ಯೋಗಿ ಎಫೆಕ್ಟ್: ಅಲಹಾಬಾದ್ ನಲ್ಲಿ ಎರಡು ಕಸಾಯಿ ಖಾನೆಗಳಿಗೆ ಬೀಗ
ಚುನಾವಣೆ ವೇಳೆ ಉತ್ತರ ಪ್ರದೇಶದಲ್ಲಿರುವ ಕಸಾಯಿ ಖಾನೆಗಳನ್ನು ಮುಚ್ಚಿಸುವುದಾಗಿ ಬಿಜೆಪಿ ಹೇಳಿತ್ತು. ಇದೀಗ, ಆ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ.
ಅಲಹಾಬಾದ್, ಮಾರ್ಚ್ 20: ಉತ್ತರ ಪ್ರದೇಶದಲ್ಲಿ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷ ನೀಡಿದ್ದ ಆಶ್ವಾಸನೆಗಳನ್ನು ಒಂದೊಂದಾಗಿ ಪೂರೈಸಲು ಮುಂದಾಗಿದ್ದಾರೆ.
ಇದರ ಮೊದಲ ಹೆಜ್ಜೆಯೆಂಬಂತೆ, ಅಲಹಾಬಾದ್ ನಲ್ಲಿದ್ದ ಎರಡು ಅನಧಿಕೃತ ಕಸಾಯಿ ಖಾನೆಗಳನ್ನು ಸೋಮವಾರ (ಮಾರ್ಚ್ 20) ಮುಚ್ಚಿಸಲಾಗಿದೆ. ಅಲಹಾಬಾದ್ ನಗರ ನಿಗಮದಿಂದ ಈ ಕ್ರಮ ಕೈಗೊಳ್ಳಲಾಗಿದೆ.[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]
ಚುನಾವಣೆಯ ವೇಳೆ, ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಉತ್ತರ ಪ್ರದೇಶದಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈ ನಿಟ್ಟಿನಲ್ಲಿ ಪಕ್ಷವು ಮುಂದಡಿಯಿಟ್ಟಿದೆ.
ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಹೊರಬಿದ್ದಾಗಿನಿಂದ, ಬಿಜೆಪಿ ಯಾವಾಗ ಬಹುಮತ ಸಂಪಾದಿಸಿ ಸರ್ಕಾರ ರಚಿಸುವುದು ಖಾತ್ರಿಯಾಯಿತೋ ಆಗಿನಿಂದಲೇ ಉತ್ತರ ಪ್ರದೇಶದಲ್ಲಿರುವ ಕಸಾಯಿ ಖಾನೆಯ ಮಾಲೀಕರಲ್ಲಿ ತಲ್ಲಣ ಉಂಟಾಗಿತ್ತು.[XXX ಸ್ಟಾರ್ ಜತೆ ಉತ್ತರಪ್ರದೇಶ ಸಿಎಂ 'ಯೋಗಿ' ಹೋಲಿಕೆ]
ಕೆಲ ಮೂಲಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಒಟ್ಟು ಅಧಿಕೃತ 130 ಕಸಾಯಿಖಾನೆಗಳಿವೆ. ಆದರೆ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಅನಧಿಕೃತ ಕಸಾಯಿ ಖಾನೆಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಲಾಗಿದೆ.