ಭಾರತದ ಭವಿಷ್ಯ ಬದಲಿಸಲಿರುವ ಸುಪ್ರೀಂಕೋರ್ಟ್ನ 10 ಮಹತ್ವದ ತೀರ್ಪುಗಳು
ನವದೆಹಲಿ, ಸೆಪ್ಟೆಂಬರ್ 29: 2018ನೇ ವರ್ಷ ಭಾರತದ ನ್ಯಾಯಾಂಗದ ಪಾಲಿಗೆ ಬಹಳವೇ ಮಹತ್ವವಾದುದು. ಈ ವರ್ಷದಲ್ಲಿ ಅತ್ಯಂತ ಮಹತ್ವವಾದ ಭಾರತದ ಭವಿಷ್ಯ ಬದಲಾಯಿಸು ತೀರ್ಪುಗಳು ಸುಪ್ರೀಂಕೋರ್ಟ್ನಿಂದ ಹೊರಬಿದ್ದವು.
ವಿಶ್ವ ತಿರುಗಿ ನೋಡುವಂತಹ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಈ ವರ್ಷ ನೀಡಿತು. ವರ್ಷದ ಆರಂಭದಲ್ಲಿ ನ್ಯಾಯಮೂರ್ತಿಗಳ ಮುನಿಸಿನಿಂದ ಸುದ್ದಿಯಾಗಿದ್ದ ನ್ಯಾಯಾಂಗ ಆ ನಂತರ ಜನರ ಹಕ್ಕುಗಳನ್ನು ಎತ್ತಿಹಿಡಿಯುವ. ಸಂವಿಧಾನದ ಸಮಾನತೆಯ ಸಂದೇಶವನ್ನು ಜನರಿಗೆ ತಲುಪಿಸುವ ಧೂತನಾಗಿ ಕಂಡಿತು.
2018ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳು, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಧರ್ಮಾತೀತತೆ, ಮೂಲಭೂತ ಹಕ್ಕು, ಖಾಸಗಿತನ ಇಂತಹಾ ಅತಿ ಮಹತ್ವದ ಸಾಂವಿಧಾನಿಕ ಹಕ್ಕುಗಳ ಬಗ್ಗೆಯೇ ಆಗಿರುವುದು ವಿಶೇಷ.
2018ರ ಹಲವು ತೀರ್ಪುಗಳು ಸರ್ಕಾರಗಳು ಇಷ್ಟು ವರ್ಷಗಳ ಕಾಲ ಜನರಿಗೆ ಕೊಡಲಾಗದಿದ್ದ ಎಷ್ಟೋ ಸಾವಿಂಧಾನಿಕ ಹಕ್ಕುಗಳನ್ನು ನ್ಯಾಯಾಲಯ ಜನರಿಗೆ ಒದಗಿಸಿದೆ ಎಂದರೆ ತಪ್ಪಾಗಲಾರದು. 2018ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಪ್ರಮುಖ ತೀರ್ಪುಗಳ ಪಟ್ಟಿ ಇಲ್ಲಿದೆ ನೋಡಿ.

ಸಲಿಂಗ ಕಾಮ ಅಪರಾಧವಲ್ಲ
ಸಲಿಂಗ ಕಾಮವನ್ನು ಅಪರಾಧವೆಂದು ಪರಿಗಣಿಸುತ್ತಿದ್ದ 80 ವರ್ಷ ಹಳೆಯ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 6ರಂದು ರದ್ದು ಮಾಡಿತು ಒಪ್ಪಿತ ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತು.

ಖಾಸಗಿತನ ಮೂಲಭೂತ ಹಕ್ಕು
ಖಾಸಗಿತನ ಎನ್ನುವುದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಆಗಸ್ಟ್ 24ರಂದು ತೀರ್ಪು ನೀಡಿತು. ಡಿಜಿಟಲ್ ಯುಗದಲ್ಲಿ ಖಾಸಗಿತನವು ಬಲವಂತದಿಂದ ಬಹಿರಂಗವಾಗುತ್ತಿರುವ ಸಂದರ್ಭದಲ್ಲಿ ಸುಪ್ರೀಂನ ಈ ತೀರ್ಪು ಜನರಲ್ಲಿ ನಂಬಿಕೆ ಹುಟ್ಟಿಸಿತು.

ಹಾದಿಯಾ ಮದುವೆ ಎತ್ತಿಹಿಡಿದ ಸುಪ್ರೀಂ
ದೇಶದಾದ್ಯಂತ ಸುದ್ದಿ ಮಾಡಿರುವ ಕೇರಳದ ಹಾದಿಯಾ-ಶಫೀನ್ ಮದುವೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಹಾದಿಯಾಳ ಪೋಕರು ಇದೊಂದು 'ಲವ್ ಜಿಹಾದ್' ಪ್ರಕರಣ ನ್ಯಾಯಾಲಯವು ಅವರ ಮದುವೆಯನ್ನು ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಇದನ್ನು ನಿರಾಕರಿಸಿ ಅವರಿಬ್ಬರ ಮದುವೆಯನ್ನು ಊರ್ಜಿತಗೊಳಿಸಿತು.

ಯುಥನಾಸಿಯಾಕ್ಕೆ ಅನುಮತಿ
ಐಚ್ಛಿಕ ಸಾವಿಗೆ ಅನುಮತಿ ನೀಡು ತೀರ್ಪನ್ನು ಸುಪ್ರಿಂಕೋರ್ಟ್ ಮಾರ್ಚ್ 2018ರಂದು ನೀಡಿತು. ಬದುಕಲಾರದ ಸ್ಥಿತಿಯಲ್ಲಿರುವ ರೋಗಿಗಳು ಐಚ್ಛಿಕ ಸಾವಿಗೆ ಮನವಿ ಮಾಡಬಹುದು ಹಾಗೂ ಅವರಿಗೆ ಐಚ್ಛಿಕ ಸಾವು ಕರುಣಿಸಬಹುದು ಎಂದು ಸಿಐಜೆ ದೀಪಕ್ ಮಿಶ್ರಾ ಸೇರಿದ ಮೂರು ನ್ಯಾಯಾಧೀಶರ ಪೀಠ ಆಜ್ಞೆ ಮಾಡಿತು.

ಆಧಾರ್ಗೆ ಸಾಂವಿಧಾನಿಕ ಮಾನ್ಯತೆ
ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತು. ಇದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಿಕ್ಕ ಬಹು ದೊಡ್ಡ ಗೆಲುವು ಎಂದೇ ಬಿಂಬಿತವಾಯಿತು. ಸುಪ್ರೀಂ ತನ್ನ ಆದೇಶದಲ್ಲಿಯೇ ಯಾವ ಸೇವೆಗಳಿಗೆ ಆಧಾರ್ ಕಡ್ಡಾಯ ಹಾಗೂ ಯಾವುದಕ್ಕೆ ಇಲ್ಲ ಎಂದು ತಿಳಿಸಿದೆ.

ಅಯೋಧ್ಯೆ ತೀರ್ಪು
ನಮಾಜು ಮಾಡಲು ಮಸೀದಿಯೇ ಆಗಬೇಕೆಂದಿಲ್ಲ ಎಂದು ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಹೇಳಿದೆ. ಅಷ್ಟೆ ಅಲ್ಲದೆ ಅಕ್ಟೋಬರ್ 29ರಿಂದ ಪ್ರತಿದಿನವೂ ಅಯೋಧ್ಯೆ ವಿವಾದ ಕುರಿತು ವಿಚಾರಣೆ ನಡೆಸುವುದಾಗಿಯೂ ಹೇಳಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ
ಶಬರಿಮಲೆಗೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ನಿನ್ನೆ (ಸೆಪ್ಟೆಂಬರ್ 28) ನೀಡಿರುವ ತೀರ್ಪು ಮಹಿಳಾ ಸ್ವಾತಂತ್ರ್ಯಕ್ಕೆ ಇಂಬು ನೀಡಿದೆ. ದಶಕಗಳ ಕಾಲದಿಂದ ಇದ್ದ ನಿರ್ಭಂಧವನ್ನು ಈ ತೀರ್ಪು ತೆರವುಗೊಳಿಸಿದೆ.

ವ್ಯಭಿಚಾರ ಅಪರಾಧವಲ್ಲ
ವ್ಯಭಿಚಾರವು ಅಪರಾಧವಲ್ಲ ಹಾಗೂ ಪತ್ನಿಯು ಪತಿಯ ಅಡಿ ಆಳಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ವಿಷಯವಾಗಿ ಈಗಾಗಲೇ ಹಲವು ಚರ್ಚೆಗಳು ಆರಂಭವಾಗಿದೆ. ಈ ತೀರ್ಪು ಭಾರತದ ಕುಟುಂಬ ಪದ್ಧತಿಗೆ ಹಾನಿ ಮಾಡುತ್ತದೆ ಎನ್ನಲಾಗಿದೆಯಾದರೂ ಇದರ ಹಿಂದೆ ಪತ್ನಿ ಪತಿ ಸಮಾನರು ಎಂಬ ಉದ್ದೇಶವೂ ಇರುವುದು ಕಾಣುತ್ತದೆ.

ತ್ರಿವಳಿ ತಲಾಖ್ ಅಸಾಂವಿಧಾನಿಕ
ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. 2016ರಲ್ಲಿ ಶಾಯರಾ ಬಾನೋ ಎಂಬುವರು ತನ್ನ ಪತಿ ನೀಡಿದ ತ್ರಿವಳಿ ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಂತರ ಐದು ಜನರ ಪೀಠವು 3:2 ಅನುಪಾತದಲ್ಲಿ ತೀರ್ಪು ನೀಡಿತು. ಬಹುಮತದ ಅನ್ವಯ ತ್ರಿವಳಿ ತಲಾಖ್ ಅಸಾವಿಂಧಾನಿಕ ಎಂದು ತೀರ್ಪು ನೀಡಲಾಯಿತು. ಇದೀಗ ಕೇಂದ್ರವು ಸುಗ್ರೀವಾಜ್ಞೆ ಮೂಲಕ ತ್ರಿವಳಿ ತಾಲಾಖ್ ನಿಷೇಧವನ್ನು ಜಾರಿಗೆ ತಂದಿದೆ.

ಇನ್ನೂ ಹಲವು ಪ್ರಮುಖ ತೀರ್ಪುಗಳು
ಪಾರ್ಸಿ ಹೆಣ್ಣುಮಕ್ಕಳ ಮದುವೆ ನಂತರದ ಹಕ್ಕುಗಳ ಕುರಿತ ತೀರ್ಪು, ಸುಪ್ರೀಂಕೋರ್ಟ್ ಕಲಾಪವನ್ನು ಲೈವ್ ಪ್ರಸಾರ ಮಾಡುವ ತೀರ್ಪು, ನೋಟಾ ಆಯ್ಕೆಯನ್ನು ಸೇರಿಸುವ ಕುರಿತಾದ ತೀರ್ಪು, ಅಪರಾಧಿ ಎಂದು ಶಿಕ್ಷೆಗೊಳಪಟ್ಟ ಸಂಸದ ಅಥವಾ ಇನ್ನಾವುದೇ ಜನಪ್ರತಿನಿಧಿಯ ಸದಸ್ಯತ್ವ ರದ್ದಾಗುತ್ತದೆ ಎಂದು ನೀಡಿದ ತೀರ್ಪು. ಇನ್ನೂ ಹಲವು ಅತ್ಯಂತ ಪ್ರಮುಖ ತೀರ್ಪುಗಳನ್ನು ಸುಪ್ರೀಂಕೋರ್ಟ್ ನೀಡಿದೆ.












Click it and Unblock the Notifications