Kerala: ಚಲಿಸುತ್ತಿದ್ದ ರೈಲಿನಲ್ಲಿ ಸಹ-ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಪಾಪಿ: 3 ಸಾವು, 9 ಮಂದಿ ಗಾಯ!
ಕೋಝಿಕ್ಕೋಡ್ ಏಪ್ರಿಲ್ 3: ಚಲಿಸುತ್ತಿದ್ದ ರೈಲಿನಲ್ಲಿ ಪಾಪಿಯೊಬ್ಬ ಸಹಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಭೀಕರ ಘಟನೆ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ರಾತ್ರಿ 9.45 ರ ಸುಮಾರಿಗೆ, ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಇಲ್ಲಿನ ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕರ ಮೇಲೆ ದಹನಕಾರಿ ದ್ರವವನ್ನು ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮವಾಗಿ ಕನಿಷ್ಠ ಎಂಟು ಜನರಿಗೆ ಸುಟ್ಟ ಗಾಯಗಳಾಗಿವೆ.

ಜೊತೆಗೆ ಇಲ್ಲಿನ ಎಲತ್ತೂರ್ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರು ಶವವಾಗಿ ಪತ್ತೆಯಾಗಿದ್ದಾರೆ. ಭಾನುವಾರ ತಡರಾತ್ರಿ ಹಳಿಯಿಂದ ಮಹಿಳೆ, ಮಗು ಮತ್ತು ಪುರುಷನ ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಗಾಯಾಳುಗಳ ವಿವರ
ಗಾಯಗೊಂಡಿರುವ ಪ್ರಯಾಣಿಕರಲ್ಲಿ ತಲಸ್ಸೆರಿಯ ಅನಿಲಕುಮಾರ್, ಅವರ ಪತ್ನಿ ಸಜಿಶಾ, ಅವರ ಮಗ ಅದ್ವೈತ್, ಕಣ್ಣೂರಿನ ರೂಬಿ ಮತ್ತು ತ್ರಿಶೂರಿನ ಪ್ರಿನ್ಸ್ ಸೇರಿದ್ದಾರೆ. ರೈಲನ್ನು ಎಲತ್ತೂರಿನಲ್ಲಿ ನಿಲ್ಲಿಸಲಾಗಿದ್ದು ಬೆಂಕಿ ಅವಘಡದ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಭಾನುವಾರ ಬೆಂಕಿ ಅವಘಡದ ನಂತರ ಮೂವರು ರೈಲಿನಿಂದ ನಾಪತ್ತೆಯಾಗಿದ್ದು ಅವರು ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ನಡೆದ ಕೂಡಲೇ ವ್ಯಕ್ತಿ ಪರಾರಿಯಾಗಿದ್ದು, ಪ್ರಯಾಣಿಕರು ತುರ್ತು ಸರಪಳಿ ಎಳೆದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಕಾಣೆಯಾಗಿದ್ದ ಮಹಿಳೆ ಮತ್ತು ಮಗು ಶವ ಪತ್ತೆ
ರೈಲು ಕಣ್ಣೂರು ತಲುಪಿದಾಗ, ಘಟನೆಯ ನಂತರ ಮಹಿಳೆ ಮತ್ತು ಮಗು ಕಾಣೆಯಾಗಿದೆ ಎಂದು ಕೆಲವು ಪ್ರಯಾಣಿಕರು ದೂರಿದರು. "ಗಾಯಗೊಂಡ ವ್ಯಕ್ತಿಯೊಬ್ಬರು ಮಹಿಳೆ ಮತ್ತು ಮಗುವನ್ನು ಹುಡುಕುತ್ತಲೇ ಇದ್ದರು. ನಾವು ಆ ಮಹಿಳೆಯ ಪಾದರಕ್ಷೆಗಳು ಮತ್ತು ಮೊಬೈಲ್ ಫೋನ್ ಅನ್ನು ಕಂಡುಕೊಂಡಿದ್ದೇವೆ" ಎಂದು ಪ್ರಯಾಣಿಕರೊಬ್ಬರು ಕಣ್ಣೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಕೂಡಲೇ ಸ್ಥಳಕ್ಕೆ ಪೊಲೀಸರು ತಲುಪಿ ಪರಿಶೀಲಿಸಿದಾಗ ಮಹಿಳೆ ಮತ್ತು ಮಗು ಮತ್ತು ಮಧ್ಯವಯಸ್ಕ ಪುರುಷ ಸೇರಿದಂತೆ ಮೂರು ಮೃತದೇಹಗಳು ಪತ್ತೆಯಾಗಿವೆ. ಬೆಂಕಿಯನ್ನು ನೋಡಿದ ನಂತರ ಅವರು ರೈಲಿನಿಂದ ಬಿದ್ದಿದ್ದಾರೆ ಅಥವಾ ಇಳಿಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆ ಕಾರ್ಯ
"ಕಾಣೆಯಾದ ಮಹಿಳೆ ಮತ್ತು ಮಗು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಅವರೊಂದಿಗೆ ಒಂದು ಗಂಡಿನ ಅಪರಿಚಿತ ಶವವಿದೆ. ಶಂಕಿತನನ್ನು ಸಿಸಿಟಿವಿ ದೃಶ್ಯಗಳಲ್ಲಿ ನಾವು ಕಂಡುಕೊಂಡಿದ್ದೇವೆ. ಆತನ ಪತ್ತೆಗಾಘಿ ತನಿಖೆ ನಡೆಯುತ್ತಿದೆ" ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆ ಮಗುವಿನ ಚಿಕ್ಕಮ್ಮ ಎಂದು ಮೂಲಗಳು ತಿಳಿಸಿವೆ. ಒಟ್ಟು ಒಂಬತ್ತು ಜನರನ್ನು ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಪೊಲೀಸರು ಹೇಳಿದ್ದೇನು?
ಆರೋಪಿಯ ಮುಖ ಚಹರೆಯನ್ನು ಸಿಸಿಟಿವಿ ದೃಶ್ಯದಲ್ಲಿ ಪತ್ತೆ ಮಾಡಲಾಗಿದೆ. ಘಟನೆ ನಡೆದ ಬಳಿಕ ಆರೋಪಿ ತಪ್ಪಿಸಿಕೊಮಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಕಾರ್ಯಚರಣೆಯಲ್ಲಿದ್ದಾರೆ. ಇನ್ನೂ ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸತ್ಯತೆ ತಿಳಿಯಲಿದೆ ಎಂದರು.












Click it and Unblock the Notifications