ತೆಲಂಗಾಣ ಚುನಾವಣೆ ಮೇಲೆ ಕರ್ನಾಟಕದ ಪ್ರಭಾವ: 'ದಿ ಗ್ರೌಂಡ್ ರಿಪೋರ್ಟ್' ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಬಂಪರ್- ಅಂಕಿಅಂಶ, ವಿವರ
ಹೈದರಾಬಾದ್, ಸೆಪ್ಟೆಂಬರ್ 18: ಈ ವರ್ಷದ ಅಂತ್ಯದಲ್ಲಿ ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತಿಸ್ಗಢ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿವೆ. ತೀವ್ರ ಕುತೂಹಲ ಕೆರಳಿಸಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಫಲಿತಾಂಶದ ಬಗೆಗಿನ ಲೆಕ್ಕಾಚಾರಗಳು ಶುರುವಾಗಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಅಚ್ಚರಿಯ ಅಂಕಿಅಂಶಗಳನ್ನು ನೀಡಿವೆ.
'ದಿ ಗ್ರೌಂಡ್ ಜಿರೋ' ಸಮೀಕ್ಷೆ
ದಿ ಗ್ರೌಂಡ್ ಜಿರೋ ಎಂಬ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆಯನ್ನು ನೀಡಿದೆ. ಇದು ಕರ್ನಾಟಕ ವಿಧಾನಸಭೆ ಚುನಾವಣೆಯ ಸಮೀಕ್ಷೆಯನ್ನು ಪ್ರಕಟಿಸಿತ್ತು. ಫಲಿತಾಂಶಕ್ಕೂ ಸಮೀಕ್ಷೆ ಬಹುತೇಕ ಸಾಮೀಪ್ಯವಿತ್ತು. ಈ ಹಿನ್ನೆಲೆಯಲ್ಲಿ ತೆಲಂಗಾಣ ಬಗೆಗಿನ ಗ್ರೌಂಡ್ ಜಿರೋ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ.

ಕರ್ನಾಟಕದ 'ಗ್ರೌಂಡ್ ಜಿರೋ' ಸಮೀಕ್ಷೆ
ಕರ್ನಾಟಕದ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ 138 ರಿಂದ 142 ಸ್ಥಾನಗಳು ಸಿಗಲಿವೆ ಎಂದು ಗ್ರೌಂಡ್ ಜಿರೋ ಸಮೀಕ್ಷೆ ಹೇಳಿತ್ತು. ಬಿಜೆಪಿಗೆ 66 ರಿಂದ 70 ರಷ್ಟು ಸೀಟುಗಳು ದೊರೆಯಲಿವೆ ಎಂದು ಸಮೀಕ್ಷೆ ತಿಳಿಸಿತ್ತು. ಜೆಡಿಎಸ್ಗೆ 14 ರಿಂದ 18ರಷ್ಟು ಸ್ಥಾನಗಳು ಸಿಗಲಿವೆ ಎಂದು ಗ್ರೌಂಡ್ ಜಿರೋ ಸಮೀಕ್ಷೆ ಪ್ರಕಟಿಸಿತ್ತು. ಆಡಳಿತ ವಿರೋಧ ಅಲೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಜನಪ್ರಿಯತೆ ಕರ್ನಾಟಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು 'ದಿ ಗ್ರೌಂಡ್ ಜಿರೋ' ವರದಿ ಮಾಡಿತ್ತು.
ತೆಲಂಗಾಣ ರಾಜಕೀಯ
ತೆಲಂಗಾಣದಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ. ಬಿಜೆಪಿ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದರೂ, ತೆಲಂಗಾಣದಲ್ಲಿ ಹೆಚ್ಚು ಸೀಟು ಗೆಲ್ಲುವಷ್ಟು ಸಾಮಾರ್ಥ್ಯ ಹೊಂದಿಲ್ಲವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಆರ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇರುವುದಂತೂ ನಿಶ್ಚಿತವಾಗಿದೆ. ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಹೆಚ್ಚು ಸಕ್ರಿಯವಾಗಿದೆ. ಬಿಎಸ್ಆರ್ ಪಕ್ಷವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂಬುದರ ಬಗ್ಗೆ ವರದಿಗಳಾಗಿವೆ.

'ದಿ ಗ್ರೌಂಡ್ ಜಿರೋ' ಸಮೀಕ್ಷೆ ಹೇಳುವುದೇನು?
119 ವಿಧಾನಸಭಾ ಕ್ಷೇತ್ರಗಳು ತೆಲಂಗಾಣದಲ್ಲಿವೆ. ಅದರಲ್ಲಿ ಕಾಂಗ್ರೆಸ್ಗೆ 65 ರಿಂದ 70 ಸ್ಥಾನಗಳು ದೊರೆಯಲಿವೆ. ಬಿಎಸ್ಆರ್ ಪಕ್ಷವು 40 ರಿಂದ 45 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎಐಎಂಗೆ 6 ರಿಂದ 7 ಸ್ಥಾನಗಳು ಬರಲಿವೆ. ಬಿಜೆಪಿಗೆ ಕೇವಲ ಮೂರರಿಂದ ನಾಲ್ಕು ಸ್ಥಾನಗಳು ದೊರೆಯಲಿವೆ ಎಂದು 'ದಿ ಗ್ರೌಂಡ್ ಜಿರೋ' ಸಮೀಕ್ಷೆಗಳು ಹೇಳಿವೆ. ರೇವಂತ್ ರೆಡ್ಡಿ ಜನಪ್ರಿಯತೆ, ಆಡಳಿತ ವಿರೋಧಿ ಅಲೆ, ಕರ್ನಾಟಕದ ಗೆಲುವು ತೆಲಂಗಾಣ ಚುನಾವಣೆಯ ಮೇಲೆ ಪ್ರಮುಖ ಪರಿಣಾಮ ಬೀರಲಿವೆ ಎಂದು ಸಮೀಕ್ಷೆ ಹೇಳಿದೆ.

ಗ್ಯಾರಂಟಿ ಘೋಷಣೆ
ಕರ್ನಾಟಕದಂತೆಯೇ ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದೆ. ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2,500 ರೂಪಾಯಿಗಳನ್ನು ಒದಗಿಸುವ ಮಹಾಲಕ್ಷ್ಮಿ ಗ್ಯಾರಂಟಿಯನ್ನು ಘೋಷಿಸಲಾಗಿದೆ. 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ, ರೈತರಿಗೆ ಪ್ರತಿ ವರ್ಷ 15,000 ನೀಡುವ ರೈತ ಭರವಸೆ ಯೋಜನೆಗಳನ್ನು ಘೋಷಿಸಲಾಗಿದೆ. ಇದಲ್ಲದೇ ಯುವಕರನ್ನು ಕೇಂದ್ರಿಕೃತವಾಗಿಸಿಕೊಂಡು ಗ್ಯಾರಂಟಿಗಳನ್ನು ಘೋಷಿಸಲಾಗಿದೆ.












Click it and Unblock the Notifications