ಕರ್ನಾಟಕ ಸೇರಿ ದೇಶದೆಲ್ಲೆಡೆ ಗೋಡ್ಸೆ ಪ್ರತಿಮೆ ಸ್ಥಾಪನೆ!
ಬೆಂಗಳೂರು/ಚಿತ್ರದುರ್ಗ, ಡಿ.23: ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಗೆ ಎಲ್ಲಿಲ್ಲದ ಬೇಡಿಕೆ ಹುಟ್ಟಿಕೊಂಡಿದೆ. ಗೋಡ್ಸೆ ಸಂಸ್ಮರಣಾ ದಿನಾಚರಣೆ, ಗೋಡ್ಸೆ ದೇಗುಲ, ಗೋಡ್ಸೆ ಪುಸ್ತಕಕ್ಕೆ ಬೇಡಿಕೆ ನಂತರ ಈಗ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ನಾಥುರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಪರ ಸಂಘಟನೆಗಳು ಮುಂದಾಗಿವೆ.
ಕರ್ನಾಟಕದ ನಾಲ್ಕು ಕಡೆ ನಾಥೂರಾಮ್ ಗೋಡ್ಸೆ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಹೇಳಿ ಪ್ರಣಾವಾನಂದ ಸ್ವಾಮೀಜಿ ಚಿತ್ರದುರ್ಗದಲ್ಲಿ ಘೋಷಿಸಿದ್ದಾರೆ. ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿಯಲ್ಲಿ ಗೋಡ್ಸೆ ಪ್ರತಿಮೆ ಸ್ಥಾಪನೆಯಾಗಲಿದೆಯಂತೆ.
ಈ ನಡುವೆ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಸಿದ್ಧೌಲಿ ಗ್ರಾಮದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ನಾಥೂರಾಮ್ ಗೋಡ್ಸೆ ದೇವಸ್ಥಾನವನ್ನು ನಿರ್ಮಾಣ ಮಾಡಲು ಮುಂದಾಗಿದೆ. ['ಮಹಾತ್ಮಾ ಗಾಂಧೀಜಿಯಂತೆ ಗೋಡ್ಸೆ ಕೂಡಾ ದೇಶಭಕ್ತ']
ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ ಗೋಡ್ಸೆ ಕೂಡಾ ಗಾಂಧೀಜಿಯಷ್ಟೇ ದೇಶಭಕ್ತ. ಗಾಂಧೀಜಿಯನ್ನು ಕೊಂದ ವಿಷಯ ತಪ್ಪು ಅಥವಾ ಸರಿ ಎಂದು ನಾನು ಹೇಳುವುದಿಲ್ಲ. ಆದರೆ ಗೋಡ್ಸೆ ಅಪ್ಪಟ ದೇಶಭಕ್ತ, ಅಖಂಡ ಭಾರತದ ಕಲ್ಪನೆಯನ್ನು ಕಂಡವರು' ಎಂದು ಶ್ರೀರಾಮ ಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಇತ್ತೀಚೆಗೆ ಮಂಗಳೂರಿನಲ್ಲಿ ಹೇಳಿದ್ದರು.

ಮಹಾತ್ಮಾ ಗಾಂಧೀಜಿ ಹತ್ಯೆಯಾದ ದಿನ (ಜನವರಿ 30) ಗೋಡ್ಸೆ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಹಿಂದೂ ಮಹಾಸಭಾದ ವಕ್ತಾರ ಶರದ್ಗುಪ್ತ ತಿಳಿಸಿದ್ದಾರೆ. ನಾಥೂರಾಮ್ ಗೋಡ್ಸೆಯ ಹುಟ್ಟೂರು ಮಹಾರಾಷ್ಟ್ರದ ಪುಣೆಯಿಂದ ಕಲಸ್ ಯಾತ್ರಾ ಪ್ರಾರಂಭಗೊಳ್ಳಲಿದ್ದು, ಸಿದ್ಧೌಲಿ ಗ್ರಾಮಕ್ಕೆ ಆಗಮಿಸಲಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಮತಾಂತರ ವಿವಾದ, ವಿಎಚ್ಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಪ್ರಧಾನಿಗೆ ಇರಿಸು-ಮುರಿಸು ತಂದಿವೆ. ಇದರ ಬೆನ್ನಲ್ಲೆ ಇತ್ತೀಚೆಗೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿ ಭಾರೀ ಮುಜುಗರ ಉಂಟುಮಾಡಿದ್ದರು. ನಂತರ ಕ್ಷಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications