ಸೂರತ್ 'ಬಾಸ್' ನಿಂದ ದೀಪಾವಳಿ ಭರ್ಜರಿ ಗಿಫ್ಟ್
ಸೂರತ್, ಅ.20: ಸೂರತ್ ನ ವಜ್ರದ ವ್ಯಾಪಾರಿಯೊಬ್ಬರು ತನ್ನ ಕಂಪನಿಯ ಕಾರ್ಮಿಕರಿಗೆ ದೀಪಾವಳಿ ಬೋನಸ್ ಎಂದು ನೀಡುತ್ತಿರುವ ಗಿಫ್ಟ್ ಈಗ ಎಲ್ಲೆಡೆ ಚರ್ಚೆಗೊಳಲಾಗುತ್ತಿದೆ. ಬಾಸ್ ಇದ್ದರೆ ಈ ರೀತಿ ಇರಬೇಕು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಡಿಹೊಗಳಾಗುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಗುಜರಾತಿನ ಉದ್ಯಮಿಯದ್ದೇ ಸುದ್ದಿ.
ಸಾಮಾನ್ಯವಾಗಿ ಕಂಪನಿಗಳಲ್ಲಿ ವರ್ಷಕ್ಕೆರಡು ಬಾರಿ ಬೋನಸ್ ನೀಡುವುದು ರೂಢಿಯಲ್ಲಿದೆ. ಉತ್ತರ ಭಾರತದಲ್ಲಿ ದೀಪಾವಳಿ ಸಮಯದ ಅಮಾವಾಸ್ಯೆ ಲಕ್ಷ್ಮಿ ಪೂಜೆ ಮಾಡುವ ಮುನ್ನ ಕಂಪನಿಯಿಂದ ಸಿಗುವ ಬೋನಸ್ ನಿರೀಕ್ಷೆ ಕಾರ್ಮಿಕರಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದರೆ, ಸಂಸ್ಥೆಗಳಿಂದ ಹೆಚ್ಚೆಂದರೆ ಹೊಸ ಬಟ್ಟೆ, ಸಿಹಿ ತಿಂಡಿ, ಕೇಳಿದಷ್ಟು ದಿನ ರಜಾ ಸಿಕ್ಕರೆ ಅದೇ ದೊಡ್ಡದು ಅದರೆ, ಸೂರತ್ತಿನ ಉದ್ಯಮಿ ಸಾವ್ಜಿ ಧೋಲಾಕಿಯಾ ಅವರದ್ದು ದೊಡ್ಡ ಮನಸ್ಸು.
ಸೂರತ್ತಿನ ಹರಿಕೃಷ್ಣ ಎಕ್ಸ್ ಪೋರ್ಟ್ ಸಂಸ್ಥೆಯಿಂದ ದೀಪಾವಳಿ ಉಡುಗೊರೆ ಎಂದು ಹೇಳಿ ತನ್ನ ನೌಕರರಿಗೆ ಕಾರು, ಎರಡು ಬೆಡ್ ರೂಮಿನ ಅಪಾರ್ಟ್ಮೆಂಟ್, ವಜ್ರಾಭರಣ ಸೇರಿದಂತೆ ಭರ್ಜರಿ ಉಡುಗೊರೆ ನೀಡಿದ್ದಾರೆ. ವಿಶ್ವದೆಲ್ಲೆಡೆ ಸುಮಾರು 7500ಕ್ಕೂ ಅಧಿಕ ಉದ್ಯೋಗಿಗಳು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 1200 ಮಂದಿ ಇದರಲ್ಲಿ ಲಕ್ಕಿ ಎನಿಸಿದ್ದಾರೆ.

ಇವರಲ್ಲಿ 491 ಜನರಿಗೆ ಕಾರ್, 525 ಜನರಿಗೆ ದುಬಾರಿ ಬೆಲೆಯ ಚಿನ್ನಾಭರಣಗಳು ಹಾಗೂ 200 ಜನರಿಗೆ ಎರಡು ಬೆಡ್ ರೂಂಗಳ ಫ್ಲಾಟ್ ಉಡುಗೊರೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಎಲ್ಲವು ಸೇರಿ 50 ಕೋಟಿ ರುಪಾಯಿಗಳನ್ನು ದೀಪಾವಳಿ ಬೋನಸ್ ಪ್ಯಾಕೇಜ್ ಘೋಷಿಸಿದ್ದಾರೆ.
ಧೋಲಾಕಿಯಾ ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ . 2012ರಲ್ಲಿ ಕೂಡಾ ಮೂವರಿಗೆ ಕಾರು ನೀಡಿದ್ದರು. ಕಳೆದ ವರ್ಷ 72 ಉದ್ಯೋಗಿಗಳಿಗೆ ಕಾರು ನೀಡಿದ್ದರು.
ಹೃಷಿಕೇಶ್ ಎಕ್ಸ್ ಪೋರ್ಟ್ಸ್: ಭಾರತ ಸೇರಿದಂತೆ ಯುಎಸ್, ಬೆಲ್ಜಿಯಂ, ಚೀನಾದಲ್ಲಿ ವಜ್ರ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆ ಇದಾಗಿದೆ. ಸಂಸ್ಥೆ ಲಾಭದಾಯಕವಾಗಿದೆ. ಇದಕ್ಕೆ ಸಂಸ್ಥೆಯ ಕಾರ್ಮಿಕರೇ ಕಾರಣ. ಲಾಭವನ್ನು ಎಲ್ಲರೂ ಹಂಚಿಕೊಂಡು ಆನಂದಿಸೋಣ ಎಂದು ಧೋಲಾಕಿಯಾ ಹೇಳಿದ್ದಾರೆ.
ವಜ್ರಾಭರಣಗಳನ್ನು ಕತ್ತರಿಸುವ ಹಾಗೂ ಪಾಲಿಶ್ ಮಾಡುವ ಉದ್ಯಮದಲ್ಲಿ ಸೂರತ್ ಪ್ರಮುಖ ಕೇಂದ್ರವಾಗಿದ್ದು, ಸುಮಾರು 2,500 ಕಾರ್ಖಾನೆ ಹಾಗೂ 4,00,000 ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ.












Click it and Unblock the Notifications