ಭಾನುವಾರದ ಪ್ರಮುಖ ಸುದ್ದಿಗಳತ್ತ ಒಂದು ನೋಟ
ಬೆಂಗಳೂರು, ಫೆ.9 : ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನಗಳನ್ನು ಒಡಿಶಾ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಆದ್ದರಿಂದ ರಾಜ್ಯದಲ್ಲಿ ಬಡತನವಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನವೀನ್ ಪಟ್ನಾಯಕ್ ಸಮರ್ಥ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ರಾಹುಲ್ ದೂರಿದ್ದಾರೆ.
ಭಾನುವಾರ ಒಡಿಶಾದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಒಡಿಶಾ ರಾಜ್ಯ ಶ್ರೀಮಂತವಾಗಿದೆ. ಮ್ಯಾಂಗನೀಸ್, ಕಬ್ಬಿಣ, ಕಲ್ಲಿದ್ದಲು ಸೇರಿದಂತೆ ಮೂಲಭೂತ ಸಂಪನ್ಮೂಲಗಳಿಂದ ಕೂಡಿದೆ ಎಂದು ಬಣ್ಣಿಸಿದರು. ಇಂತಹ ರಾಜ್ಯದಲ್ಲಿ ಬಡತನದ ಪರಿಸ್ಥಿತಿ ನಿರ್ಮಾಣ ವಾಗಲು ರಾಜ್ಯವನ್ನು ಆಳುತ್ತಿರುವ ನವೀನ್ ಪಟ್ನಾಯಕ್ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದರು.
ಒಡಿಶಾ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಯುಪಿಎ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಆದರೆ, ನವೀನ್ ಪಟ್ನಾಯಕ್ ಅವರ ಆಡಳಿತದಿಂದಾಗಿ ಅದು ಜನರಿಗೆ ತಲುಪುತ್ತಿಲ್ಲ. ಕೇಂದ್ರದಿಂದ ಬಂದ ಹಣವನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ದೂರಿದರು. [ಭಾನುವಾರದ ಇತರ ಪ್ರಮುಖ ಸುದ್ದಿಗಳು]

ಸಿದ್ದು ವಿರುದ್ಧ ಗುರ್ ಎಂದ ಗುತ್ತೇದಾರ್
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಅಫ್ಜಲ್ ಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ 10 ಮಂದಿ ಶಾಸಕರು ಸಂಪುಟ ವಿಸ್ತರಣೆ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನಾ ಸಂಪುಟ ವಿಸ್ತರಣೆ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಶಾಸಕರಾದ ಕೆ.ಬಿ ಕೋಳಿವಾಡ, ರಾಜಶೇಖರ ಹುಮ್ನಾಬಾದ್, ಎ.ಬಿ. ಮಾಲಕರೆಡ್ಡಿ ಸೇರಿದಂತೆ ಒಟ್ಟು 10 ಶಾಸಕರ ಸಹಿ ಪತ್ರದಲ್ಲಿದ್ದು, ಪತ್ರ ಸೋನಿಯಾ ಗಾಂಧಿ ಅವರಿಗೆ ರವಾನೆಯಾಗಿದೆ.

ಪೆರೋಲ್ ವಿಸ್ತರಣೆಗೆ ಸಂಜಯ್ ದತ್ ಮನವಿ
ಪತ್ನಿ ಮಾನ್ಯತ ದತ್ ಅವರ ಅನಾರೊಗ್ಯದ ಹಿನ್ನಲೆಯಲ್ಲಿ ಮತ್ತೆ ಒಂದು ತಿಂಗಳವರೆಗೆ ಪೆರೋಲ್ ವಿಸ್ತರಿಸುವಂತೆ ಬಾಲಿವುಡ್ ನಟ ಸಂಜಯ್ ದತ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಡಿ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಸದ್ಯ ಪೆರೋಲ್ ಮೇಲೆ ಹೊರಬಂದಿದ್ದು, ಅದರ ಅವಧಿಯನ್ನು ಒಂದು ತಿಂಗಳು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ
ದೇಶಕ್ಕೆ ಪರ್ಯಾಯ ರಾಜಕೀಯ ಶಕ್ತಿ ಅವಶ್ಯಕತೆ ಇದೆ. ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿದ್ದರೆ ಅದು ಆಮ್ ಆದ್ಮಿ ಪಕ್ಷದಿಂದ ಮಾತ್ರ. ಈ ಹಿನ್ನೆಲೆಯಲ್ಲಿ ತಾವು ಆಮ್ ಅದ್ಮಿ ಪಕ್ಷದ ಪರ ಕೆಲಸ ನಿರ್ವಹಿಸುವುದಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ಬೇರೆ ಎಲ್ಲಾ ಪಕ್ಷಗಳಿಗಿಂತಲೂ ಭಿನ್ನವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದಾಗಿ ಅವರು ಹೇಳಿದ್ದಾರೆ.

1 ರೂ.ಗೆ ಅಕ್ಕಿ ಕೊಟ್ಟರೆ ಬಡತನ ಹೋಗೋಲ್ಲ
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, 1 ರೂ.ಗೆ ಅಕ್ಕಿ ಕೊಟ್ಟರೆ ರಾಜ್ಯದಲ್ಲಿ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಕುಟುಕಿದ್ದಾರೆ. ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಪ್ರಸ್ತುತ ಸರ್ಕಾರ ಹಿಂದುಳಿದ ವರ್ಗದವರಿಗೆ ನೀಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹೇಳಿದರು. ಬಡತನ ನಿರ್ಮೂಲನೆಗಾಗಿ ಸಿದ್ಧರಾಮಯ್ಯನವರು 1 ರು.ಗೆ ಕೆಜಿ ಅಕ್ಕಿಯನ್ನು ಕೊಡುತ್ತಿದ್ದಾರೆ. ಬಡವನಿಗೆ 30 ಕೆಜಿ ಅಕ್ಕಿ ಕೊಟ್ಟ ಕೂಡಲೇ ಅಲ್ಲಿ ಬಡತನ ನಿರ್ಮೂಲನೆಯಾಗಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.[ಸಮಾವೇಶದಲ್ಲಿ ಕಣ್ಣೀರಿಟ್ಟ ದೇವೇಗೌಡ]

ಮತ್ತೆ ಸೋತ ಭಾರತ
ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ, ಆಕ್ಲೆಂಡ್ ನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲೂ ಸೋಲು ಅನುಭವಿಸಿದೆ. ಭಾರತದ ವಿರುದ್ಧ 40 ರನ್ಗಳ ಅಂತದಿಂದ ವಿಜಯ ಸಾಧಿಸಿದ ಕಿವೀಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. [ಸ್ಕೋರ್ ಕಾರ್ಡ್ ನೋಡಿ]

ಮಮತಾ ಬ್ಯಾನರ್ಜಿ ಹೊಗಳಿಗೆ ಅಣ್ಣಾ
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶವನ್ನ ಮುನ್ನಡೆಸಬಲ್ಲ ಯೋಗ್ಯ ವ್ಯಕ್ತಿ ಎಂದು ಹೇಳುವ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸರಳತೆ ಇರಬೇಕೆಂದು ಭಾಷಣ ಬಿಗಿಯುವವರ ನಡುವೆ ವಾಸ್ತವದಲ್ಲಿ ಸರಳ ಜೀವನ ನಡೆಸುತ್ತಿರುವುದು ಮಮತಾ ಬ್ಯಾನರ್ಜಿ ಎಂದು ಅಣ್ಣಾ ಶ್ಲಾಘಿಸಿದ್ದಾರೆ. ಸರ್ಕಾರೀ ಬಂಗಲೆ ಬೇಡ, ವಾಹನ ಬೇಡ ಎಂದು ಹೇಳಿಕೊಳ್ಳುತ್ತಿದ್ದ ಈ ಮಂದಿ ಕೊನೆಗೆ ಅವುಗಳಿಗೇ ಗಂಟುಬಿದ್ದರು ಎಂದು ಅಣ್ಣಾ ಹಜಾರೆ ಪರೋಕ್ಷವಾಗಿ ಕೇಜ್ರಿವಾಲ್ ಅವರನ್ನು ವ್ಯಂಗ್ಯವಾಡಿದ್ದಾರೆ.












Click it and Unblock the Notifications