ನಮ್ಮ ಆದೇಶದಂತೆ 'ಅವನಿ' ಹತ್ಯೆ ನಡೆದಿದೆ: ನ್ಯಾಯಾಂಗ ನಿಂದನೆ ತಿರಸ್ಕರಿಸಿದ ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ 26: ನರಭಕ್ಷಕ ಹೆಣ್ಣು ಹುಲಿ 'ಅವನಿ'ಯ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅರಣ್ಯ ಅಧಿಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ. ಅವನಿಯ ಹತ್ಯೆಯನ್ನು ನ್ಯಾಯಾಲಯದ ನಿರ್ದೇಶನದಂತೆಯೇ ನಡೆಸಲಾಗಿದೆ ಎಂದು ಕೋರ್ಟ್ ಹೇಳಿದೆ.
ಅವನಿ ಅಥವಾ ಟಿ1 ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಹೆಣ್ಣು ಹುಲಿಯನ್ನು ಸುಪ್ರೀಂಕೋರ್ಟ್ ಆದೇಶದ ವಿರುದ್ಧವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ವನ್ಯಜೀವಿ ಕಾರ್ಯಕರ್ತೆ ಸಂಗೀತಾ ಡೋಗ್ರಾ, ಅರಣ್ಯ ಅಧಿಕಾರಿಗಳು, ಸರ್ಕಾರದ ಇತರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಅಸ್ಗರ್ ಅಲಿ ಎಂಬ ಬೇಟೆಗಾರನ ನೆರವಿನಿಂದ ಅವನಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಬಳಿಕ ಅಸ್ಗರ್ ಅಲಿಗೆ ಬಹುಮಾನವಾಗಿ ಹುಲಿಯ ಬೆಳ್ಳಿ ವಿಗ್ರಹವನ್ನು ನೀಡಲಾಗಿತ್ತು. ಹುಲಿಯನ್ನು ಕೊಂದಿದ್ದಕ್ಕಾಗಿ ಗ್ರಾಮಸ್ಥರ ಕೈಯಿಂದ ಬಹುಮಾನ ನೀಡಲಾಗಿತ್ತು ಎಂದು ಸಂಗೀತಾ ಆರೋಪಿಸಿದ್ದರು.

ನ್ಯಾಯಾಲಯದ ಆದೇಶದಂತೆ ಹುಲಿ ಹತ್ಯೆ ಮಾಡಲಾಗಿದೆ. ಇದರ ಯಾವ ಹಂತದಲ್ಲಿಯೂ ಅರಣ್ಯ ಅಧಿಕಾರಿಗಳು ಭಾಗವಹಿಸಿರಲಿಲ್ಲ. ತನಿಖೆ ಕೂಡ ಇದನ್ನು ಖಚಿತಪಡಿಸಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತು.
ತಮ್ಮ ಮೇಲೆ ಮತ್ತೆ ಹುಲಿ ದಾಳಿ ಮಾಡುವುದಿಲ್ಲ ಎಂದು ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಇದಕ್ಕೆ ಅರಣ್ಯ ಅಧಿಕಾರಿಗಳು ಹೊಣೆಯಾಗುತ್ತಾರೆಯೇ? ಎಂದು ಅರ್ಜಿದಾರರನ್ನು ಸಿಜೆಐ ಎಸ್ಎ ಬೊಬ್ಡೆ ಪ್ರಶ್ನಿಸಿದರು.












Click it and Unblock the Notifications