ಶ್ರದ್ಧಾ ಹತ್ಯೆ ಪ್ರಕರಣ: ಆಫ್ತಾಬ್ ಪೂನಾವಾಲಾ ಪಾಲಿಗ್ರಾಫ್ ಪರೀಕ್ಷೆ
ನವದೆಹಲಿ, ನವೆಂಬರ್ 21: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಅವರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು ಸೋಮವಾರ ಅನುಮತಿ ನೀಡಿದ್ದಾರೆ ಎಂಬ ವರದಿ ಬಂದಿದೆ.
ಪಾಲಿಗ್ರಾಫ್ ಪರೀಕ್ಷೆಯನ್ನು ಸುಳ್ಳು ಪತ್ತೆ ಪರೀಕ್ಷೆ ಎಂದೂ ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಕಾರ್ಡಿಯೋ-ಕಫ್ಗಳು ಮತ್ತು ಸೂಕ್ಷ್ಮ ವಿದ್ಯುದ್ವಾರಗಳು ಸೇರಿದಂತೆ ಸಾಧನಗಳನ್ನು ಪರೀಕ್ಷಿಸುವ ವ್ಯಕ್ತಿಗೆ ಹಾಕಲಾಗುತ್ತದೆ. ಉಪಕರಣಗಳು ರಕ್ತದೊತ್ತಡ, ರಕ್ತದ ಹರಿವು, ನಾಡಿ, ಉಸಿರಾಟ, ಉಸಿರಾಟದ ಲಯಗಳು, ಚರ್ಮದ ವಾಹಕತೆ, ಬೆವರು ಮತ್ತು ತೋಳು ಮತ್ತು ಕಾಲುಗಳ ಚಲನೆಯನ್ನು ಅಳೆಯುತ್ತವೆ ಮತ್ತು ದಾಖಲಿಸುತ್ತವೆ.
ಮೋಸಗೊಳಿಸುವ ಉತ್ತರಗಳು (ಅಥವಾ ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿರುವಾಗ), ನಿಜವಾದ ಸಂಗತಿಗಳನ್ನು ಹೇಳುವಾಗ ಭಿನ್ನವಾಗಿರುವ ಶಾರೀರಿಕ ಪ್ರತಿಕ್ರಿಯೆಗಳು, ವ್ಯಕ್ತಿಯ ದೇಹದಲ್ಲಿನ ಬದಲಾವಣೆಗಳು, ಉಸಿರಾಟದ ಮಾದರಿ ಮತ್ತು ಹೃದಯ ಬಡಿತವನ್ನು ತನಿಖಾಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ.
ದೆಹಲಿ ಪೊಲೀಸ್ ಮೂಲಗಳು ಆಫ್ತಾಬ್ ಪೂನಾವಾಲಾ ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳಲ್ಲಿ ಅರಣ್ಯ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಎಸೆಸಿದ್ದಾನೆ. ಅಪರಾಧ ನಡೆದ 5 ತಿಂಗಳ ನಂತರ ಈ ಘಟನೆ ಬೆಳಕಿಗೆ ಬಂದಿದ್ದು ಕೊಲೆಯ ಘೋರ ವಿವರಗಳು ದೇಶವನ್ನು ಬೆಚ್ಚಿಬೀಳಿಸಿದೆ.

ಖರ್ಚಿನ ಕಾರಣಕ್ಕೆ ಇಬ್ಬರ ನಡುವೆ ಜಗಳ
ಅಫ್ತಾಬ್ ಹಾಗೂ ಶ್ರದ್ಧಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಶ್ರದ್ಧಾ ಅಫ್ತಾಬ್ ಜೊತೆ ಇರಲು ನಿರ್ಧರಿಸಿದ್ದಳು. ಅಫ್ತಾಬ್ ಹಾಗೂ ಶ್ರದ್ಧಾ ಒಟ್ಟಿಗೆ ಹಲವು ತಿಂಗಳು ಜೀವನ ಸಾಗಿಸಿದ್ದರು. ಆದರೆ ಅದ್ಯಾವಾಗ ಹಣದ ಕೊರತೆ ಉಂಟಾಯಿತೋ ಆಗ ಇಬ್ಬರ ನಡುವೆ ಜಗಳಗಳು ಆರಂಭವಾದವು. ಆಗಾಗ ಇಬ್ಬರೂ ಹಣದ ವಿಚಾರಕ್ಕೆ ಜಗಳವಾಡಲು ಆರಂಭಿಸಿದ್ದರು. ಹಣಕಾಸಿನ ವಿಚಾರ ಬಂದಾಗಲೆಲ್ಲಾ ಅಫ್ತಾಬ್ನ ಮಾದಕ ವ್ಯಸನದ ಬಗ್ಗೆ ಶ್ರದ್ಧಾ ಪ್ರಸ್ತಾಪಿಸುತ್ತಿದ್ದಳು. ಇದಕ್ಕಾಗಿ ಅಫ್ತಾಬ್ನನ್ನು ಶ್ರದ್ಧಾ ಪದೇ ಪದೇ ನಿಂದಿಸುತ್ತಿದ್ದಳು. ಇದೇ ವಿಚಾರಕ್ಕೆ ಶ್ರದ್ಧಾ ಮೇಲೆ ಅಫ್ತಾಬ್ ಹಲ್ಲೆ ಕೂಡ ಮಾಡುತ್ತಿದ್ದನು.

ಹಿಂದೆ ಶ್ರದ್ಧಾ ಮೇಲೆ ಅಫ್ತಾಬ್ ಹಲ್ಲೆ
ಹೀಗೊಂದು ದಿನ ಅಫ್ತಾಬ್ ಶ್ರದ್ಧಾ ಮೇಲೆ ಹಲ್ಲೆ ಮಾಡಿದ್ದನು. ಪದೇ ಪದೇ ಜಗಳವಾಡುತ್ತಿದ್ದ ಇವರಿಬ್ಬರಿಗೆ ಮನೆ ಖಾಲಿ ಮಾಡಲು ಹೇಳಲಾಗಿತ್ತು. ಬೇರೆ ದಾರಿ ಕಾಣದ ಶ್ರದ್ಧಾ ತನ್ನ ಬಾಸ್ ಬಳಿ ಸಹಾಯ ಕೇಳಿದ್ದಳು. ಶ್ರದ್ಧಾಳಿಗೆ ಮಾಜಿ ಬಾಸ್ ಕಿರಣ್ ಕೂಡ ಸಹಾಯ ಹಸ್ತ ನೀಡಲು ಮುಂದಾಗಿದ್ದರು. ಮನೆ ತೊರೆದು ಕುಟುಬಸ್ಥರ ಸಹಕಾರವಿಲ್ಲದೆ ಇತ್ತ ಪ್ರೀತಿಸಿದವನ ಕಿರುಕುಳಕ್ಕೆ ಶ್ರದ್ಧಾ ಬೇಸತ್ತು ಹೋಗಿದ್ದಳು. ಆದರೆ ಈ ವಿಚಾರವನ್ನು ಆಕೆ ಯಾರ ಬಳಿ ಹೇಳಿಕೊಳ್ಳಲು ಆಗಿರಲಿಲ್ಲ. ಆಕೆ ಮೇಲೆ ಅಫ್ತಾಬ್ ಹಲ್ಲೆ ಮಾಡಿದಾಗ ಆಕೆ ಬಾಸ್ ಬಳಿ ಸಹಾಯ ಕೇಳಿದ್ದಳು.

ಕತ್ತು ಹಿಸುಕಿ ಕೊಂದು ದೇಹ ತುಂಡಾಗಿಸಿದ್ದ ಪ್ರಿಯಕರ
ಅಂದು ಮೇ 18 ರಂದು ರಾತ್ರಿ 9 ರಿಂದ 10 ಗಂಟೆಯ ನಡುವೆ ಶ್ರದ್ಧಾ ಜೊತೆ ಅಫ್ತಾಬ್ ಜಗಳವಾಡಿ ಮನೆಯಿಂದ ಹೊರಹೋಗಿದ್ದನು. ವಾಪಸ್ ಬರುವಾಗ ಮಾದಕ ಸೇವಿಸಿ ಹಿಂತಿರುಗಿದ್ದನು. ಇದೇ ವೇಳೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಫ್ತಾಬ್ ರಾತ್ರಿಯಿಡೀ ಗಾಂಜಾ ತುಂಬಿದ ಸಿಗರೇಟ್ ಸೇದುತ್ತಾ ದೇಹದ ಬಳಿಯೇ ಇದ್ದನು. ಮೇ 18 ರಂದು ಮಾದಕ ದ್ರವ್ಯದ ಪ್ರಭಾವದಿಂದ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮರು ದಿನ ಶ್ರದ್ಧಾ ದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇಟ್ಟಿದ್ದನು. ಬಳಿಕ ಅದನ್ನು ಅರಣ್ಯ ಪ್ರದೇಶ ಹಾಗೂ ಇನ್ನಿತರ ಸ್ಥಳಗಳಲ್ಲಿ ಎಸೆದಿದ್ದಾನೆ.

ವೈದ್ಯರ ಬಳಿ ಹೋಗಿದ್ದ ಅಫ್ತಾಬ್
ಶ್ರದ್ಧಾ ಕೊಲೆ ಮಾಡಿದ್ದ ಪ್ರೇಮಿ ಅಫ್ತಾಬ್ ಆಕೆಯ ಮೃತ ದೇಹವನ್ನು ತುಂಡಾಗಿಸುವಾಗ ಬೆರಳಿಗೆ ಗಾಯವಾಗಿತ್ತು. ಆಗ ಆತ ವೈದ್ಯರ ಬಳಿ ಕೂಡ ಹೋಗಿದ್ದನು. ವೈದ್ಯರು ಆತನನ್ನು ಈ ಗಾಯ ಹೇಗಾಯಿತು ಎಂದು ಪ್ರಶ್ನೆ ಮಾಡಿದಾಗ ಅಫ್ತಾಬ್, 'ಇದು ಹಣ್ಣು ಕತ್ತರಿಸುವಾಗ ಆಗಿದೆ' ಎಂದು ಹೇಳಿಕೊಂಡಿದ್ದನು. ವೈದ್ಯರ ಬಳಿ ಅಫ್ತಾಬ್ ಹೋದಾಗ ಆತನ ಮುಖದಲ್ಲಿ ಯಾವುದೇ ಭಯವಿರಲಿಲ್ಲ. ಆತನ ಹಾವ ಭಾವದಲ್ಲೂ ಯಾವುದೇ ಅನುಮಾನ ಬರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ತುಂಬಾ ತಿಂಗಳುಗಳಿಂದ ಮಗಳು ಕಾಣೆಯಾದಾಗ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸ್ ವಶದಲ್ಲಿರುವ ಅಫ್ತಾಬ್ ತಾನು ಶ್ರದ್ಧಾಳನ್ನು ಕೊಲೆ ಮಾಡಿದ್ದರೂ ಇನ್ನೂ ಶ್ರದ್ಧಾಳ ಪೂರ್ಣ ದೇಹದ ಭಾಗಗಳು ಪತ್ತೆಯಾಗಿಲ್ಲ. ಈತ ನಿಜ ಹೇಳುತ್ತಿದ್ದಾನಾ ಎನ್ನುವ ಬಗ್ಗೆ ಪೊಲೀಸರಿಗೆ ಅನುಮಾನಗಳಿವೆ. ಹೀಗಾಗಿ ಆತನಿಗೆ ಪಾಲಿಗ್ರಾಫ್ ಪರೀಕ್ಷೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಪರೀಕ್ಷೆಯಿಂದ ನಿಜಾಂಶ ಬಯಲಾಗುವುದು ಎಂದು ಶ್ರದ್ಧಾ ತಂದೆ ಕೂಡ ವಿಶ್ವಾಸ ಹೊಂದಿದ್ದಾರೆ. ಅಫ್ತಾಬ್ ಕೂಡ ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದಾನೆ.











Click it and Unblock the Notifications