ಜಯಾ ಆಸ್ತಿ ಕೇಸ್: ಕರ್ನಾಟಕಕ್ಕೆ 100 ಕೋಟಿ ಗೋವಿಂದ
ಕರ್ನಾಟಕವು ಜಯಾ ಅವರ ಭದ್ರತೆ ಹಾಗೂ ನ್ಯಾಯಾಲಯದ ಕಲಾಪಗಳಿಗಾಗಿ ಖರ್ಚು ಮಾಡಿರುವ ಸುಮಾರು 100 ಕೋಟಿ ರು. ಹಣವನ್ನು ರಾಜ್ಯ ಸರ್ಕಾರಕ್ಕೆ ಜಯಲಲಿತಾ ಕಡೆಯಿಂದ ಪಾವತಿಯಾಗಬೇಕು ಎಂದು ಕೆಳ ಹಂತದ ನ್ಯಾಯಾಲಯ ಆದೇಶಿಸಿತ್ತು.
ನವದೆಹಲಿ, ಏಪ್ರಿಲ್ 5: ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಅವರನ್ನು ಅಪರಾಧಿಯೆಂದು ತೀರ್ಮಾನಿಸುವುದಿಲ್ಲವೆಂದು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ಪ್ರಕರಣದಿಂದ ಜಯಲಲಿತಾ ಹೆಸರನ್ನು ಕೈಬಿಟ್ಟಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಸುಪ್ರೀಂ ಕೋರ್ಟ್ ನ ಈ ನಡೆಯಿಂದಾಗಿ, ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ 100 ಕೋಟಿ ರು. ಕೈಬಿಟ್ಟಂತಾಗಿದೆ. ಈ ಹಿಂದೆ, ಕೆಳ ಹಂತದ ನ್ಯಾಯಾಲಯವು ಜಯಾ ಅವರಿಗೆ ಅಕ್ರಮ ಆಸ್ತಿ ಮಾಡಿದ ಅಪರಾಧಕ್ಕಾಗಿ 100 ಕೋಟಿ ದಂಡ ವಿಧಿಸಿತ್ತಲ್ಲದೆ, ಆ ದಂಡವನ್ನು ಕರ್ನಾಟಕ ಸರ್ಕಾರವೇ ವಸೂಲಿ ಮಾಡಬೇಕೆಂದು ಆದೇಶಿಸಿತ್ತು.

ಆ ತೀರ್ಪಿನಂತೆ, ಪ್ರಕರಣದ ವಿಚಾರಣೆಯು ಕರ್ನಾಟಕದಲ್ಲಿ ನಡೆದಿದ್ದರಿಂದ ಕರ್ನಾಟಕ ಸರ್ಕಾರಕ್ಕೆ ಜಯಾ ಅವರ ಅಕ್ರಮ ಆಸ್ತಿಯನ್ನು ಹರಾಜು ಹಾಕುವ ಹಕ್ಕನ್ನು ನೀಡಲಾಗಿದ್ದು, ಹಾಗೆ ಹರಾಜು ಹಾಕಿ ಬರುವ ಹಣದಲ್ಲಿ ನೂರು ಕೋಟಿ ರು ಹಣವನ್ನು ಸರ್ಕಾರ ತಮಿಳುನಾಡು ಸರ್ಕಾರಕ್ಕೆ ನೀಡಬೇಕು ಎಂದು ಕೆಳ ಹಂತದ ನ್ಯಾಯಾಲಯ ಹೇಳಿತ್ತು.
ಆದರೆ, ಆ ಹರಾಜು ಹಣವು ತನಗೇ ಸೇರಬೇಕೆಂಬುದು ಕರ್ನಾಟಕದ ವಾದವಾಗಿತ್ತು.
ಆನಂತರ, ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಿಂದಾಗಿ ಕರ್ನಾಟಕ ಸುಮ್ಮನಾಗಿತ್ತು. ಇದೇ ವರ್ಷ ಫೆಬ್ರವರಿ 14, 2017ರಂದು ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ, ಅಂತಿಮ ತೀರ್ಪಿನ ಪ್ರತಿಯಲ್ಲಿ ಜಯಲಲಿತಾ ಅವರ ಹೆಸರನ್ನು ಅವರು ನಿಧನರಾದ ಹಿನ್ನೆಲೆಯಲ್ಲಿ ಕೈಬಿಟ್ಟಿತು.
ಹಾಗಾಗಿ, ಪ್ರಕರಣದ ಸಹ ಆರೋಪಿಗಳಾಗಿದ್ದ ಶಶಿಕಲಾ, ಇಳವರಸಿ, ಸುಧಾಕರನ್ ಅವರಿಗೆ ಮಾತ್ರ ಜೈಲು ಶಿಕ್ಷೆ ಘೋಷಿಸಿತು.
ರಾಜ್ಯದ ವಾದವೇನಾಗಿತ್ತು?: ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸುವಾಗ ಜಯಲಲಿತಾ ಅವರ ಹೆಸರನ್ನು ಕೈಬಿಟ್ಟಿರುವುದನ್ನು ರಾಜ್ಯ ಸರ್ಕಾರ 'ತೀರ್ಪು ಮರು ಪರಿಶೀಲನಾ ಅರ್ಜಿ'ಯಲ್ಲಿ ಪ್ರಶ್ನಿಸಿದೆ. ಪ್ರಕರಣದ ವಿಚಾರಣೆ ಮುಗಿದು ತೀರ್ಪನ್ನು ಕಾಯ್ದಿರಿಸಿದಾಗ ಬದುಕಿದ್ದ ಜಯಲಲಿತಾ ಅವರು, ತೀರ್ಪು ಬರುವ ಹೊತ್ತಿಗೆ ನಿಧನರಾಗಿದ್ದಾರೆ.
ಹೀಗಾಗಿ, 2013ರ ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ವಿಚಾರಣೆ ಹಂತದಲ್ಲಿ ಆರೋಪಿ ತೀರಿಕೊಂಡರೆ ಅವರ ಹೆಸರನ್ನು ಕೈಬಿಡಬಹುದು. ಆದರೆ, ವಿಚಾರಣೆ ಮುಗಿದು ತೀರ್ಪು ಹೊರಬೀಳುವ ಅವಧಿಯ ನಡುವಿನ ಸಮಯದಲ್ಲಿ ಆರೋಪಿಯು ತೀರಿಕೊಂಡರೆ ಅವರನ್ನು ಪ್ರಕರಣದಿಂದ ಕೈಬಿಡುವ ಹಾಗಿಲ್ಲ.
ಜಯಲಲಿತಾ ಪ್ರಕರಣದಲ್ಲೂ ವಿಚಾರಣೆ ಮುಗಿದಾಗ ಅವರು (ಜಯಾ) ಬದುಕಿದ್ದರು. ಆದರೆ, ತೀರ್ಪು ಹೊರಬೀಳುವ ಹೊತ್ತಿಗೆ ಅವರು ನಿಧನರಾಗಿದ್ದರು. ಹಾಗಾಗಿ, 2013ರ ಸುಪ್ರೀಂ ಕೋರ್ಟ್ ನಿಯಮಗಳ ಪ ್ರಕಾರ, ಅಂತಿಮ ತೀರ್ಪಿನಲ್ಲಿ ಜಯಲಲಿತಾ ಅವರ ಹೆಸರನ್ನು ಕೈ ಬಿಡುವಂತಿಲ್ಲ ಎಂದು ರಾಜ್ಯ ಸರ್ಕಾರ ತನ್ನ ವಾದವನ್ನು ಮಂಡಿಸಿತ್ತು.
ರಾಜ್ಯ ಸರ್ಕಾರ ಈ ವಾದ ಮಂಡಿಸುವ ಹಿಂದಿನ ಉದ್ದೇಶ ದಂಡದ ರೂಪದಲ್ಲಿ ಕರ್ನಾಟಕ ಸರ್ಕಾರವು ನಿರೀಕ್ಷಿಸುತ್ತಿದ್ದ ಹಣ ಬರಲಿ ಎಂಬುದೇ ಆಗಿತ್ತು.
ನ್ಯಾಯ ಪೀಠ ಹೇಳಿದ್ದೇನು?: ಆದರೆ, ಕರ್ನಾಟಕದ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ ನ್ಯಾ. ಪಿ.ಸಿ. ಘೋಷ್ ಹಾಗೂ ಅಮಿತಾವ ರಾಯ್ ಅವರು ಪ್ರಕರಣದ ತೀರ್ಪಿನಲ್ಲಿ ಯಾವುದೇ ಲೋಪವಾಗಿಲ್ಲ. ಜಯಲಲಿತಾ ಅವರನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಸುುಪ್ರೀಂ ಕೋರ್ಟ್ ಹೇಳಿರುವ ಮತ್ತೊಂದು ವಿಚಾರವೇನೆಂದರೆ, ಕೆಳ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರ್ಕಾರವು ತನಗೆ ಬರಬೇಕಿದ್ದ 100 ಕೋಟಿ ರು. ಹಣವನ್ನು ಜಯಾ ಅವರಿಗೆ ಸೇರಿದ ಅಕ್ರಮ ಆಸ್ತಿಯನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿದೆ. ಆದರೆ, ಅದರಿಂದ ಬರುವ ದುಡ್ಡನ್ನು ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕೊಡಬೇಕಿದೆ.
ಇನ್ನು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಲ ವರ್ಷಗಳ ಹಿಂದೆ ಜಯಲಲಿತಾ ಅವರ ಮನೆಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾಗ ವಶಪಡಿಸಿಕೊಂಡಿರುವ ಸೀರೆಗಳು, ವಾಚುಗಳು, ಚಪ್ಪಲಿಗಳು ಮುಂತಾದವನ್ನು ಬೆಂಗಳೂರಿನ ನಗರ ನ್ಯಾಯಾಲಯದಲ್ಲಿ ಇಡಲಾಗಿದ್ದು, ಇವುಗಳನ್ನು ಹಿಂದಿರುಗಿಸಬೇಕೆಂದು ನ್ಯಾಯಪೀಠ ಹೇಳಿದೆ.












Click it and Unblock the Notifications