ಪ್ರತಿಭಟನೆ ಹೆಸರಿನಲ್ಲಿ ಗಲಭೆ, ಪುಂಡಾಟಿಕೆ ಮಾಡುವವರಿಗೆ ಕಾದಿದೆ ಕಠಿಣ ಶಿಕ್ಷೆ
ನವದೆಹಲಿ, ಅಕ್ಟೊಬರ್ 1: ಸಾರ್ವಜನಿಕ ಪ್ರತಿಭಟನೆಯ ಹೆಸರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವುದು ಮತ್ತು ಗೂಂಡಾಗಿರಿ ಮಾಡುವುದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ಹೆಚ್ಚುವರಿ ಮಾರ್ಗದರ್ಶಿಗಳನ್ನು ನೀಡಿದೆ.
ಪ್ರತಿಭಟನೆ ವೇಳೆ ನಡೆಯುವ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ದೌರ್ಜನ್ಯ, ಗೂಂಡಾಗಿರಿ ಮುಂತಾದವುಗಳ ವಿರುದ್ಧ ಮಾರ್ಗದರ್ಶಿ ರಚಿಸುವಂತೆ ಕೋರಿ ಕೊಡುಂಗಲ್ಲೂರ್ ಫಿಲಂ ಸೊಸೈಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ನಿರ್ದೇಶನ ಹೊರಡಿಸಿದೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತ್' ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕರ್ಣಿ ಸೇನಾ ಸೇರಿದಂತೆ ವಿವಿಧ ರಜಪೂತ ಸಂಘಟನೆಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಿ, ಚಿತ್ರಮಂದಿರಗಳಿಗೆ ಹಾನಿಪಡಿಸಿದ್ದವು. ಸಿನಿಮಾ ಚಿತ್ರೀಕರಣ ಸೆಟ್ ಮೇಲೆಯೂ ದಾಳಿ ನಡೆದ ಘಟನೆಗಳು ವರದಿಯಾಗಿದ್ದವು.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಚಿತ್ರದಲ್ಲಿ ರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
Supreme Court issues additional guidelines to deter acts of vandalism and hooliganism carried out in the name of public protests. pic.twitter.com/X2Q4P2UjUf
— ANI (@ANI) 1 October 2018
ಸುಪ್ರೀಂಕೋರ್ಟ್ ರೂಪಿಸಿರುವ ಮಾರ್ಗದರ್ಶಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸುವಂತೆ ಅರ್ಜಿ ಕೋರಿತ್ತು.

ಇದಕ್ಕೂ ಮುನ್ನ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ದೇಶದಾದ್ಯಂತ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಎಸಗಿದ ಘಟನೆಯನ್ನು 'ಸಮಾಧಿ ಸ್ಥಿತಿ ನಿರ್ಮಾಣವಾಗಿದೆ' ಎಂದು ವ್ಯಾಖ್ಯಾನಿಸಿತ್ತು.
ಪ್ರತಿಭಟನೆಯ ಹೆಸರಿನಲ್ಲಿ ಗುಂಪುಗಳು ನಡೆಸುವ ಅಂತಹ ಘಟನೆಗಳನ್ನು ಹತ್ತಿಕ್ಕಲು ವಿಸ್ತೃತ ಮಾರ್ಗದರ್ಶಿ ನೀಡುವುದಾಗಿ ನ್ಯಾಯಪೀಠ ಹೇಳಿತ್ತು.
ಇಂತಹ ಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉದಾಹರಣೆ ನೀಡಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಇದೇ ರೀತಿ ಪೊಲೀಸರ ಮೇಲೆ ಹೊಣೆಗಾರಿಕೆ ನಿಗದಿಪಡಿಸುವಂತೆ ಕೋರಿದರು.
ಪ್ರತಿ ವಾರದವೂ ದೇಶದಲ್ಲಿ ಒಂದಲ್ಲ ಒಂದು ಗಲಭೆಗಳು ಪ್ರತಿಭಟನೆ ಹೆಸರಿನಲ್ಲಿ ನಡೆಯುತ್ತಿರುತ್ತವೆ. ಆದರೆ ಅದರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಪೊಲೀಸರ ಕಣ್ಣ ಮುಂದೆಯೇ ಘಟನೆ ನಡೆದರೂ ಎಫ್ಐಆರ್ ಕೂಡ ದಾಖಲಾಗುವುದಿಲ್ಲ ಎಂದು ಅವರು ಆರೋಪಿಸಿದರು.
ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ ಕೋರ್ಟ್, ಆದೇಶವನ್ನು ಬಳಿಕ ನೀಡುವುದಾಗಿ ತಿಳಿಸಿತು.












Click it and Unblock the Notifications