Puja Khedkar: ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಯಾರು? ಏನಿದು ವಿವಾದ
ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಈಗ ವಿವಾದಕ್ಕೆ ಕಾರಣವಾಗಿದೆ.
ಹಿರಿಯ ಅಧಿಕಾರಿಗಳಿಗೆ ಮೀಸಲಾಗಿರುವ ಸವಲತ್ತುಗಳಾದ ಸೈರನ್ ಮತ್ತು ವಿಐಪಿ ನಂಬರ್ ಪ್ಲೇಟ್ ಅನ್ನು ಖಾಸಗಿ ಆಡಿ ಕಾರಿಗೆ ಬಳಕೆ ಮಾಡುತ್ತಿರುವುದು ಗೊತ್ತಾದ ಬಳಿಕ ಆಕೆಯನ್ನು ಪುಣೆಯಿಂದ ವಾಶಿಮ್ಗೆ ವರ್ಗಾವಣೆ ಮಾಡಲಾಗಿದೆ.

ಯಾರು ಈ ಪೂಜಾ ಖೇಡ್ಕರ್?
ಪೂಜಾ ಖೇಡ್ಕರ್ ಅವರು 2023-ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿ (AIR) ಯಲ್ಲಿ 841 ನೇ ರ್ಯಾಂಕ್ ಗಳಿಸಿದ್ದಾರೆ.
ಪೂಜಾ ಖೇಡ್ಕರ್ ಅವರು ಸರ್ಕಾರಿ ಅಧಿಕಾರಿಗಳ ಕುಟುಂಬದಿಂದ ಬಂದವರು, ಅವರ ತಂದೆ ದಿಲೀಪ್ ಖೇಡ್ಕರ್ ಅವರು ನಿವೃತ್ತ ಆಡಳಿತ ಅಧಿಕಾರಿಯಾಗಿದ್ದಾರೆ. ಆದರೂ ಪೂಜಾ ಖೇಡ್ಕರ್ ಮಾಡಿರುವ ತಪ್ಪುಗಳು ಆಕೆಯನ್ನು ವಿವಾದದ ಕೇಂದ್ರ ಬಿಂದುವನ್ನಾಗಿಸಿವೆ.
ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿನ ಮೇಲೆ 'ಗವರ್ನಮೆಂಟ್ ಆಫ್ ಮಹಾರಾಷ್ಟ್ರ' ಸ್ಟಿಕ್ಕರ್ ಮತ್ತು ಸೈರನ್ ಅನ್ನು ಕೂಡ ಅಳವಡಿಸಿದ್ದರು. ಅಸಿಸ್ಟೆಂಟ್ ಕಲೆಕ್ಟರ್ ಆಗಿ ಸೇರುವ ಮುನ್ನವೇ ವಿಐಪಿ ನಂಬರ್ ಪ್ಲೇಟ್ ಇರುವ ಅಧಿಕೃತ ಕಾರು, ವಸತಿ, ಸಮರ್ಪಕ ಸಿಬ್ಬಂದಿ ಇರುವ ಅಧಿಕೃತ ಚೇಂಬರ್, ಕಾನ್ ಸ್ಟೆಬಲ್ ಬೇಕು ಎಂದು ಬೇಡಿಕೆ ಇಟ್ಟಿದ್ದರು. ತರಬೇತಿ ಪಡೆಯುವ ಅಧಿಕಾರಿಗೆ ಈ ಸವಲತ್ತುಗಳು ಸಿಗುವುದಿಲ್ಲ.
ಮಗಳ ದರ್ಬಾರಿಗೆ ಅಪ್ಪನ ಬೆಂಬಲ
ಮಗಳು ಮಾಡುತ್ತಿರುವ ಆಟೋಟಗಳಿಗೆ ಅಪ್ಪ ಕೂಡ ಬೆಂಬಲ ಕೊಟ್ಟಿದ್ದಾರೆ. ನಿವೃತ್ತ ಆಡಳಿತ ಅಧಿಕಾರಿಯಾಗಿರುವ ಅವರು, ತಮ್ಮ ಮಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ಒತ್ತಡ ಹೇರಿದ್ದಾರೆ. ಅಪ್ಪನ ಬೆಂಬಲದಿಂದ ಮಗಳ ಅಟ್ಟಹಾಸ ಕೂಡ ಮಿತಿ ಮೀರಿತ್ತು. ಪುಣೆಯ ಕಲೆಕ್ಟರ್ ಕಚೇರಿಯಲ್ಲಿನ ಹಿರಿಯ ಅಧಿಕಾರಿ ಅಜಯ್ ಮೋರ್ ಅವರ ನಾಮಫಲಕವನ್ನು ತನಗಾಗಿ ಬಳಸಿಕೊಳ್ಳಲು ತೆಗೆದುಹಾಕಿದ್ದಾರೆ.
ಪೂಜಾ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಪರಿಗಣಿಸಿದ್ದು, ಆಕೆಯನ್ನು ಪುಣೆಯಿಂದ ವಾಶಿಮ್ಗೆ ವರ್ಗಾವಣೆ ಮಾಡಲಾಗಿದೆ. ಈಗ ವಾಶಿಮ್ ಜಿಲ್ಲೆಯಲ್ಲಿ ಸೂಪರ್ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜುಲೈ 30, 2025 ರವರೆಗೆ ತರಬೇತಿಯನ್ನು ಪೂರ್ಣಗೊಳಿಸಲಿದ್ದಾರೆ.
ಪೂಜಾ ಖೇಡ್ಕರ್ ಇತರ ಹಿಂದುಳಿದ ವರ್ಗಗಳ (OBC) ವರ್ಗಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಕೆನೆಪದರದ ಪ್ರಮಾಣಪತ್ರಕ್ಕಾಗಿ ವಾರ್ಷಿಕ ₹ 8 ಲಕ್ಷ ಆದಾಯದ ಮಿತಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ, ಆದರೆ ಆಕೆಯ ತಂದೆಯ ಚುನಾವಣಾ ಅಫಿಡವಿಟ್ನಲ್ಲಿ ₹ 40 ಕೋಟಿ ಮೌಲ್ಯದ ಆಸ್ತಿ ಮತ್ತು ₹ 43 ಲಕ್ಷ ವಾರ್ಷಿಕ ಆದಾಯವನ್ನು ತೋರಿಸಿದ್ದಾರೆ. ಒಬಿಸಿ ಅಭ್ಯರ್ಥಿಯಾಗಿ ಆಕೆಯ ಅರ್ಹತೆಯ ಬಗ್ಗೆ ಕೂಡ ಪ್ರಶ್ನೆಗಳು ಶುರುವಾಗಿದೆ.
2023-ಬ್ಯಾಚ್ನ ಐಎಎಸ್ ಅಧಿಕಾರಿ ಕಲಿಕೆಯಲ್ಲಿ ಅಸಮರ್ಥತೆ ಸೇರಿದಂತೆ ಅನೇಕ ಅಸಾಮರ್ಥ್ಯಗಳನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಯುಪಿಎಸ್ಸಿ ಪರೀಕ್ಷೆಯ ಸಮಯದಲ್ಲಿ ವಿಶೇಷ ಸೌಕರ್ಯಗಳನ್ನು ಕೋರಿದ್ದಾರೆ. ಆದರೆ ಅವರು, ತನ್ನ ವಿಕಲಾಂಗತೆಯ ಸ್ವರೂಪದ ಬಗ್ಗೆ ಮಾಹಿತಿ ಕೊಟ್ಟಿಲ್ಲ.
ಕೋವಿಡ್ ನಿರ್ಬಂಧಗಳನ್ನು ಉಲ್ಲೇಖಿಸಿ ಅವರು ಹಲವಾರು ಬಾರಿ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ವಿಜಯ್ ಕುಂಬಾರ್ ಆರೋಪಿಸಿದ್ದಾರೆ.












Click it and Unblock the Notifications