ಸುಶಾಂತ್ ಸಿಂಗ್ ರಜಪೂತ್ ಸಾವು: ಬಹುನಿರೀಕ್ಷಿತ ವರದಿ ಬಹಿರಂಗಕ್ಕೆ ದಿನ ನಿಗದಿ
ನವದೆಹಲಿ, ಸೆ 19: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಕಾರಣ ಏನು ಎನ್ನುವುದಕ್ಕೆ ನಾಳೆ (ಸೆ.20) ಮಾಹಿತಿ ಲಭಿಸಲಿದೆ.
ಸುಶಾಂತ್ ಸಾವು ಕುರಿತು ಹಲವು ಆಯಾಮಗಳಿಂದ ವೈದ್ಯಕೀಯ ಪರೀಕ್ಷೆಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿತ್ತು. ಏಮ್ಸ್ ಸಂಸ್ಥೆಗೆ, ವರದಿ ಮತ್ತು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಸಿಬಿಐ ಸೂಚಿಸಿತ್ತು.
ಈ ಹಿನ್ನಲೆಯಲ್ಲಿ ಏಮ್ಸ್ ಆಸ್ಪತ್ರೆಯ ವೈದ್ಯ ಡಾ.ಸುಧೀರ್ ಗುಪ್ತಾ ನೇತೃತ್ವದ ತಂಡ ಭಾನುವಾರ ಸಭೆ ಸೇರಲಿದೆ. ಮರಣೋತ್ತರ ಪರೀಕ್ಷೆ, ಆಟೋ ಸ್ಪೈ ವರದಿ ಸೇರಿದಂತೆ, ಸುಶಾಂತ್ ಸಾವಿನ ಪ್ರಕರಣದಲ್ಲಿ ಈವರೆಗೆ ನಡೆಸಲಾಗಿರುವ ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿಗಳ ಬಗ್ಗೆ ಅಂತಿಮ ಅಭಿಪ್ರಾಯವನ್ನು ಈ ತಂಡ ತಿಳಿಸಲಿದೆ.

ಫೊರೆನ್ಸಿಕ್ ವರದಿಯೂ ಏಮ್ಸ್ ವೈದ್ಯರ ತಂಡಕ್ಕೆ ಲಭಿಸಿದ್ದು, ಎಲ್ಲಾ ವರದಿಯನ್ನು ಅಧ್ಯಯನ ನಡೆಸಿರುವ ತಂಡ, ಸುಶಾಂತ್ ಸಿಂಗ್ ಮೃತ ಪಡುವ ಮುನ್ನ ಅವರಿಗೆ ವಿಷಪ್ರಾಸನ ಮಾಡಿಸಲಾಗಿದೆಯೇ ಎನ್ನುವುದರ ಬಗ್ಗೆಯೂ, ತಮ್ಮ ಅಂತಿಮ ನಿರ್ಧಾರವನ್ನು ತಿಳಿಸಲಿದೆ.
ಇದಾದ ನಂತರ ಸಿಬಿಐನ ವಿಶೇಷ ತನಿಖಾ ದಳ ಮುಂದಿನ ವಾರದಲ್ಲಿ ಏಮ್ಸ್ ವೈದ್ಯರ ಜೊತೆ ಮಾತುಕತೆ ನಡೆಸಲಿದೆ. ಈ ಮೀಟಿಂಗ್ ನಂತರ, ತನಿಖೆಯ ಮುಂದಿನ ಆಯಾಮ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.
ಸಿಬಿಐನ ಅನಿಲ್ ಯಾದವ್ ನೇತೃತ್ವದ ಮೂವರ ತಂಡ, ಸುಶಾಂತ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. ಮೂಲಗಳ ಪ್ರಕಾರ, ಏಮ್ಸ್ ನೀಡುವ ವರದಿಯನ್ನು ಸಿಬಿಐ ಬಹುಪಾಲು ನಂಬಿಕೊಂಡಿದೆ. ಮುಂಬೈನ ತನ್ನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೂನ್ ಹದಿನಾಲ್ಕರಂದು ಮೃತ ಪಟ್ಟಿದ್ದರು.












Click it and Unblock the Notifications