ದೇಶದ ಕೃಷಿ ರಫ್ತು ಕ್ಷೇತ್ರಕ್ಕೆ ಬಲ ತುಂಬಲು ಮಹತ್ವದ ಕ್ರಮ!
ನವದೆಹಲಿ: ದೇಶದಲ್ಲಿ ರಫ್ತು ಕ್ಷೇತ್ರ ಬಲಪಡಿಸಿ & ವಿವಿಧ ರಾಜ್ಯಗಳಲ್ಲಿ ಇರುವ ಪ್ರಮುಖ ಕೃಷಿ ರಫ್ತು ಸಂಸ್ಥೆಗಳನ್ನ ಒಂದೇ ಸೂರಿನ ಅಡಿ ತರಲು ಕೇಂದ್ರ ಸಹಕಾರ ಇಲಾಖೆ ಇದೀಗ ಶ್ರಮಿಸುತ್ತಿದೆ. ಈ ಕಾರ್ಯಕ್ರಮದ ಭಾಗವಾಗಿ ಅಕ್ಟೋಬರ್ 23 ಕ್ಕೆ ಒಂದು ದಿನದ 'ಸಹಕಾರಿ ರಫ್ತು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ' ಆಯೋಜಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ.
ಭಾರತ ಇದೀಗ ಜಗತ್ತಿನ ಬಲಶಾಲಿ ರಫ್ತು ದೇಶವಾಗಿ ಹೊರಹೊಮ್ಮುತ್ತಿದ್ದು, ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ರಫ್ತು ಮಾಡುತ್ತಿದೆ. ಅದರಲ್ಲೂ ಭಾರತದ ಕೃಷಿ ಉತ್ಪನ್ನಗಳ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ರಫ್ತು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲು ಸಹಕಾರ ಸಂಸ್ಥೆಗಳ ನಡುವೆ ಸಂಪರ್ಕ ಬೆಸೆಯುವುದು, ಭಾರತೀಯ ಕೃಷಿ ರಫ್ತು ಸಾಮರ್ಥ್ಯ ಮತ್ತು ಸಹಕಾರ ಸಂಸ್ಥೆಗಳಿಗೆ ಅವಕಾಶ ಸೇರಿದಂತೆ ಹಲವು ವಿಚಾರದ ಬಗ್ಗೆ ಚಿಂತನೆ ನಡೆಸಲು ರಾಷ್ಟ್ರೀಯ ಸಹಕಾರಿ ಎಕ್ಸ್ಪೋರ್ಟ್ಸ್ ಲಿಮಿಟೆಡ್ (ಎನ್ಸಿಇಎಲ್) ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕೇಂದ್ರ ಸಚಿವರಿಂದ ಲೋಗೋ ರಿಲೀಸ್
ಅಕ್ಟೋಬರ್ 23ರಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ & ಸಹಕಾರ ಸಚಿವ ಅಮಿತ್ ಶಾ ಅವರ ಜೊತೆಗೆ ಕೇಂದ್ರ ವಾಣಿಜ್ಯ & ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಕೂಡ ಭಾಗವಹಿಸಲಿದ್ದಾರೆ. ಅಮಿತ್ ಶಾ ಅವರು ಸಭೆ ಉದ್ದೇಶಿಸಿ ಮಾತನಾಡಿ, ಎನ್ಸಿಇಎಲ್ (NCEL) ಲೋಗೋ, ವೆಬ್ಸೈಟ್ & ಕಿರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಾಗೇ ಎನ್ಸಿಇಎಲ್ ಸದಸ್ಯರಿಗೆ ಸದಸ್ಯತ್ವ ಪ್ರಮಾಣ ಪತ್ರ ವಿತರಿಸುತ್ತಾರೆ ಎಂದು ಕೇಂದ್ರ ಸಹಕಾರ ಸಚಿವಾಲಯ ಮಾಹಿತಿ ನೀಡಿದೆ.
ಸಹಕಾರ ಕ್ಷೇತ್ರಕ್ಕೆ ಆನೆ ಬಲ!
ಇನ್ನು ದೇಶದ ವಿವಿಧ ರಾಜ್ಯಗಳ ಮಧ್ಯೆ ರಫ್ತು ಕ್ಷೇತ್ರದಲ್ಲಿ ಸಂಪರ್ಕ ಮೂಡಿಸಿ, ಸಹಕಾರ ವಲಯದಿಂದ ರಫ್ತು ಮಾಡಲು ಒಂದು ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಬಹು-ರಾಜ್ಯ ಸಹಕಾರ ಸಂಘ ಸ್ಥಾಪಿಸುವ ಅಗತ್ಯಕ್ಕೆ ಒತ್ತು ನೀಡಿದ ನಂತರ NCEL ಅಸ್ತಿತ್ವಕ್ಕೆ ಬಂದಿದೆ. ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರ ಚಿಂತನೆಯ ಫಲವಾಗಿ ಇದೀಗ ದೇಶದ ರಫ್ತು ಕ್ಷೇತ್ರ ಬಲಪಡಿಸಲು ಒಂದು ಗಟ್ಟಿಯಾದ ಸಂಸ್ಥೆ ನಿರ್ಮಾಣವಾಗಿದೆ. ಇನ್ನು ಸಹಕಾರ ಸಚಿವಾಲಯ ಕಳೆದ 27 ತಿಂಗಳಲ್ಲಿ ದೇಶದಲ್ಲಿ ಸಹಕಾರ ಕ್ಷೇತ್ರಗಳನ್ನ ಬಲಪಡಿಸಲು 54 ಅಂಶಗಳ ಗುರಿಯಾಗಿ ಇಟ್ಟುಕೊಂಡಿತ್ತು.

ಈಗ ಸಹಕಾರ ಕ್ಷೇತ್ರದಲ್ಲಿ, ದೇಶದ ರಫ್ತು ಪ್ರಮಾಣವನ್ನ ಹೆಚ್ಚಿಸಲು ಈ ಸಂಸ್ಥೆ ಸಾಕಷ್ಟು ಸಹಾಯಕವಾಗಿದೆ. ಹೀಗೆ ರಫ್ತು ಉತ್ತೇಜಿಸಲು ರಾಷ್ಟ್ರೀಯ ಮಟ್ಟದ ಸಹಕಾರ ಸಂಸ್ಥೆ ಸ್ಥಾಪನೆ ಉಪಕ್ರಮಗಳಲ್ಲಿ ಒಂದಾಗಿದೆ. ರಫ್ತಿನಲ್ಲಿ ಆಸಕ್ತಿ ಹೊಂದಿರುವ ಪ್ರಾಥಮಿಕ ಹಂತದಿಂದ ಅಪೆಕ್ಸ್ ತನಕ ಎಲ್ಲಾ ಸಹಕಾರ ಸಂಘಗಳು 2,000 ಕೋಟಿ ರೂಪಾಯಿ ಅಧಿಕೃತ ಷೇರು ಬಂಡವಾಳ ಹೊಂದಿರುವ ಎನ್ಸಿಇಎಲ್ ಸದಸ್ಯರಾಗಲು ಅರ್ಹವಾಗಿವೆ ಎಂದು ಮಾಹಿತಿ ಕೂಡ ನೀಡಲಾಗಿದೆ.
ಇನ್ನು ಸಹಕಾರ ರಫ್ತು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎನ್ಸಿಇಎಲ್ನ ಸಹಕಾರಿ ಸದಸ್ಯರು, ರಾಷ್ಟ್ರೀಯ ಸಹಕಾರಿ ಒಕ್ಕೂಟಗಳು ಸೇರಿದಂತೆ ಹಾಗೂ ವಿವಿಧ ಸಹಕಾರಿ ಕ್ಷೇತ್ರಗಳ ಪ್ರತಿನಿಧಿಗಳು, ವಿವಿಧ ದೇಶಗಳ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಮತ್ತು ಕೇಂದ್ರ & ರಾಜ್ಯ ಸರ್ಕಾರಿ ಅಧಿಕಾರಿಗಳು ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಅಕ್ಟೋಬರ್ 23ರಂದು ನಡೆಯುವ ಕಾರ್ಯಕ್ರಮ ಇದೀಗ ಸಾಕಷ್ಟು ಗಮನ ಸೆಳೆದಿದೆ. ಕಾರ್ಯಕ್ರಮಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಂಡಿದ್ದು, ಅಕ್ಟೋಬರ್ 23ರಂದು ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಕೂಡ ಸಾಥ್ ನೀಡಲಿದ್ದಾರೆ.












Click it and Unblock the Notifications