ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ
ಅಗರ್ತಲಾ (ತ್ರಿಪುರಾ), ಮಾರ್ಚ್ 03 : ತ್ರಿಪುರ ಸುಂದರಿ ದೇವಿಯ ಅನುಗ್ರಹದಿಂದ ಜಯಭೇರಿ ಬಾರಿಸಿದ್ದೇವೆ ಎಂದು ಬೀಗುತ್ತಿರುವ ಭಾರತೀಯ ಜನತಾ ಪಕ್ಷ ತ್ರಿಪುರಾದಲ್ಲಿ ಐತಿಹಾಸಿಕ ಜಯ ಗಳಿಸುವತ್ತ ದಾಪುಗಾಲು ಹಾಕಿದೆ.
ಕಳೆದ 25 ವರ್ಷಗಳಿಂದ ಅಧಿಪತ್ಯ ನಡೆಸುತ್ತಿದ್ದ ಸಿಪಿಐ(ಎಂ) ಪಕ್ಷವನ್ನು ನಿರ್ನಾಮ ಮಾಡಿರುವ ಬಿಜೆಪಿ, ಪ್ರಪ್ರಥಮ ಬಾರಿಗೆ ಈಶಾನ್ಯ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಇದು ನಿಜಕ್ಕೂ ಬಿಜೆಪಿಗೆ ಸಿಕ್ಕ ಅಭೂತಪೂರ್ವ ಜಯ.
ಫೆಬ್ರವರಿ 18ರಂದು ನಡೆದ ಚುನಾವಣೆಯಲ್ಲಿ ಶೇ.91ರಷ್ಟು ಮತ ಚಲಾವಣೆಯಾಗಿದ್ದು, ಇಲ್ಲಿನ ಫಲಿತಾಂಶವನ್ನು ಇಲ್ಲಿನ ಯುವಜನತೆ, ಗುಡ್ಡಗಾಡು ಮತದಾರರು ನಿರ್ಧರಿಸಿದ್ದಾರೆ. ಇಲ್ಲಿನ ಜನರು ಬದಲಾವಣೆಗಾಗಿಯೇ ಮತ ಹಾಕಿದ್ದಾರೆ ಎಂದು ಮತದಾನದ ನಂತರ ಬಿಜೆಪಿ ಹೇಳಿಕೆ ನೀಡಿತ್ತು.

ಗಮನಿಸಬೇಕಾಗ ಸಂಗತಿಯೆಂದರೆ, ಕಳೆದ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಬಿಜೆಪಿ ಗಳಿಸಿದ್ದು ದೊಡ್ಡ ಸೊನ್ನೆ. ಆದರೆ, ಈ ಬಾರಿ ಸಂಪೂರ್ಣ ತಿರುವುಮುರುವು ಮಾಡಿದ್ದು, ಬಹುಮತಕ್ಕೆ ಬೇಕಾದ 31 ಸ್ಥಾನಗಳನ್ನು ದಾಟಿ ಮುನ್ನುಗ್ಗುವ ಹಂತ ತಲುಪಿದೆ. ಇದು ಬಿಜೆಪಿಯ ಸಾಮಾನ್ಯ ಸಾಧನೆಯೇನಲ್ಲ.
2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಕೇವಲ ಶೇ.1.5ರಷ್ಟು ಮಾತ್ರ ಮತಗಳನ್ನು ಗಳಿಸಿತ್ತು. ಆದರೆ, ಈಬಾರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಿಜೆಪಿ, ಇಡೀ ನಾಡಿನ ಗಮನ ತನ್ನೆಡೆ ಸೆಳೆದುಕೊಳ್ಳಲು ಯಶಸ್ವಿಯಾಗಿದೆ. ಅಲ್ಲದೆ, ಎಡಪಕ್ಷದ ಆಡಳಿತದಿಂದಲೂ ಜನರು ಬೇಸತ್ತಿದ್ದರು.
ಈ ಯಶಸ್ಸಿನ ಶ್ರೇಯವನ್ನು ಬಿಜೆಪಿ ನರೇಂದ್ರ ಮೋದಿ ಅವರಿಗೆ ನೀಡಿದೆ. ಮೋದಿಯವರು ಕೂಡ ತ್ರಿಪುರಾದ ಸಮಾವೇಶಗಳಲ್ಲಿ, ಕಮ್ಯುನಿಸ್ಟರು ಹೇರಿರುವ ಗುಲಾಮಗಿರಿಯಿಂದ ಹೊರಬನ್ನಿ, ಕೆಂಪು ಬಾವುಟವನ್ನು ಕಿತ್ತು ಬಿಸಾಡಿ ಎಂದು ಅಲ್ಲಿನ ಜನತೆಗೆ ಕರೆ ನೀಡಿದ್ದರು. ಜನ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಎರಡೂವರೆ ದಶಕದಿಂದ ಅದೇ ಪಕ್ಷವನ್ನು ನೋಡಿದ್ದ ಜನರು ಕೂಡ ಹೊಸತನ ಬಯಸಿದ್ದರು. ಇಂಥ ಜಯ ಸಿಗುತ್ತದೆಂದು ನಾವು ನಿರೀಕ್ಷಿಸಿದ್ದೆವು ಎಂದು ತ್ರಿಪುರಾದ ಬಿಜೆಪಿ ನಾಯಕ ಸುನೀಲ್ ದೇವಧರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ತ್ರಿಪುರಾ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಮತ್ತು 20 ಕ್ಷೇತ್ರಗಳು ಗುಡ್ಡಗಾಡು ಜನರಿಗಾಗಿಯೇ ಮೀಸಲಾಗಿರುವುದರಿಂದ, ಆ ಕ್ಷೇತ್ರಗಳಲ್ಲಿಯೇ ಹೆಚ್ಚಿನ ಪ್ರಚಾರ ಬಿಜೆಪಿ ಮಾಡಿದೆ. ಈ ಗೆಲುವಿನಲ್ಲಿ ಯುವ ಜನತೆಯನ್ನು ಸೆಳೆಯುವಲ್ಲಿ ಬಿಜೆಪಿಯ ಸೋಷಿಯಲ್ ಮೀಡಿಯಾ ಕೂಡ ಸಾಕಷ್ಟು ಕೆಲಸ ಮಾಡಿತ್ತು.












Click it and Unblock the Notifications