ಉತ್ತಮ ಸಾಧನೆ ಮಾಡಿದ ಪಾಲಿಕೆಗಳಿಗೆ ಬಹುಮಾನ ಘೋಷಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ, ಜೂನ್ 2: ರಾಜ್ಯದಲ್ಲಿನ ನಾಗರಿಕ ಸಂಸ್ಥೆಗಳ ಕೆಲಸವನ್ನು ಇನ್ನಷ್ಟು ಸುಧಾರಿಸಲು ಪರಸ್ಪರ ಸ್ಪರ್ಧೆಯನ್ನು ಪ್ರೋತ್ಸಾಹಿಸಬೇಕು. ಉತ್ತಮವಾಗಿ ಕಾರ್ಯನಿರ್ವಹಿಸುವ ಪುರಸಭೆಯ ಸಂಸ್ಥೆಗಳಿಗೆ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದರು.
ಗುರುವಾರ ನೂತನವಾಗಿ ಆಯ್ಕೆಯಾದ ಮಹಾನಗರ ಪಾಲಿಕೆಗಳ ಮೇಯರ್ಗಳು, ಪುರಸಭೆ ಮತ್ತು ನಗರ ಪಂಚಾಯತ್ಗಳ ಅಧ್ಯಕ್ಷರಿಗೆ ಒಂದು ದಿನದ ಓರಿಯಂಟೇಶನ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಐದು ನಿಯತಾಂಕಗಳಾದ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆಗಳು, ಸುರಕ್ಷಿತ ನಗರ ಮತ್ತು ಸ್ವಾವಲಂಬನೆ ಕುರಿತು ನಾಗರಿಕ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ನಿರ್ಧರಿಸಲು ಸೂಚಿಸಲಾಯಿತು.

ಪ್ಯಾರಾಮೀಟರ್ಗಳನ್ನು ಪೂರೈಸುವ ಮತ್ತು ಉತ್ತಮ ಕಾರ್ಯನಿರ್ವಹಿಸುವ ನಗರಪಾಲಿಕೆಗಳು, ಪುರಸಭೆಗಳು ಮತ್ತು ನಗರ ಪಂಚಾಯತ್ಗಳಿಗೆ ಬಹುಮಾನ ನೀಡಲಾಗುವುದು. ಈ ಐದು ನಿಯತಾಂಕಗಳ ಆಧಾರದ ಮೇಲೆ ತನ್ನ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯುವ ನಗರ ಪಂಚಾಯತ್ಗೆ 1 ಕೋಟಿ ರೂ. ವಿಭಾಗೀಯ ಮಟ್ಟಕ್ಕೆ 2 ಕೋಟಿ ರೂ., ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಮಹಾನಗರ ಪಾಲಿಕೆಗೆ 10 ಕೋಟಿ ರೂ. ಸಿಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅನೇಕ ಜನರು ನ್ಯಾಯಾಲಯಗಳನ್ನು ಸಂಪರ್ಕಿಸುವ ಮೂಲಕ ಮುನ್ಸಿಪಲ್ ಚುನಾವಣೆಗಳನ್ನು ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರತಿಪಾದಿಸಿದ ಆದಿತ್ಯನಾಥ್, ನಮ್ಮ ನಗರಾಭಿವೃದ್ಧಿ ತಂಡವು ದೃಢವಾಗಿ ಉಳಿದಿದೆ ಮತ್ತು ಪ್ರತಿ ಸಮಸ್ಯೆ ಉದ್ಭವಿಸಿದಾಗ ತಕ್ಷಣವೇ ವ್ಯವಹರಿಸಿದೆ. ಒಬಿಸಿ ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಮುನ್ಸಿಪಲ್ ಚುನಾವಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಜನಪ್ರತಿನಿಧಿಗಳಾಗಿ ನಗರ ಜೀವನ ಸುಧಾರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಮುಖ್ಯಮಂತ್ರಿಗಳು ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ತಿಳಿಸಿದರು. ಸ್ವಚ್ಛತೆ ಕಾಪಾಡಲು ಒತ್ತು ನೀಡಿದ ಅವರು, ನಮ್ಮ ಮನೆಯನ್ನು ಹೇಗೆ ಅಚ್ಚುಕಟ್ಟಾಗಿ ಇಡುತ್ತೇವೆಯೋ ಅದೇ ರೀತಿ ನಮ್ಮ ನಗರವನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿಯಾಗಿದೆ. ಸ್ವಚ್ಛತೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮೊಹಲ್ಲಾ ಸ್ವಚ್ಛತಾ ಸಮಿತಿಗಳನ್ನು ರಚಿಸಬೇಕು ಎಂದು ಆದಿತ್ಯನಾಥ್ ಹೇಳಿದರು.












Click it and Unblock the Notifications