ತಿರುಪತಿ ದೇವಾಲಯದ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ, ಏಪ್ರಿಲ್ 10: ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ತಿರುಪತಿ-ಪಕಳ-ಕಾಟ್ಪಾಡಿ ರೈಲು ಮಾರ್ಗವನ್ನು ದ್ವಿಪಥಗೊಳಿಸಲು ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಅನುಮೋದನೆಯನ್ನು ನೀಡಿದೆ. ಈ ಯೋಜನೆಯ ಒಟ್ಟು ವೆಚ್ಚ ರೂ. 1,332 ಕೋಟಿ ಎಂದು ಅಂದಾಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹಾದು ಹೋಗುವ ತಿರುಪತಿ-ಪಕಲಾ-ಕಟ್ಪಾಡಿ ನಡುವಿನ ರೈಲು ಮಾರ್ಗವನ್ನು ದ್ವಿಪಥಗೊಳಿಸಲು ಅನುಮೋದನೆ ನೀಡಿದೆ. ಈ ರೈಲು ಮಾರ್ಗದ ಉದ್ದ 104 ಕಿ. ಮೀ. ಆಗಿದೆ.

ಮಾರ್ಗವನ್ನು ದ್ವಿಪಥಗೊಳಿಸಲು ಭಾರತೀಯ ರೈಲ್ವೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಈ ರೈಲು ಯೋಜನೆಯಿಂದ ಪೂರ್ವ ತಿರುಮಲ ವೆಂಕಟೇಶ್ವರ ದೇವಾಲಯದ ನೆಲೆಯಾಗಿರುವ ತಿರುಪತಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ. ದೇವಾಲಯಕ್ಕೆ ಪ್ರತಿದಿನ ಸುಮಾರು 75,000 ಮತ್ತು ಶುಭ ಸಂದರ್ಭಗಳಲ್ಲಿ ದಿನಕ್ಕೆ 1.5 ಲಕ್ಷ ಭಕ್ತರು ಭೇಟಿ ನೀಡುತ್ತಾರೆ.
ಈ ದ್ವಿಪಥ ರೈಲು ಯೋಜನೆ ನಿರ್ಮಾಣದ ಸಮಯದಲ್ಲಿ ಸುಮಾರು 35 ಲಕ್ಷ ಮಾನವ ದಿನಗಳ ನೇರ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ದ್ವಿಪಥ ಕಾಮಗಾರಿಯಿಂದ ರೈಲುಗಳ ಕಾರ್ಯಾಚರಣೆ ಸುಗಮವಾಗುತ್ತದೆ ಮತ್ತು ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.
ದ್ವಿಪಥ ರೈಲು ಯೋಜನೆ ಪ್ರಧಾನ ಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿ ಬಹು-ಮಾದರಿ ಸಂಪರ್ಕವನ್ನು ಒದಗಿಸುತ್ತದೆ. ಪ್ರಯಾಣಿಕರ ಸಂಚಾರ ಮಾತ್ರವಲ್ಲದೇ ಸರಕು ಮತ್ತು ಸೇವೆಗಳ ಸಾಗಣೆಗೂ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂರು ಜಿಲ್ಲೆಗಳನ್ನು ಒಳಗೊಳ್ಳುವ ಈ ಯೋಜನೆಯು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ರೈಲು ಜಾಲವನ್ನು ಸುಮಾರು 113 ಕಿ. ಮೀ.ಗಳಷ್ಟು ಹೆಚ್ಚಿಸುತ್ತದೆ. ತಿರುಮಲ ವೆಂಕಟೇಶ್ವರ ದೇವಾಲಯದ ಸಂಪರ್ಕದ ಜೊತೆಗೆ ಶ್ರೀ ಕಾಳಹಸ್ತಿ ಶಿವ ದೇವಾಲಯ, ಕಾಣಿಪಾಕಂ ವಿನಾಯಕ ದೇವಾಲಯ, ಚಂದ್ರಗಿರಿ ಕೋಟೆ ಮುಂತಾದ ಇತರ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ.
ಈ ದ್ವಿಪಥ ರೈಲು ಮಾರ್ಗ ಸುಮಾರು 400 ಹಳ್ಳಿಗಳು ಮತ್ತು ಸುಮಾರು 14 ಲಕ್ಷ ಜನಸಂಖ್ಯೆಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಕಲ್ಲಿದ್ದಲು, ಕೃಷಿ ಸರಕು, ಸಿಮೆಂಟ್ ಮತ್ತು ಇತರ ಖನಿಜಗಳು ಮುಂತಾದ ಸರಕುಗಳ ಸಾಗಣೆಗೆ ಇದು ಅತ್ಯಗತ್ಯ ರೈಲು ಮಾರ್ಗವಾಗಿದೆ. ಸಾಮರ್ಥ್ಯ ವೃದ್ಧಿಯಿಂದ ವರ್ಷಕ್ಕೆ 4 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆಗೆ ಅನುಕೂಲವಾಗುತ್ತದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಗಸ್ಟ್ 20, 2003ರಂದು ಹೊಸದಾಗಿ ಅಭಿವೃದ್ಧಿಗೊಳಿಸಲಾಗದ 104 ಕಿ. ಮೀ. ತಿರುಪತಿ-ಪಕಳ-ಚಿತ್ತೂರು-ಕಟ್ಪಾಡಿ ಬ್ರಾಡ್ ಗೇಜ್ ರೈಲು ಮಾರ್ಗವನ್ನು ಉದ್ಘಾಟಿಸಿದ್ದರು. 141 ಕೋಟಿ ರೂ. ಮೊತ್ತದ ಯೋಜನೆಯು ಉತ್ತರ-ದಕ್ಷಿಣ ರೈಲ್ವೆ ಮಾರ್ಗದ ದೂರವನ್ನು 51 ಕಿ. ಮೀ.ಗಳಷ್ಟು ಕಡಿಮೆ ಮಾಡಿತ್ತು.












Click it and Unblock the Notifications