ದೇಶದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿಸಲು ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಮನವಿ
ನವದೆಹಲಿ, ಮಾರ್ಚ್ 21: ಉಕ್ರೇನ್ ಮೇಲೆ ರಷ್ಯಾವು ದಾಳಿ ಮಾಡಿದ ಬಳಿಕ ಉಕ್ರೇನ್ನಲ್ಲಿರುವ ಬಹುತೇಕ ಎಲ್ಲಾ ಭಾರತೀಯರನ್ನು ಭಾರತಕ್ಕೆ ವಾಪಾಸ್ ಕರೆತರಲಾಗಿದೆ. ಈ ಬೆನ್ನಲ್ಲೇ ಯುದ್ಧಪೀಡಿತ ಪ್ರದೇಶವಾದ ಉಕ್ರೇನ್ನಲ್ಲಿ ಶಿಕ್ಷಕರು ಮತ್ತು ಅಧ್ಯಾಪಕರು ಬಂಕರ್ಗಳಲ್ಲಿ ಕುಳಿತು ಆನ್ಲೈನ್ ಸೆಷನ್ಗಳಿಗೆ ಹಾಜರಾಗುತ್ತಿದ್ದಾರೆ. ಈ ನಡುವೆ ಉಕ್ರೇನ್ನಿಂದ ಹಿಂದಿರುಗಿದವರು ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಎರ್ನಾಕುಲಂ ಪ್ರೆಸ್ ಕ್ಲಬ್ನಲ್ಲಿ ಉಕ್ರೇನ್ನಿಂದ ವಾಪಾಸ್ ಬಂದ ವಿದ್ಯಾರ್ಥಿನಿ ಅನಿಖಾ ಮೆರಿನ್ ಥಾಮಸ್ ಈ ಒತ್ತಾಯವನ್ನು ಮಾಡಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ ತಮಗೆ ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶ ನೀಡಬೇಕು ಎಂದಿದ್ದಾರೆ.
ಕೀವ್ನ ಬೊಗೊಲೊಮೆಟ್ಸ್ ನ್ಯಾಷನಲ್ ಯೂನಿವರ್ಸಿಟಿಯ ಮೂರನೇ ವರ್ಷದ ವಿದ್ಯಾರ್ಥಿನಿ, ಮಾರ್ಚ್ 4 ರಂದು ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ನಿಂದ ಹಿಂದಿರುಗಿದ್ದಾರೆ. ಕೀವ್ ಮತ್ತು ಉಕ್ರೇನ್ನ ಇತರ ಪ್ರದೇಶಗಳಿಗೆ ಯಾವಾಗ ಸಹಜ ಸ್ಥಿತಿ ಮರಳುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಉಕ್ರೇನ್ನಿಂದ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್ ಬಂದಿದ್ದು, ಆ ಪೈಕಿ 3,000 ಕೇರಳೀಯ ವಿದ್ಯಾರ್ಥಿಗಳಲ್ಲಿ ಅನಿಖಾ ಕೂಡ ಒಬ್ಬರಾಗಿದ್ದಾರೆ.

ದೇಶದ ವೈದ್ಯಕೀಯ ಕಾಲೇಜಿಗೆ ಭರ್ತಿ ಮಾಡುವಂತೆ ಮನವಿ
"ವಿಶ್ವವಿದ್ಯಾಲಯವು ನಮಗೆ ಆನ್ಲೈನ್ ತರಗತಿಗಳನ್ನು ನೀಡುತ್ತಿದೆ. ಆದರೆ ನಮ್ಮ ಶಿಕ್ಷಕರು ಬಂಕರ್ಗಳಿಂದ ಆನ್ಲೈನ್ ಸೆಷನ್ಗಳಿಗೆ ಹಾಜರಾಗುತ್ತಿರುವುದರಿಂದ ಮುಂದೆ ಏನಾಗುತ್ತದೆ ಎಂಬುದರ ಕುರಿತು ಯಾವುದೇ ಭರವಸೆ ಇಲ್ಲ. ಯಾವ ಊಹೆಗೂ ಕೂಡಾ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವು ಉಕ್ರೇನ್ಗೆ ಹಿಂತಿರುಗಲು ಸಾಧ್ಯವಾಗುವುದಿಲ್ಲ. ಆ ಕಾರಣದಿಂದಾಗಿ ನಮ್ಮನ್ನು ದೇಶದ ವೈದ್ಯಕೀಯ ಕಾಲೇಜುಗಳಿಗೆ ಸೇರಿಸಲು ನಾವು ಇಲ್ಲಿನ ಅಧಿಕಾರಿಗಳನ್ನು ವಿನಂತಿಸುತ್ತೇವೆ," ಎಂದು ತಿಳಿಸಿದ್ದಾರೆ. ಒಡೆಸ್ಸಾ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಐದನೇ ವರ್ಷದ ವಿದ್ಯಾರ್ಥಿ ಸಿದ್ರಾತುಲ್, ಅಧಿಕಾರಿಗಳ ತಕ್ಷಣದ ಮಧ್ಯಪ್ರವೇಶವನ್ನು ಕೋರಿದರು. "ಇದು ಮಾರ್ಚ್-ಏಪ್ರಿಲ್ನಲ್ಲಿ ಉಕ್ರೇನ್ನಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಯ ಸಮಯ. ನಮ್ಮ ರಜೆಯು ಜೂನ್ನಲ್ಲಿ ಪ್ರಾರಂಭವಾಗುತ್ತದೆ. ಏಪ್ರಿಲ್ ಮಧ್ಯದ ಮೊದಲು ಪರಿಹಾರ ಕ್ರಮಗಳನ್ನು ಪ್ರಾರಂಭಿಸದಿದ್ದರೆ ನಾವು ಒಂದು ವರ್ಷವನ್ನು ಕಳೆದುಕೊಳ್ಳುತ್ತೇವೆ," ಎಂದು ವಿವರಣೆ ನೀಡಿದ್ದಾರೆ.

ಟೆಲಿಗ್ರಾಮ್ನಲ್ಲಿ ಗುಂಪನ್ನು ರಚಿಸಿದ ಕೇರಳದ ವಿದ್ಯಾರ್ಥಿಗಳು
ಸುಮಾರು 1,500 ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ ಕೇರಳೀಯ ವಿದ್ಯಾರ್ಥಿಗಳು ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಮತ್ತು ಸರ್ಕಾರದ ಕ್ರಮಕ್ಕಾಗಿ ಒತ್ತಾಯಿಸಲು ಟೆಲಿಗ್ರಾಮ್ನಲ್ಲಿ ಗುಂಪನ್ನು ರಚಿಸಿದ್ದಾರೆ. ಎಲ್ಲಾ ಕೇರಳ ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘವನ್ನು ರಚಿಸಲು ಪೋಷಕರು ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿದ್ದಾರೆ.

ಸರ್ಕಾರಿ ಮೆರಿಟ್ ಸೀಟುಗಳನ್ನು ನೀಡುವಂತೆ ವಿನಂತಿ
"ಉಕ್ರೇನ್ನಿಂದ ಹಿಂದಿರುಗಿದ ವಿದ್ಯಾರ್ಥಿಗಳಿಗೆ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲು ಕಾನೂನು ಕ್ರಮಗಳನ್ನು ಪ್ರಾರಂಭಿಸಲು ನಾವು ರಾಷ್ಟ್ರೀಯ ವೈದ್ಯಕೀಯ ಮಂಡಳಿಯನ್ನು ವಿನಂತಿಸುತ್ತೇವೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಹೆಚ್ಚಿನ ಶುಲ್ಕವನ್ನು ಪೂರೈಸಲು ನಮಗೆ ಸಾಧ್ಯವಾಗದ ಕಾರಣ, ಸರ್ಕಾರಿ ಮೆರಿಟ್ ಸೀಟುಗಳ ಶುಲ್ಕವನ್ನು ಪಾವತಿಸಿ ನಮ್ಮ ಮಕ್ಕಳಿಗೆ ಕೋರ್ಸ್ ಪೂರ್ಣಗೊಳಿಸಲು ಅನುಮತಿ ನೀಡುವಂತೆ ನಾವು ಒತ್ತಾಯ ಮಾಡುತ್ತೇವೆ," ಎಂದು ಎಲ್ವಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯ ತಾಯಿ ಬಿಜು ಪಿವಿ ತಿಳಿಸಿದ್ದಾರೆ.
Recommended Video

ಬ್ಯಾಂಕ್ ಸಾಲಗಳ ಆತಂಕದಲ್ಲಿ ಪೋಷಕರು
ಇನ್ನು ಹಲವಾರು ವಿದ್ಯಾರ್ಥಿಗಳು ಆರು ವರ್ಷಗಳ ಶುಲ್ಕವನ್ನು ಈಗಾಗಲೇ ಪಾವತಿ ಮಾಡಿದ್ದಾರೆ. ಸುಮಿ ಸ್ಟೇಟ್ ಯೂನಿವರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿಯಾಗಿರುವ ತನ್ನ ಮಗ ಸಿಲ್ವಿ ಸುನಿಲ್ ಈಗಾಗಲೇ ಆರು ವರ್ಷಗಳ ಶುಲ್ಕವನ್ನು ಪಾವತಿ ಮಾಡಿ ಆಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. "ಅನೇಕರು ತಮ್ಮ ಮಕ್ಕಳನ್ನು ಬ್ಯಾಂಕ್ಗಳಿಂದ ಸಾಲ ಪಡೆದು ಕಳುಹಿಸಿದ್ದರು. ನಮ್ಮ ಮಕ್ಕಳಿಗೆ ಭವಿಷ್ಯವು ಅನಿಶ್ಚಿತವಾಗಿರುವ ಕಾರಣ ನಮಗೆ ಸಹಾಯದ ಅಗತ್ಯವಿದೆ," ಎಂದು ಕೋರಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications