ದಕ್ಷಿಣದ ತೆರಿಗೆ ಹಣದಲ್ಲಿ ಉತ್ತರದ ಜಾತ್ರೆ, ಕೇರಳದಿಂದ ವಿರೋಧದ ರಣಕಹಳೆ
ತಿರುವನಂತಪುರಂ, ಮಾರ್ಚ್ 24: ದಕ್ಷಿಣ ರಾಜ್ಯಗಳ ತೆರಿಗೆ ಹಣದಲ್ಲಿ ಉತ್ತರ ರಾಜ್ಯಗಳ ಅಭಿವೃದ್ಧಿಯಾಗುತ್ತಿದೆ ಎಂಬ ವಿಚಾರ ಸುದ್ದಿ ಕೇಂದ್ರದಲ್ಲಿದ್ದು ಈ ಕುರಿತ ಚರ್ಚೆಗೆ ವೇದಿಕೆಯೊಂದು ಸಿದ್ದವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕೇರಳ ಹಣಕಾಸು ಸಚಿವ ಥೋಮಸ್ ಐಸಾಕ್ ಈ ಸಂಬಂಧ ಚರ್ಚೆ ನಡೆಸಲು ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಸಭೆಯನ್ನು ಇದೇ ಏಪ್ರಿಲ್ 10ರಂದು ಕರೆದಿದ್ದಾರೆ.
ತೆರಿಗೆ ಕೊಡಿ, ಅನುದಾನ ಕೇಳಬೇಡಿ: ಕೇಂದ್ರದ ಧೋರಣೆಗೆ ಸಿದ್ದು ಕೆಂಡ!
ದಕ್ಷಿಣದ ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಈ ಸಂಬಂಧ ಪತ್ರ ಬರೆದಿರುವುದಾಗಿ ಐಸಾಕ್ ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಸೈದ್ಧಾಂತಿಕವಾಗಿ ಅವರೆಲ್ಲಾ ಸಿದ್ದವಿದ್ದಾರೆ. ಆದರೆ ಇದಕ್ಕೆ ಸಮ್ಮತಿಯ ಪತ್ರವನ್ನು ಅವರಿನ್ನೂ ಕಳುಹಿಸಬೇಕಾಗಿದೆ ಎಂದು ಐಸಾಕ್ ಹೇಳಿದ್ದಾರೆ.
ಕೇಂದ್ರದ ತೆರಿಗೆ ಹಣವನ್ನು 2011ರ ಜನಗಣತಿ ಆಧರಿಸಿ ವಿತರಣೆ ಮಾಡಲು ಕೇಂದ್ರ ನಿರ್ಧರಿಸಿದ ಬೆನ್ನಿಗೆ ದಕ್ಷಿಣದ ರಾಜ್ಯಗಳು ಈ ಚರ್ಚೆಯನ್ನು ಕೈಗೆತ್ತಿಕೊಂಡಿವೆ. ಈ ಹಿಂದೆ 1971ರ ಜನಗಣತಿ ಆಧಾರದಲ್ಲಿ ತೆರಿಗೆ ಹಣ ಹಂಚಿಕೆ ಮಾಡಲಾಗುತ್ತಿತ್ತು.
ಇದು ಸರಿಯಲ್ಲ ಎಂದು ಐಸಾಕ್ ಹೇಳಿದ್ದು, ಒಕ್ಕೂಟ ವ್ಯವಸ್ಥೆಯ ಉದ್ಧೇಶಕ್ಕೇ ಇದು ಧಕ್ಕೆ ತರುತ್ತಿದೆ ಎಂದಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನೇ ಇದು ದುರ್ಬಲಗೊಳಿಸಲಿದೆ ಎಂದಿರುವ ಅವರು ರಾಜ್ಯ ಮತ್ತು ಕೇಂದ್ರದ ಆರ್ಥಿಕ ಸ್ಥಿರತೆಗೆ ಕುಂದುಂಟಾಗಲಿದೆ ಎಂದಿದ್ದಾರೆ.
"ಮಾರ್ಚ್ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ನಿರ್ಧಾರ ದಕ್ಷಿಣ ರಾಜ್ಯಗಳ ಹಿತಾಸಕ್ತಿಗಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ. ಇದನ್ನು ನಾವು ವಿರೋಧಿಸಬೇಕಾಗಿದೆ," ಎಂದು ಟ್ಟೀಟ್ ಮಾಡಿದ್ದರು. ಇದೀಗ ಕೇರಳ ಹಣಕಾಸು ಸಚಿವರು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಹಾಗೆ ನೋಡಿದರೆ ದಕ್ಷಿಣದ ರಾಜ್ಯಗಳ ತೆರಿಗೆ ಹಣವನ್ನು ಉತ್ತರದ ಅಭಿವೃದ್ಧಿಗೆ ಬಳಸುತ್ತಿದ್ದಾರೆ ಎಂದು ಮೊದಲು ಧ್ವನಿ ಎತ್ತಿದವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಕೇಂದ್ರದ ಹಣ, ರಾಜ್ಯದ ಹಣ ಎಂದಿಲ್ಲ. ಹಣ ಏನಿದ್ದರೂ ತೆರಿಗೆ ಪಾವತಿಸುವವರದ್ದು. ದಕ್ಷಿಣದ ರಾಜ್ಯಗಳು ಹೆಚ್ಚಿನ ತೆರಿಗೆ ಪಾವತಿಸುತ್ತವೆ. ಆದರೆ ಈ ಹಣವನ್ನು ಉತ್ತರದತ್ತ ತಿರುಗಿಸಲಾಗುತ್ತದೆ ಎಂದು ಅವರು ಹೇಳಿದ್ದರು.