ಮೇಜರ್ ಆದಿತ್ಯ ಕುಮಾರ್ ವಿರುದ್ಧದ ಶಿಸ್ತುಕ್ರಮಕ್ಕೆ ಸುಪ್ರೀಂ ತಡೆ
ನವದೆಹಲಿ, ಫೆಬ್ರವರಿ 12: ಭಾರತೀಯ ಸೇನೆಯ ಮೇಜರ್ ಆದಿತ್ಯ ಕುಮಾರ್ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಆಧರಿಸಿ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಕಾಶ್ಮೀರದ ಶೋಫಿಯಾನ್ ನಲ್ಲಿ ಜನವರಿ 27ರಂದು ಪ್ರತಿಭಟನಾಕಾರರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ನಾಗರಿಕರು ಮೃತಪಟ್ಟಿದ್ದರು. ಈ ಸಂಬಂಧ ಭಾರತೀಯ ಸೇನೆಯ ಮೇಜರ್ ಮೇಲೆ ಅಲ್ಲಿನ ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಈ ಎಫ್ಐಆರ್ ರದ್ದುಗೊಳಿಸುವಂತೆ ಆದಿತ್ಯಾ ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಕರ್ಮವೀರ್ ಸಿಂಗ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಅವರು 'ನನ್ನ ಮಗ ತನ್ನ ಕರ್ತವ್ಯ ನಿರ್ವಹಿಸಿದ್ದಾನೆ. ಆತನ ಮೇಲೆ ದೂರು ದಾಖಲಿಸಿದ್ದು ತಪ್ಪು' ಎಂದು ವಾದಿಸಿದ್ದರು. ಮಾತ್ರವಲ್ಲ ಉದ್ರಿಕ್ತ ಜನರ ಗುಂಪಿನಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಉಲ್ಲೇಖಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಎಫ್ಐಆರ್ ಆಧರಿಸಿ ಕ್ರಮ ಜರುಗಿಸದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸೂಚಿಸಿದೆ.












Click it and Unblock the Notifications