ಯುವಶಕ್ತಿಯ ಸ್ಫೂರ್ತಿ ಭಗವದ್ಗೀತೆ ರಾಷ್ಟ್ರೀಯ ಗ್ರಂಥವಾಗಬೇಕೇ?
ಬಿಜೆಪಿಯ ವಿರುದ್ದ ತಿರುಗಿ ಬೀಳುವ ಯಾವುದೇ ಅವಕಾಶವನ್ನು ಕೈಚೆಲ್ಲದ ವಿಪಕ್ಷಗಳಿಗೆ ಈಗ ಇನ್ನೊಂದು ಆಹಾರ ಸಿಕ್ಕಂತಾಗಿದೆ. ಸಾಧ್ವಿ ನಿರಂಜನ್ ಜ್ಯೋತಿ ವೃತ್ತಾಂತದ ನಂತರ ವಿಪಕ್ಷಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ದ ಮುಗಿಬಿದ್ದಿವೆ.
ಭರತಖಂಡದ ಬಹುಸಂಖ್ಯಾತ ಹಿಂದೂಗಳ ಪವಿತ್ರ ಗ್ರಂಥ 'ಭಗವದ್ಗೀತೆ'ಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಿಸಬೇಕು ಎನ್ನುವ ಸುಷ್ಮಾ ಸ್ವರಾಜ್ ಹೇಳಿಕೆ ಈಗ ವಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿರುವುದು.
ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ದ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶಾಧಾರಿತ ಹಿಂದೂಗಳ ಪವಿತ್ರ ಗ್ರಂಥವೀಗ ಆಡಳಿತ ಮತ್ತು ವಿಪಕ್ಷಗಳ ಮಾತಿನ ಯುದ್ದಕ್ಕೆ ಕಾರಣವಾಗಿದೆ.
ಮಾನವ ಸಮಾಜದ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ, ಸಮಾಧಾನಕರ ಅಂಶವಿದೆ. ನಾನು ಇಂದು ತಕ್ಕಮಟ್ಟಿಗೆ ವಿದೇಶಾಂಗ ವ್ಯವಹಾರ ಖಾತೆಯನ್ನು ನಿಭಾಯಿಸುತ್ತಿದ್ದೇನೆಂದರೆ ಅದಕ್ಕೆ ಭಗವದ್ಗೀತೆಯ ವಿಚಾರವೇ ಪ್ರೇರಣೆ ಎಂದು ಸುಷ್ಮಾ ಹೇಳಿದ್ದರು. (ಬೆಂಗಳೂರಿನಲ್ಲಿ ಗೀತಾ ಸಮ್ಮೇಳನ)

ಅಲ್ಲದೇ, ಪ್ರಧಾನಿಯವರು ಇತ್ತೀಚೆಗೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ್ ಅವರನ್ನು ಭೇಟಿಯಾಗಿದ್ದಾಗ ಪವಿತ್ರ ಭಗವದ್ಗೀತೆ ಗ್ರಂಥವನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಸುಷ್ಮಾ ದೆಹಲಿಯ ಕೆಂಪುಕೋಟೆ ಮೈದಾನದಲ್ಲಿ ನಡೆದ 'ಗೀತಾ ಪ್ರೇರಣಾ ಮಹೋತ್ಸವ' ದಲ್ಲಿ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ಜಗತ್ತಿನಲ್ಲೇ ಭಗವದ್ಗೀತೆಗೆ ಮಾನ್ಯತೆ ಸಿಕ್ಕಿದಾಗ ನಮ್ಮ ದೇಶದಲ್ಲಿ ಯಾಕೆ ಮಾನ್ಯತೆ ಇಲ್ಲ. ನಮ್ಮ ದೇಶದ ಹೆಮ್ಮೆಯ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು 'ರಾಷ್ಟ್ರೀಯ ಗ್ರಂಧ'ವಾಗಿ ಘೋಷಿಸಬೇಕೆಂದು ಸುಷ್ಮಾ ಸ್ವರಾಜ್ ನವದೆಹಲಿಯಲ್ಲಿ ನಡೆದ್ದಿದ್ದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.
ಈಗ ಸುಷ್ಮಾ ಸ್ವರಾಜ್ ಹೇಳಿಕೆಗೆ ಎಂದಿನಂತೆ ವಿಪಕ್ಷಗಳು ಮಾತಿನ ಪ್ರಹಾರ ಆರಂಭಿಸಿವೆ. ಭಾರತ ದೇಶಕ್ಕೆ 'ಸಂವಿಧಾನ' ವೇ ರಾಷ್ಟ್ರೀಯ ಗ್ರಂಥ, ಭಗವದ್ಗೀತೆ ಆಗಲು ಸಾಧ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.
ಮೋದಿಯವರು ಒಬಾಮಗೆ ಭಗವದ್ಗೀತೆ ನೀಡಿದ ಕೂಡಲೇ ಅದನ್ನು ರಾಷ್ಟ್ರೀಯ ಗ್ರಂಥ ಎನ್ನಲು ಸಾಧ್ಯವೇ? ಒಂದು ವೇಳೆ ಮೋದಿ, ಬರ್ಫಿ ನೀಡಿದರೆ ಬರ್ಫಿಯನ್ನು ರಾಷ್ಟ್ರೀಯ ಸಿಹಿಖಾದ್ಯ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಬಿಎಸ್ಪಿ ಕುಚೋದ್ಯದಿಂದ ಲೇವಡಿ ಮಾಡಿದೆ.
ಸುಷ್ಮಾ ಹೇಳಿಕೆ ಹಿಂದೂಗಳನ್ನು ಓಲೈಸುವಂತದ್ದು, ಅಲ್ಪಸಂಖ್ಯಾತರ ಭಾವನೆಗೆ ಇದರಿಂದ ನೋವಾಗಿದೆ. ಭಗವದ್ಗೀತೆ ಗ್ರಂಥದ ಬಗ್ಗೆ ನಮಗೆ ಗೌರವವಿದೆ. ಆದರೆ ರಾಷ್ಟ್ರೀಯ ಗ್ರಂಧವಾಗಿಸುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ ಎಂದು ಕಾಂಗ್ರೆಸ್ ಕೂಡಾ ಟೀಕಿಸುವುದರಲ್ಲಿ ಹಿಂದೆ ಬಿದ್ದಿಲ್ಲ.
ಜಪಾನ್ ಚಕ್ರವರ್ತಿ ಅಕಿಹಿಟೊ ಅವರನ್ನು ಟೋಕಿಯೋದಲ್ಲಿ ಪ್ರಧಾನಿ ಮೋದಿ ಭೇಟಿಯಾಗಿದ್ದಾಗ ಭಗವದ್ಗೀತೆ ಗ್ರಂಥವನ್ನು ಉಡುಗೊರೆಯಾಗಿ ನೀಡಿದ್ದರು. ಮೋದಿ ತನ್ನ ಪ್ರವಾಸಕ್ಕೆ ಕೋಮು ಬಣ್ಣ ಬಳೆಯುತ್ತಿದ್ದಾರೆಂದು ವಿಪಕ್ಷಗಳು ಆ ಸಮಯದಲ್ಲೇ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದವು. (ಮದರಸಗಳಲ್ಲಿ ಭಗವದ್ಗೀತೆ ಸುತ್ತೋಲೆ ವಾಪಸ್)

ನ್ಯಾಯಾಲಯದ ಕಟಕಟೆಯಲ್ಲೂ ಗೀತೆಯ ಮೇಲೆ ಪ್ರಮಾಣ ಮಾಡುವುದು ಪದ್ದತಿ ಈಗಲೂ ನಮ್ಮಲ್ಲಿ ಜಾರಿಯಲ್ಲಿದೆ. ಪ್ರಾಥಮಿಕ ಶಿಕ್ಷಣದಲ್ಲೇ ಭಗವದ್ಗೀತೆಯನ್ನು ಅಳವಡಿಸ ಬೇಕೆಂದು ನಾಡಿನ ವಿವಿಧ ಮಠಾಧೀಶರು ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದಿದ್ದಾರೆ.
ನಾಡಿನ ಯುವಶಕ್ತಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿರುವ ಭಗವದ್ಗೀತೆ ಕೇವಲ ಒಂದು ಧರ್ಮಗ್ರಂಥವಲ್ಲ, ಅದೊಂದು ಮನಶ್ಯಾಸ್ತ್ರ. ಮಾನವ ಕುಲದ ಒಳಿತಿಗಾಗಿ ಶ್ರೀಕೃಷ್ಣನ ಉಪದೇಶವದು. ಮಹಾಭಾರತ, ಅರ್ಜುನ ಇಲ್ಲಿ ನೆಪಮಾತ್ರವೆಂದು ಹಲವಾರು ದಾರ್ಶನಿಕರು ಗೀತೆಯ ಮಹತ್ವನ್ನು ಸಾರಿದ್ದುಂಟು.
ಬೆಳಗ್ಗೆ ಎದ್ದು ಗೀತೆಯನ್ನು ಪೂಜಿಸುವ ನಮ್ಮ ರಾಜಕೀಯ ನಾಯಕರುಗಳು ಭಗವದ್ಗೀತೆಯನ್ನು 'ರಾಷ್ಟ್ರೀಯ ಗ್ರಂಧ'ಎಂದು ಘೋಷಿಸುವುದಕ್ಕೆ ತಕರಾರು ಎತ್ತಿರಬಹುದು. ಯಾಕೆಂದರೆ ಅದು ಅವರ ರಾಜಕೀಯ ಭವಿಷ್ಯ, ಮತಬ್ಯಾಂಕ್ ರಾಜಕಾರಣ ಎನ್ನಲೂ ಬಹುದು.
ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ, ಬಹುಸಂಖ್ಯಾತ ಸಮುದಾಯದ ಪವಿತ್ರ ಗ್ರಂಥ 'ಭಗವದ್ಗೀತೆ' ರಾಷ್ಟ್ರೀಯ ಗ್ರಂಥವಾಗಬೇಕೇ?












Click it and Unblock the Notifications