ನಾನೂ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿದ್ದೆ; ಮೋದಿ ಭಾಷಣಕ್ಕೆ ಟ್ರೋಲ್ಗಳ ಸುರಿಮಳೆ
ನವದೆಹಲಿ, ಮಾರ್ಚ್ 27: ಬಾಂಗ್ಲಾದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಾಂಗ್ಲಾದ 50ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ಅವರು ಮಾಡಿರುವ ಭಾಷಣ ನಗೆಪಾಟಲಿಗೀಡಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳ ಮಳೆಯೇ ಸುರಿಯುತ್ತಿದೆ.
Recommended Video
ಶುಕ್ರವಾರ ಬಾಂಗ್ಲಾದಲ್ಲಿ ಭಾಷಣ ಆರಂಭಿಸಿದ್ದ ಮೋದಿ, "ನನ್ನ ಮೊದಲ ಪ್ರತಿಭಟನೆಗಳಲ್ಲಿ ಬಾಂಗ್ಲಾ ವಿಮೋಚನೆ ಪರ ಹೋರಾಟವೂ ಒಂದು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ನನ್ನ ಜೀವನದ ಪಯಣದಲ್ಲಿ ಮಹತ್ವದ ಗಳಿಗೆ. ನಾನು ಮತ್ತು ನನ್ನ ಸಹೋದ್ಯೋಗಿಗಳು ಭಾರತದಲ್ಲಿ ಸತ್ಯಾಗ್ರಹ ನಡೆಸಿದ್ದೆವು. ಆಗ ನಾನು ನನ್ನ 20ರ ಹರೆಯದಲ್ಲಿದ್ದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಈ ಸತ್ಯಾಗ್ರಹದ ವೇಳೆ ನನಗೆ ಜೈಲಿಗೆ ಹೋಗುವ ಸಂದರ್ಭವೂ ಬಂದಿತ್ತು" ಎಂದು ಹೇಳಿದ್ದರು. ಈ ಹೇಳಿಕೆ ಈಗ ಸಾಕಷ್ಟು ಟೀಕೆ, ಅಪಹಾಸ್ಯಕ್ಕೂ ಒಳಗಾಗಿದೆ. ಟ್ವಿಟ್ಟರ್ನಲ್ಲಿ "LieLikeModi" ಹ್ಯಾಷ್ಟ್ಯಾಗ್ ಕೂಡ ಸೃಷ್ಟಿಯಾಗಿದೆ. "ಬಾಲ ನರೇಂದ್ರ ಮೋದಿ" ಎಂದು ಹಲವು ಟ್ರೋಲ್ಗಳು ಹುಟ್ಟಿಕೊಂಡಿವೆ. ಮುಂದೆ ಓದಿ...
|
"ಅಪ್ಪಿತಪ್ಪಿಯೂ ಮೋದಿ ಸತ್ಯ ಹೇಳುವುದಿಲ್ಲ"
ಮೋದಿ ಭಾಷಣದ ಬಗ್ಗೆ ಟ್ವೀಟ್ನಲ್ಲಿ ವ್ಯಂಗ್ಯ ಮಾಡಿರುವ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ "ಅಪ್ಪಿತಪ್ಪಿಯೂ ಮೋದಿ ಅವರು ಸತ್ಯ ಹೇಳುವುದಿಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ.
"ಮೋದಿ ಅವರು ಯಾವಾಗ, ಹೇಗೆ, ಏಕೆ ಬಂಧನವಾಗಿದ್ದರು. ಅವರು ಹೇಳಿರುವ ವಯಸ್ಸು ಕೂಡ ಗೊಂದಲಮಯವಾಗೇ ಇದೆ. ಅವರ ಬಂಧನದ ಬಗ್ಗೆ ಎಲ್ಲಿಯಾದರೂ ದಾಖಲೆಯಿದೆಯೇ?" ಎಂದು ಮಾಜಿ ಐಎಫ್ಎಸ್ ಅಧಿಕಾರಿ ಕೆ.ಸಿ. ಸಿಂಗ್ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ 1970ರ ಡಿಸೆಂಬರ್ನಲ್ಲಿ ನಡೆಯಿತು. 1971ರಲ್ಲಿ ಬಿಕ್ಕಟ್ಟು ಆರಂಭವಾಯಿತು. ಭಾರತಕ್ಕೆ ನಿರಾಶ್ರಿತರು ಬಂದರು. ಯುದ್ಧ ಚಿಕ್ಕದಾಗಿದ್ದು ಹಾಗೂ ಗೆದ್ದಿತು. ಹಾಗಿದ್ದಾಗ ಪ್ರಧಾನಿಯವರ ಸಂಘರ್ಷ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
|
ಮೋದಿ ಪಾಕಿಸ್ತಾನದಲ್ಲಿದ್ದರೇ?; ಗೌರವ್ ಪಾಂಡಿ
ಮೋದಿಯವರು ತಾವು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತ ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿರಲಿಲ್ಲವೇ? ಹಾಗಾದರೆ ಅವರು ಜೈಲಿಗೆ ಹೋಗಿದ್ದು ಎಲ್ಲಿ? ಆಗ ಅವರು ಪಾಕಿಸ್ತಾನದಲ್ಲಿದ್ದರೇ ಎಂದು ಕಾಂಗ್ರೆಸ್ ರಾಷ್ಟ್ರೀಯ ಸಹಸಂಯೋಜಕ ಗೌರವ್ ಪಾಂಡಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನ ಶಶಿತರೂರ್ ಕೂಡ ಟೀಕಿಸಿದ್ದು, ಅಂತರರಾಷ್ಟ್ರೀಯ ಶಿಕ್ಷಣ; ನಮ್ಮ ಪ್ರಧಾನಿ ಬಾಂಗ್ಲಾದೇಶಕ್ಕೆ ಸುಳ್ಳು ಸುದ್ದಿಯ ರುಚಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮತ್ತೊಬ್ಬರು, "ನೀವು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲದಿದ್ದರೆ ಅದನ್ನು ಆವಿಷ್ಕರಿಸಬಹುದು" ಎಂದು ಮೋದಿ ಬಗ್ಗೆ ಬರೆದಿದ್ದಾರೆ.
|
ಕಾಂಗ್ರೆಸ್, ಬಿಜೆಪಿ ನಡುವೆ ವಾಗ್ದಾಳಿ
ಜಗತ್ತಿನ ಎಲ್ಲಾ ಅನ್ವೇಷಣೆಗಳ ಹಿಂದೆಯೂ ಮೋದಿ ಇದ್ದರು ಎಂಬ ರೀತಿ ಕಾರ್ಟೂನ್, ಚಿತ್ರಗಳನ್ನು ತಿರುಚಿ ಟ್ರೋಲ್ ಮಾಡಲಾಗುತ್ತಿದ್ದು, ಮೋದಿ ಅವರ ಹೇಳಿಕೆ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ದಾಳಿ ಆರಂಭವಾಗಿದೆ. ಕಾಂಗ್ರೆಸ್ ನಾಯಕರು ಮೋದಿ ಹೇಳಿಕೆಗೆ ವ್ಯಂಗ್ಯದಿಂದ ಪ್ರತಿಕ್ರಿಯಿಸಿರುವುದಕ್ಕೆ ಬಿಜೆಪಿ ಆಕ್ರೋಶಗೊಂಡಿದ್ದು, ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಮೋದಿ ಅವರು ಬಾಂಗ್ಲಾದೇಶದ ಮಾನ್ಯತೆಗಾಗಿ ಜನ ಸಂಘ ಆಯೋಜಿಸಿದ್ದ ಸತ್ಯಾಗ್ರಹದ ಭಾಗವಾಗಿರುವುದು ಹೌದು ಎಂದು ಸಮರ್ಥಿಸಿಕೊಂಡಿದೆ.

"LieLikeModi" ಹ್ಯಾಷ್ ಟ್ಯಾಗ್
"LieLikeModi" ಹ್ಯಾಷ್ಟ್ಯಾಗ್ ಜೊತೆ ಬಾಲ ನರೇಂದ್ರ ಎಂಬ ಪದ ಕೂಡ ಟ್ರೋಲ್ ಆಗುತ್ತಿದ್ದು, "ಗುರುತ್ವಾಕರ್ಷಣ ಆಲೋಚನೆಯನ್ನು ನ್ಯೂಟನ್ಗೆ ನೀಡಿದ್ದೂ ಮೋದಿ" ಎಂದು ಕೆಲವರೆಂದರೆ, ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿಯವರನ್ನು ಮುನ್ನಡೆಸಿದ್ದೂ ಬಾಲ ನರೇಂದ್ರ ಎಂದು ಕೆಲವರು ಪೋಸ್ಟ್ ಹಂಚಿಕೊಂಡಿದ್ದಾರೆ. ರಷ್ಯಾ ಕಾಂತ್ರಿಗೆ ಲೆನಿನ್ಗೆ ಸಹಾಯ ಮಾಡಿದ್ದೂ ಮೋದಿಯವರೇ ಎಂಬಿತ್ಯಾದಿ ನೂರಾರು ಟ್ವೀಟ್ಗಳು ಹರಿದಾಡುತ್ತಿವೆ.












Click it and Unblock the Notifications