ಬಿಜೆಪಿ ಶಾಸಕನ ವಿರುದ್ಧ ಕೇಳಿಬಂದ ಉನ್ನಾವೋ ಅತ್ಯಾಚಾರ ಪ್ರಕರಣ ಸಿಬಿಐಗೆ
ಲಕ್ನೋ, ಏಪ್ರಿಲ್ 10: ಉತ್ತರ ಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್ ಅವರ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ(ಕೇಂದ್ರ ತನಿಖಾ ದಳ)ಗೆ ವಹಿಸಿದೆ.
ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳದ ಸೂಚನೆ ಮೇರೆಗೆ ಶಾಸಕರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.
ಕಳೆದ ವರ್ಷ ಜೂನ್ ನಲ್ಲಿ ಉನ್ನಾವೋ ಪ್ರದೇಶದಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ಕುಲ್ದೀಪ್ ಸಿಂಗ್ ಸೆನ್ಗಾರ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ತಡವಾಗಿ ಈ ಕೃತ್ಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಕುಟುಂಬಸ್ಥರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದೆದುರು ಆತ್ಮಹತ್ಯೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ಥೆಯ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಸಂತ್ರಸ್ಥೆಯ ತಂದೆ ಪೊಲಿಸ್ ಕಸ್ಟಡಿಯಲ್ಲಿದ್ದಾಗಲೇ ಸಾವಿಗೀಡಾಗಿದ್ದರು.

ಇವರ ಸಾವಿಗೆ ಆಘಾತ ಮತ್ತು ಸೆಪ್ಟಿಸೆಮಿಯಾ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿದ್ದರೂ, ಈ ಕುರಿತೂ ತನಿಖೆ ನದೆಯುವ ಅಗತ್ಯವಿದೆ ಎಂದು ಕುಟುಂಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕನ ಮೇಲೆ ಈ ಆರೊಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಪಾರದರ್ಶಕ ಆಡಳಿತ ನೀಡುವ ಸಲುವಾಗಿ ಈ ಪ್ರಕರಣವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಸಿಬಿಐ ಗೆ ವಹಿಸಿದೆ.
ಇದೇ ಸಂದರ್ಭದಲ್ಲಿ ನಿನ್ನೆ(ಏ.12) ಸೆನ್ಗಾರ್ ಅವರು ಲಕ್ನೋದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನಿವಾಸಕ್ಕೆ ಭೇಟಿ ನೀಡಿದ್ದು ಮತ್ತಷ್ಟು ಅನುಮಾನ ಹುಟ್ಟುಹಾಕಿದೆ. "ನಾನು ಎಲ್ಲಿಯೂ ಓಡಿಹೋಗಿಲ್ಲ. ಇಲ್ಲೇ ಇದ್ದೇನೆ ಎಂಬುದನ್ನು ಮಾಧ್ಯಮಗಳಿಗೆ ತೋರಿಸಲು ಇಲ್ಲಿಗೆ ಬಂದಿದ್ದೇನೆ. ನಾನು ಲಕ್ನೋದಿಂದ ಎಲ್ಲಿಯೂ ಆಚೆ ಹೋಗಿಲ್ಲ. ಪ್ರಕರಣ ಎದುರಿಸುತ್ತೇನೆ" ಎಂದು ಸೆನ್ಗಾರ್ ಹೇಳಿಕೆ ನೀದಿದ್ದಾರೆ.












Click it and Unblock the Notifications