ನನಗೆ ಜನರೇ ಹೈಕಮಾಂಡ್, ನಿಮಗಷ್ಟೇ ಉತ್ತರಿಸಬೇಕು: ಮೋದಿ
ನೋಟು ರದ್ದು ವಿಚಾರದಲ್ಲಿ ಪ್ರತಿಪಕ್ಷಗಳ ಮಾತಿನಿಂದ ಸಿಟ್ಟಾದಂತಿರುವ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಭಾವುಕರಾಗಿ ಮಾತನಾಡಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಜನರೆದುರು ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ.
ಮೊರಾದಾಬಾದ್, ಡಿಸೆಂಬರ್ 3: ನಾನ್ಯಾಕೆ ಭ್ರಷ್ಟಾಚಾರ ವಿರುದ್ಧ ಹೋರಾಡಬಾರದು? ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಪರಾಧವೆ? ಯಾಕೆ ಕೆಲವರು ನನ್ನನ್ನ ತಪ್ಪಿತಸ್ಥ ಅನ್ನುತ್ತಿದ್ದಾರೆ?- ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಶನಿವಾರ ನಡೆದ ಪರಿವರ್ತನ್ ಸಮಾವೇಶದಲ್ಲಿ ನರೇಂದ್ರ ಮೋದಿ ಭಾವುಕರಾಗಿ ಕೇಳಿದ ಪ್ರಶ್ನೆಗಳು.
ಜನರು ನನ್ನ ಹೈಕಮಾಂಡ್ ಮತ್ತು ನಾನು ನಿಮಗಷ್ಟೇ ಉತ್ತರ ಹೇಳಬೇಕು. ಬಡತನವನ್ನು ತೊಲಗಿಸಬೇಕು ಅಂದರೆ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಂಥವು ಅಭಿವೃದ್ಧಿಯಾಗಬೇಕು. ನಾನು ಸಂಸದನಾಗಬೇಕು ಎಂಬ ಕಾರಣಕ್ಕಷ್ಟೇ ಉತ್ತರಪ್ರದೇಶದಿಂದ ಸ್ಪರ್ಧಿಸಿಲ್ಲ. ಬಡತನದ ವಿರುದ್ಧ ಹೋರಾಟವನ್ನು ಆರಂಭಿಸಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದರು.[ಅತ್ತೂರು ಲಾರೆನ್ಸ್ ಕ್ಷೇತ್ರದ ಟವರ್ ಸಮಸ್ಯೆಗೆ ಮೋದಿ ಸಲ್ಯೂಷನ್!]
ನಾನು ಅಧಿಕಾರಕ್ಕೆ ಬಂದಾಗ ಅಧಿಕಾರಿಗಳನ್ನು ಕರೆದು ಕೇಳಿದೆ. ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳ ನಂತರವೂ ಹಲವು ಹಳ್ಳಿಗಳಲ್ಲಿ ವಿದ್ಯುತ್ ಯಾಕಿಲ್ಲ? ಆಗ ನಾನು ಕೆಂಪು ಕೋಟೆಯಿಂದ ಘೋಷಿಸಿದ್ದು, ಹಳ್ಳಿಗಳು ಇನ್ನು ಸಾವಿರ ದಿನಗಳಲ್ಲಿ ವಿದ್ಯುತ್ ನಿಂದ ಬೆಳಗುತ್ತವೆ. ನಾವು ಆ ಭರವಸೆಯನ್ನು ಈಡೇರಿಸುವ ಹಾದಿಯಲ್ಲಿದ್ದೇವೆ ಎಂದು ಪ್ರಧಾನಿ ಹೇಳಿದರು.[ದಾಳಿ ಮುಂದುವರಿಸಿ, ನಾನಿದ್ದೇನೆ: ಐಟಿ ಅಧಿಕಾರಿಗಳಿಗೆ ಮೋದಿ ಅಭಯ]
ಹಲವು ಸರಕಾರಗಳು ಹಲವು ಘೋಷಣೆಗಳನ್ನು ಮಾಡಿವೆ. ನಾವು ಉತ್ತರದಾಯಿತ್ವದ ಮೇಲೆ ಗಮನ ಇಟ್ಟಿದ್ದೇವೆ. ನನಗೆ ಹೈಕಮಾಂಡ್ ಇಲ್ಲ. ಜನರೇ ನನ್ನ ಹೈಕಮಾಂಡ್. ಭ್ರಷ್ಟಾಚಾರ ತೊಲಗಬೇಕು. ಅದೇನು ತಾನಾಗಿಯೇ ಹೋಗಲ್ಲ. ನನಗೆ ಆಶ್ಚರ್ಯ ಆಗ್ತಿದೆ. ನನ್ನ ದೇಶದಲ್ಲೇ ಕೆಲ ಜನರು ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ಈ ದೇಶ ಕೊಳ್ಳೆ ಹೊಡೆಯುತ್ತಿರುವವರನ್ನು ಲೆಕ್ಕ ಕೊಡುವಂತೆ ಮಾಡಿದ್ದು ನನ್ನ ತಪ್ಪಾ ಎಂದು ಪ್ರಶ್ನಿಸಿದರು ಮೋದಿ.
ಯಾರು ಕಪ್ಪುಹಣ ಇಟ್ಟುಕೊಂಡಿದ್ದರೋ ಅವರಿಂದು ಬಡವರ ಮನೆ ಬಾಗಿಲಿಗೆ ಹೋಗಿ ಅವರ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ. ಕೆಲವರು ಅವರ ಕಾಲಿಗೆ ಬೀಳ್ತಿದ್ದಾರೆ. ಇಂಥ ದೃಶ್ಯವನ್ನು ಹಿಂದೆ ಯಾವಾಗಲಾದರೂ ನೋಡಿದ್ರಾ ಎಂದು ಕೇಳಿದರು ಮೋದಿ.[ನೋಟು ನಿಷೇಧ, ಸಮೀಕ್ಷೆ: ಮೋದಿಗೆ ಜೈ ಎನ್ನುವವರ ಸಂಖ್ಯೆ ಇಳಿಮುಖ]
ಜನ್ ಧನ್ ಖಾತೆಯಲ್ಲಿ ತಮ್ಮ ಕಪ್ಪು ಹಣ ಹಾಕಿದವರನ್ನು ಕಂಬಿಯ ಹಿಂದೆ ನಿಲ್ಲಿಸಲು ದಾರಿಗಳಿವೆಯಾ ಎಂದು ಹುಡುಕುತ್ತಿದ್ದೇನೆ. ಈಗ ದಿನವಿಡೀ ದೊಡ್ಡ ಜನ ಮೋದಿ ಮೋದಿ ಅಂತಿದ್ದಾರೆ. ಇವರೇ ಹಿಂದೆ ಮನಿ ಮನಿ ಅಂತಿದ್ದರು. ಈ ದೇಶ ಭ್ರಷ್ಟಾಚಾರಕ್ಕೆ ವಿರುದ್ಧವಾಗಿದೆ. ಅದರೆ ಹಿಂದೆ ಅಸಹಾಯಕ ಸ್ಥಿತಿ ಇತ್ತು. ಆದರೆ ಈಗ ಜನ ಈ ಪೀಡೆ ವಿರುದ್ಧ ನಾವು ಬಡಿದಾಡಬೇಕು ಅಂದುಕೊಳ್ತಿದ್ದಾರೆ. ನಾನು ನಿಮ್ಮ ಶ್ರಮ, ತ್ಯಾಗ ಹಾಗೆ ಹುಸಿ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಮೋದಿ ಆಕ್ರೋಶಭರಿತರಾಗಿ ನುಡಿದರು.