ಕಗ್ಗಂಟಾಗಲಿದೆಯೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕ?
ನವದೆಹಲಿ, ಫೆಬ್ರವರಿ 13: ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳು ಇದೇ ಆಗಸ್ಟ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಆದರೆ ಇದುವರೆಗೂ ಸುಪ್ರೀಂಕೋರ್ಟ್ಗೆ ಹೊಸ ನ್ಯಾಯಮೂರ್ತಿಗಳನ್ನು ಪದೋನ್ನತಿಗೊಳಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸುಗಳನ್ನು ರವಾನಿಸಿಲ್ಲ.
ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರು ಈ ವರ್ಷದ ಏಪ್ರಿಲ್ 23ರಂದು ನಿವೃತ್ತರಾಗಲಿದ್ದು, ಸುಪ್ರೀಂಕೋರ್ಟ್ಗೆ ಯಾವುದೇ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡದೆ ಹುದ್ದೆಯಿಂದ ಇಳಿಯುವ ಪರಂಪರೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಸಿಜೆಐ ಸೇರಿದಂತೆ ಐವರು ಅತಿ ಹಿರಿಯ ನ್ಯಾಯಮೂರ್ತಿಗಳ ಒಳಗೊಂಡ ಸುಪ್ರೀಂಕೋರ್ಟ್ ಕೊಲಿಜಿಯಂ, ಸುಪ್ರೀಂಕೋರ್ಟ್ಗೆ ಹೆಸರುಗಳನ್ನು ಪದೋನ್ನತಿ ಮಾಡಲು ಒಪ್ಪಿಕೊಂಡಿಲ್ಲ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

ಒಂದು ಹೆಸರಿನ ಕಾರಣ ಈ ಅಸಮ್ಮತಿ ಉಂಟಾಗಿದೆ ಎನ್ನಲಾಗಿದೆ. ಪ್ರಸ್ತುತ ತ್ರಿಪುರಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿರುವ ಅಕಿಲ್ ಖುರೇಷಿ ಅವರನ್ನು ಈ ಹಿಂದೆ ಸಿಜೆಯನ್ನಾಗಿ ಪದೋನ್ನತಿ ಮಾಡಿದ್ದು ವಿವಾದ ಸೃಷ್ಟಿಸಿತ್ತು. ತ್ರಿಪುರಾ ಹೈಕೋರ್ಟ್ಗೆ ಅವರನ್ನು ಸಿಜೆಯನ್ನಾಗಿ ನೇಮಿಸಲು ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಪ್ರಸ್ತುತ ದೇಶದಲ್ಲಿನ ಅತಿ ಹಿರಿಯ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಖುರೇಷಿ ಕೂಡ ಇದ್ದಾರೆ.
2019ರ ನವೆಂಬರ್ನಲ್ಲಿ ಸಿಜೆಐ ಹುದ್ದೆ ಸ್ವೀಕರಿಸಿದ ಬಳಿಕ ಬೊಬ್ಡೆ ನೇತೃತ್ವದ ಕೊಲಿಜಿಯಂ ಹೈಕೋರ್ಟ್ಗಳಿಗೆ ಅನೇಕ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ ಸುಪ್ರೀಂಕೋರ್ಟ್ಗೆ ಯಾವ ಹೆಸರನ್ನೂ ಶಿಫಾರಸು ಮಾಡಿಲ್ಲ.
ಸಿಜೆಐ ಬೊಬ್ಡೆ ನೇತೃತ್ವದ ಕೊಲಿಜಿಯಂ ಇದುವರೆಗೂ 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಈ ವರ್ಷವೂ ಕನಿಷ್ಠ ಮೂರು ಸಭೆಗಳನ್ನು ನಡೆಸಿದೆ. ಆದರೆ ಈ ಎಲ್ಲ ಸಭೆಗಳೂ ಹೈಕೋರ್ಟ್ ನ್ಯಾಯಮೂರ್ತಿಗಳ ಶಿಫಾರಸಿನ ಬಗ್ಗೆ ನಡೆದಿವೆ. ಸುಪ್ರೀಂಕೋರ್ಟ್ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳ ಪೈಕಿ ಇಂದೂ ಮಲ್ಹೋತ್ರಾ ಅವರು ಮಾರ್ಚ್ 13ರಂದು ನಿವೃತ್ತರಾಗಲಿದ್ದಾರೆ.
ಸುಪ್ರೀಂಕೋರ್ಟ್ ಒಟ್ಟು 34 ನ್ಯಾಯಮೂರ್ತಿಗಳನ್ನು ಹೊಂದಲು ಅವಕಾಶವಿದೆ. ಆದರೆ ಅದು ಪ್ರಸ್ತುತ 30 ನ್ಯಾಯಮೂರ್ತಿಗಳನ್ನು ಮಾತ್ರ ಹೊಂದಿದೆ. ನ್ಯಾಯಮೂರ್ತಿಗಳ ಪದೋನ್ನತಿಯಲ್ಲಿನ ವಿಳಂಬದಿಂದ ಈ ಸಂಖ್ಯೆ ಮತ್ತಷ್ಟು ಇಳಿಕೆಯಾಗಲಿದ್ದು, ಇದರಿಂದ ನ್ಯಾಯಪೀಠಗಳಲ್ಲಿನ ನ್ಯಾಯಮೂರ್ತಿಗಳ ಮೇಲೆ ಹೊರೆ ಹೆಚ್ಚಿಸಲಿದೆ.












Click it and Unblock the Notifications