ರಾಜೀನಾಮೆ ವಾಪಾಸ್ ಪಡೆಯುವ ಬಗ್ಗೆ ಯೋಚಿಸಲು ಸಮಯ ಕೇಳಿದ ಶರದ್ ಪವಾರ್
ನವದೆಹಲಿ, ಮೇ. 02: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಅವರ ಸೋದರಳಿಯ ಅಜಿತ್ ಪವಾರ್ ಹೇಳಿದರು.
ಮಧ್ಯಾಹ್ನವಷ್ಟೇ ರಾಜೀನಾಮೆ ಘೋಷಿಸಿದ್ದ ಅವರ ನಿರ್ಧಾರಕ್ಕೆ ಪಕ್ಷದ ಬೆಂಬಲಿಗರು ಮತ್ತು ಮುಖಂಡರಿಂದ ತೀವ್ರ ವಿರೋಧ ಉಂಟಾಗಿತ್ತು. ಕಣ್ಣೀರಿಟ್ಟು, ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಅಜಿತ್ ಪವಾರ್, ರಾಜೀನಾಮೆ ಬಗ್ಗೆ ಮರು ಚಿಂತನೆ ಮಾಡಲು ಪವಾರ್ ಸಾಹೇಬ್ ಒಪ್ಪಿಕೊಂಡಿದ್ದಾರೆ ಅವರಿಗೆ ಯೋಚನೆ ಮಾಡಲು 2-3 ದಿನಗಳು ಬೇಕು ಎಂದರು.

ಪಕ್ಷದ ಇತರ ನಾಯಕರೊಂದಿಗೆ ಇಂದು ಸಂಜೆ ಶರದ್ ಪವಾರ್ ಅವರನ್ನು ಭೇಟಿಯಾದ ಅಜಿತ್ ಪವಾರ್ ಮತ್ತು ಸುಪ್ರಿಯಾ ಸುಳೆ ಬಳಿಕ ಸುದ್ದಿಗಾರರಿಗೆ ಕೆಲವು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಹೇಳಿದರು.
"ನಾನು ನನ್ನ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಆದರೆ ನಿಮ್ಮೆಲ್ಲರ ಕಾರಣದಿಂದಾಗಿ ನನ್ನ ನಿರ್ಧಾರದ ಬಗ್ಗೆ ನಾನು ಮರುಚಿಂತನೆ ಮಾಡುತ್ತೇನೆ. ಆದರೆ ನನಗೆ ಎರಡು ಮೂರು ದಿನಗಳು ಬೇಕು ಮತ್ತು ಕಾರ್ಯಕರ್ತರು ಅವರ ಮನೆಗೆ ಹೋದರೆ ಮಾತ್ರ ನಾನು ಯೋಚಿಸುತ್ತೇನೆ. ಕೆಲವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಗಳು ನಿಲ್ಲಬೇಕು" ಎಂದು ಶರದ್ ಪವಾರ್ ಹೇಳಿದ್ದಾರೆ ಎಂದು ಅಜಿತ್ ಪವಾರ್ ತಿಳಿಸಿದರು.
ಇಂದು ಮುಂಜಾನೆ, ಶರದ್ ಪವಾರ್ ರಾಜೀನಾಮೆ ಘೋಷಿಸುತ್ತಿದ್ದಂತೆ, ಅವರ ಸೋದರಳಿಯ ಅಜಿತ್ ಪವಾರ್ ಅವರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬ ವದಂತಿ ನಿಜ ಎಂಬ ಸುದ್ದಿ ಹರಿದಾಡಿತ್ತು. ಇದೇ ಕಾರಣಕ್ಕೆ ಆಘಾತಕ್ಕೊಳಗಾದ ಪಕ್ಷದ ಕಾರ್ಯಕರ್ತರು ಪಕ್ಷದ ಪ್ರಧಾನ ಕಚೇರಿಯನ್ನು ತೊರೆಯಲು ನಿರಾಕರಿಸಿ ಅಲ್ಲೇ ಧರಣಿ ನಡೆಸಿದ್ದಾರೆ.












Click it and Unblock the Notifications