ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ: ಮಂಡ್ಯದಿಂದ್ಲೇ ಸ್ಪರ್ಧೆ: ಅಚ್ಚರಿ ಹೇಳಿಕೆ ಕೊಟ್ಟ ಸುಮಲತಾ
ಬೆಂಗಳೂರು, ಮಾರ್ಚ್ 20: ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, 2019 ರ ಮಂಡ್ಯ ಚುನಾವಣೆಯಂತೆಯೇ ಈ ಬಾರಿಯೂ ಮಂಡ್ಯ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಲಿದೆ. ಕಾಂಗ್ರೆಸ್ ಗೆ ಠಕ್ಕರ್ ಕೊಡಲು ದೋಸ್ತಿಯಾಗಿದ್ದ ಬಿಜೆಪಿ-ಜೆಡಿಎಸ್ ನಡುವೆ ಆರಂಭದಲ್ಲೇ ಬಿರುಕು ಉಂಟಾಗಿದೆ. ಇತ್ತ ಮಂಡ್ಯ ಲೋಕಸಭಾ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಬಿಜೆಪಿ ಹೈಕಮಾಂಡ್ ಜೊತೆಗೆ ಕ್ಷೇತ್ರ ಹಂಚಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಒಮ್ಮೆಯೂ ಸಹ ಬಿಜೆಪಿ ಹೈಕಮಾಂಡ್ ಜೆಡಿಎಸ್ ಗೆ ಕೊಡುವ ಕ್ಷೇತ್ರಗಳ ಕುರಿತು ಅಧಿಕೃತವಾಗಿ ಘೋಷಿಸಿಲ್ಲ. ಇತ್ತ ದೋಸ್ತಿಯಲ್ಲಿಯ ಬಿರುಕಿನಿಂದಾಗಿ ಮಂಡ್ಯ ಹಾಸನ ಹಾಗೂ ಕೋಲಾರದಿಂದ ಜೆಡಿಎಸ್ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದು ಹಾಲಿ ಸಂಸದೆ ಸುಮಲತಾ ಪದೇ ಪದೇ ಅಚ್ಚರಿ ಹೇಳಿಕೆ ನೀಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚಿಕಿತ್ಸೆಗಾಗಿ ಚೆನ್ನೈ ತೆರಳು ಮೊದಲ ಮಂಡ್ಯ, ಹಾಸನ ಹಾಗೂ ಕೋಲಾರದಿಂದ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮಾರ್ಚ್ 25 ರಂದು ಬಂದು ಅಭ್ಯರ್ಥಿಗಳನ್ನ ಘೋಷಣೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇನ್ನೂ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಮಂಡ್ಯ ಟಿಕೆಟ್ ವಿಚಾರವಾಗಿ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿನ ಮರಳಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಿಲ್ಲ. ದೆಹಲಿಯಲ್ಲಿ ವರಿಷ್ಠರೊಂದಿಗೆ ಮಾತಾಡುವಾಗ ಮಂಡ್ಯ ಕ್ಷೇತ್ರಕ್ಕೆ ಅವರು ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸದಿರುವುದು ಗೊತ್ತಾಯಿತು, ಕ್ಷೇತ್ರದ ಬಗ್ಗೆ ಎಲ್ಲ ಮಾಹಿತಿಯನ್ನು ಅವರಿಗೆ ತಿಳಿಸಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ.
ಮಂಡ್ಯ ಟಿಕೆಟ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಎಲ್ಲ ಅಂಶಗಳನ್ನು ಗಮನಿಸಿ ಮಾರ್ಚ್ 22 ರಂದು ಹೆಸರನ್ನು ಪ್ರಕಟಿಸಲಿದ್ದಾರೆ, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ಅದನ್ನೇ ಹೇಳಿದ್ದಾರೆ ಎಂದು ಸುಮಲತಾ ಹೇಳಿದರು.
ಚಿಕ್ಕಬಳ್ಳಾಪುದಿಂದ ಟಿಕೆಟ್ ಆಫರ್ ನೀಡಲಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ನನಗೆ ಚಿಕ್ಕಬಳ್ಳಾಪುರ ಕ್ಷೇತ್ರ ನೀಡುವಂತೆ ಬೇರೆಯವರು ವರಿಷ್ಠರ ಮುಂದೆ ಪ್ರಸ್ತಾಪ ಮಾಡುತ್ತಿದ್ದಾರೆಯೇ ಹೊರತು ಅವರೇನೂ ತನ್ನ ಜೊತೆ ಅದರ ಬಗ್ಗೆ ಚರ್ಚೆ ಮಾಡಲಿಲ್ಲ, ಬೆಂಗಳೂರು ಉತ್ತರ ಕ್ಷೇತ್ರವನ್ನೇ ನಾನು ನಿರಾಕರಿಸಿದ್ದೇನೆ. ಇನ್ನೂ ಕ್ಕಬಳ್ಳಾಪುರ ಒಪ್ಪಿಕೊಳ್ಳುವುದು ಸಾಧ್ಯವೇ? ತಾನೇನಿದ್ದರೂ ಮಂಡ್ಯದಿಂದಲೇ ಸ್ಪರ್ಧಿಸುವುದು. ನನ್ನ ರಾಜಕೀಯ ಏನೇ ಆದ್ರೂ ಮಂಡ್ಯದಿಂದ ಮಾತ್ರ ಎಂದು ಸುಮಲತಾ ಅವರು ಅಚ್ಚರಿ ಹೇಳಿಕೆ ನೀಡಿರುವುದು, ಹೆಚ್ ಡಿ ಕುಮಾರಸ್ವಾಮಿಯವರ ತಲೆಬಿಸಿಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.












Click it and Unblock the Notifications