾಸವನ್ನು ಕಡ್ಡಾಯ ನಮೂದಿಸಬೇಕು. ಅದನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು ಎಂಬ ಹೊಸ ರೂಲ್ಸ್ ಅನ್ನು ಅನುಷ್ಠಾನಕ್ಕೆ ತಂದಿದೆ.

ಬಾಣಸಿಗರಿಗೆ, ಕೆಲಸಗಾರರಿಗೆ ರೂಲ್ಸ್ ಏನು?
ಇದಷ್ಟೇ ಅಲ್ಲದೇ ಅಡುಗೆ ಮಾಡುವ ಬಾಣಸಿಗರು ಮತ್ತು ಮಾಣಿಗಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈಗವಸು ಧರಿಸಬೇಕು. ಇನ್ನೂ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಈ ನಿಯಮ ಪಾಲಿಸದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಖಡಕ್ ನಿರ್ದೇಶನ ನೀಡಿದ್ದಾರೆ.
ಆಹಾರದಲ್ಲಿ ಮಾನವ ಎಂಜಲು ಮಿಶ್ರಣ ಬೆನ್ನಲ್ಲೆ ಕ್ರಮ
ರಾಜಧಾನಿ ಲಕ್ನೋದಲ್ಲಿ ಸೆ. 24ರಂದು ಜರುಗಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ಆದೇಶ ಹೊರಡಿಸಿದರು. ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಮಾನವ ಎಂಜಲು, ಇತರ ತ್ಯಾಜ್ಯ ಮಿಶ್ರಣ ಸಂಗತಿಗಳು ತೀರಾ ಅಸಯ್ಯ ಹುಟ್ಟಿಸುವಂತಿವೆ. ಆಹಾರ ಪದಾರ್ಥಗಳಲ್ಲಿ ಮಾನವನ ಉಗಿತ, ಇನ್ನಿತರ ತ್ಯಾಜ್ಯ ಕಲಬೆರಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿ ಸೂಚನೆ ನೀಡಿದ್ದಾರೆ.
ಇಲ್ಲಿನ ಸಹರಾನ್ಪುರ ಜಿಲ್ಲೆಯ ಉಪಾಹಾರ ಗೃಹದಲ್ಲಿ ಯುವ ಬಾಣಸಿಗರೊಬ್ಬರು ರೊಟ್ಟಿ ತಯಾರಿಸುವ ಸಂದರ್ಭದಲ್ಲಿ ಅದರಲ್ಲಿ ಉಗಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೇ ತಿಂಗಳು ಸೆಪ್ಟಂಬರ್ 12ರಂದು ವೈರಲ್ ಆದ ಈ ವಿಡಿಯೋಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಅಡುಗೆ ಕೆಲಸಗಾರನನ್ನು ಬಂಧಿಸಲಾಗಿತ್ತು.
ಜ್ಯೂಸ್ನಲ್ಲಿ ಮೂತ್ರ ಬೆರೆಸಿದ್ದ ಕಿಡಿಗೇಡಿ
ಇದು ಸಾಲದೆಂಬತೆ ಇಲ್ಲಿನ ಗಾಜಿಯಾಬಾದ್ ಜಿಲ್ಲೆಯ ಜ್ಯೂಸ್ ಅಂಗಡಿ ಕೆಲಸಗಾರ ತನ್ನ ಗ್ರಾಹಕರಿಗೆ ಮೂತ್ರ ಬೆರೆಸಿದ ಹಣ್ಣಿನ ಜ್ಯೂಸ್ ಅನ್ನು ನೀಡಿರುವುದು ಗೊತ್ತಾಗಿತ್ತು. ಹೀಗಾಗಿ ಆತನನ್ನು ಪೊಲೀಸರು ಬಂಧಿಸಿದ್ದರು. ಕಳೆದ ಜೂನ್ ನಲ್ಲಿ ನೋಯ್ಡಾದಲ್ಲಿ ಇಬ್ಬರು ವ್ಯಕ್ತಿಗಳು ತಿನ್ನುವ ಪದಾರ್ಥದಲ್ಲಿ ಉಗಿದಿದ್ದು ಗೊತ್ತಾಗಿ ಪೊಲೀಸರು ಬಂಧಿಸಿ ಬೆಂಡೆತ್ತಿದ್ದರು. ಇದೆಲ್ಲ ಅಹಸ್ಯಕರ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಬಿಜೆಪಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿ ಆದೇಶಿಸಿದೆ.
ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದ ಈ ನಿಯಮಗಳು ಇಲ್ಲಿನ ಧಾಬಾ, ರೆಸ್ಟೋರೆಂಟ್ಗಳು ಹಾಗೂ ಹೋಟೆಲ್ ಸೇರಿದಂತೆ ಇನ್ನಿತರ ಆಹಾರ ಕೇಂದ್ರಗಳಿಗೆ ಅನ್ವಯಿಸುತ್ತದೆ. ಈಗಾಗಲೇ ತಪ್ಪು ಮಾಡಿದ ಹೋಟೆಲ್ ಇನ್ನಿತರ ಆಹಾರ ಕೇಂದ್ರಗಳ ಮಾಲೀಕರು, ಮಾರಾಟಗಾರರ ವಿರುದ್ಧ ತನಿಖೆ ಮುಂದುವರೆಸಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications