ಗಡಿಯಲ್ಲಿ ಪಾಕ್ ತಂಟೆ, ಪ್ರಧಾನಿ ಮೋದಿ ಹೇಳಿದ್ದೇನು?
ಬೆಂಗಳೂರು, ಅ.10 : 'ಪಾಕಿಸ್ತಾನದ ಆಕ್ರಮಣಕ್ಕೆ ಕೆಚ್ಚೆದೆಯಿಂದ ಭಾರತ ಉತ್ತರ ನೀಡುತ್ತಿದೆ. ಇದರ ಫಲವಾಗಿ ಗಡಿಯತ್ತ ಗುಂಡು ಹಾರಿಸಿದ ಪಾಕಿಸ್ತಾನ ಈಗ ಕಿರುಚಾಡುತ್ತಿದೆ. ಭಾರತದಲ್ಲಿ ಕಾಲ ಬದಲಾಗಿದೆ, ತನ್ನ ಹಳೆಯ ಚಾಳಿಯನ್ನು ಇನ್ನು ಆ ದೇಶ ಸಹಿಸಿಕೊಳ್ಳದು ಎಂಬುದನ್ನು ಪಕ್ಕದ ರಾಷ್ಟ್ರ ಅರ್ಥ ಮಾಡಿಕೊಂಡಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ನರೇಂದ್ರ ಮೋದಿ ಅವರು ತಮ್ಮ ಉತ್ತರದ ಮೂಲಕ ತಿರುಗೇಟು ನೀಡಿದ್ದಾರೆ. [ಕಿಡಿಗೇಡಿ ಪಾಕಿಸ್ತಾನಕ್ಕೆ ಅರುಣ್ ಜೇಟ್ಲಿ ಕಟ್ಟೆಚ್ಚರ]

ಮಹಾರಾಷ್ಟ್ರದ ಬಾರಾಮತಿಯಲ್ಲಿ ಗುರುವಾರ ಈ ಬಗ್ಗೆ ಹೇಳಿಕೆ ನೀಡಿರುವ ಮೋದಿ, 'ಪಾಕಿಸ್ತಾನದ ಆಕ್ರಮಣಕ್ಕೆ ಕೆಚ್ಚೆದೆಯಿಂದ ಭಾರತ ಉತ್ತರ ನೀಡುತ್ತಿದೆ. ಇದರ ಫಲವಾಗಿ ಗಡಿಯತ್ತ ಗುಂಡು ಹಾರಿಸಿದ ಪಾಕಿಸ್ತಾನ ಈಗ ಕಿರುಚಾಡುತ್ತಿದೆ. ಭಾರತದಲ್ಲಿ ಕಾಲ ಬದಲಾಗಿದೆ, ನಮ್ಮ ಯೋಧರು ಆಕ್ರಮಣಕ್ಕೆ ಧೈರ್ಯದಿಂದ ಉತ್ತರ ನೀಡುತ್ತಿದ್ದಾರೆ' ಎಂದು ತಿಳಿಸಿದರು.
'ನನ್ನ ಉದ್ದೇಶಗಳು ಜನರಿಗೆ ಗೊತ್ತು. ಅವನ್ನೆಲ್ಲಾ ಪದಗಳಲ್ಲಿ ವಿವರಿಸಬೇಕಾಗಿಲ್ಲ. ಎಲ್ಲಿ ಯೋಧರು ಮಾತನಾಡಬೇಕೋ, ಅಲ್ಲಿ ಅವರು ತಮ್ಮ ಬೆರಳುಗಳಿಂದ ಬಂದೂಕಿನ ಗುಂಡಿ ಒತ್ತುವ ಮೂಲಕ ಮಾತನಾಡುತ್ತಾರೆ. ಅದೇ ಧಾಟಿಯಲ್ಲಿ ಅವರು ಮಾತು ಮುಂದುವರಿಸುತ್ತಾರೆ. ದಾಳಿಗೆ ಯೋಧರೇ ಉತ್ತರ ನೀಡುತ್ತಾರೆಯೇ ಹೊರತು ರಾಜಕಾರಣಿಗಳಲ್ಲ' ಎಂದು ಮೋದಿ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ನಾಯಕರ ಟೀಕೆ : ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಗಡಿ ಭದ್ರತೆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಮೋದಿ ಮಹಾರಾಷ್ಟ್ರದಲ್ಲಿ ಉತ್ತರ ನೀಡಿದ್ದಾರೆ.
ಸುಶೀಲ್ ಕುಮಾರ ಶಿಂಧೆ ಅವರು, 'ಬಿಜೆಪಿ ಬರೀ ಮಾತನಾಡುವ ಪಕ್ಷ. ಕೆಲಸ ಏನೂ ಇಲ್ಲ. ದೇಶದ ಗಡಿ ಪರಿಸ್ಥಿತಿ ಬಿಗಡಾಯಿಸಿದೆ. ಗಡಿ ಭಾಗದಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಅತಿಕ್ರಮಣ ಮತ್ತು ಆಕ್ರಮಣ ನಿರಂತರ ನಡೆದಿದೆ. ಆದರೂ ಏನೂ ಕ್ರಮ ಕೈಗೊಂಡಿಲ್ಲ, ಪ್ರಧಾನಿ ಮೋದಿ ವಿಧಾನಸಭೆ ಚುನಾವಣೆಯ ಪ್ರಚಾರ ನಡೆಸುತ್ತಿದ್ದಾರೆ' ಎಂದು ಆರೋಪಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರು, 'ನರೇಂದ್ರ ಮೋದಿ ದೇಶದ ಪ್ರಧಾನಿಯಂತೆ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಯಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಅವರಿಗೆ ದೇಶದ ಗಡಿ ಸಮಸ್ಯೆಗಿಂತ ಎರಡು ರಾಜ್ಯಗಳ ಚುನಾವಣೆಯೇ ಮುಖ್ಯ ವಿಷಯವಾಗಿದೆ' ಎಂದು ಟೀಕಿಸಿದ್ದರು.












Click it and Unblock the Notifications