ತಗ್ಗಿದ ಮಳೆ ಆರ್ಭಟ: ಜೂನ್ 1ರಿಂದ ಆಗಸ್ಟ್ 15ರ ಅವಧಿಯಲ್ಲಿ ವಾಡಿಕೆಗಿಂತ ಶೇಕಡಾ 15ರಷ್ಟು ಮಳೆ ಕಡಿಮೆ
ನವದೆಹಲಿ, ಆಗಸ್ಟ್ 16: ದೇಶಾದ್ಯಂತ ಆರ್ಭಟ ತೋರಿಸಿದ್ದ ಮಳೆ ಕೆಲವು ದಿನಗಳಿಂದ ಬಿಡುವು ನೀಡಿದೆ. ಆದರೆ ಒಟ್ಟಾರೆ ಮಳೆ ಪ್ರಮಾಣವನ್ನು ನೋಡಿದಾಗ ಜೂನ್ 1ರಿಂದ ಆಗಸ್ಟ್ 15ರ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಶೇಕಡ 15ರಷ್ಟು ಕಡಿಮೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂಗಾರು ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್ 15 ರ ಅವಧಿಯಲ್ಲಿ ಸಾಮಾನ್ಯ ಮಳೆಗಿಂತ ಶೇಕಡಾ 44 ರಷ್ಟು ಕಡಿಮೆ ಮಳೆಯಾಗಿದೆ ಎಂದು ವರದಿಯಾಗಿದೆ.
ಅಪಾಯಕಾರಿಯಾಗುತ್ತಿರುವ ತ್ರಿವಳಿ ನದಿಗಳು... ಪ್ರವಾಹ ಭೀತಿಯಲ್ಲಿ ಬಾಗಲಕೋಟೆ ಜಿಲ್ಲೆ
ಇತರ ರಾಜ್ಯಗಳ ಪೈಕಿ, ಬಿಹಾರದಲ್ಲಿ ಇದೇ ಅವಧಿಯಲ್ಲಿ ಸಾಮಾನ್ಯ ಮಳೆಗಿಂತ ಶೇಕಡಾ 39ರಷ್ಟು ಕಡಿಮೆ ಮಳೆ ಬಿದ್ದಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇಕಡಾ 20ರಷ್ಟು ಕೊರತೆ ದಾಖಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಡವಾಗಿ ಮುಂಗಾರು ಆರಂಭವಾದ ಪರಿಣಾಮ, ಈ ಅವಧಿಯಲ್ಲಿ ದಾಖಲಾದ ಮಳೆಯು ಸಾಮಾನ್ಯ ಮಳೆಗಿಂತ ಶೇಕಡ 19 ರಷ್ಟು ಕಡಿಮೆಯಾಗಿದೆ.
ಜಾರ್ಖಂಡ್ ರಾಜ್ಯದಲ್ಲೂ ಕೂಡ ಇದೇ ಅವಧಿಯಲ್ಲಿ ಸಾಮಾನ್ಯ ಮಳೆಯ ಪರಮಾಣಕ್ಕಿಂತ ಶೇಕಡ 34ರಷ್ಟು ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ ಹಲವೆಡೆ ಚುರುಕಾದ ಮುಂಗಾರು, ಮತ್ತೊಂದೆಡೆ ಒಣಹವೆ
ವಾಡಿಕೆಗಿಂತ ಹೆಚ್ಚು ಮಳೆಯಾದ ರಾಜ್ಯಗಳು
ಜೂನ್ 1 ರಿಂದ ಆಗಸ್ಟ್ 15 ರ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯನ್ನು ಪಡೆದ ರಾಜ್ಯಗಳೂ ಇವೆ. ತಮಿಳುನಾಡಿನಲ್ಲಿ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂದ ಶೇಕಡ 81 ರಷ್ಟು ಅಧಿಕ ಮಳೆಯಾಗುವ ಮೂಲಕ ಅಗ್ರಸ್ಥಾನದಲ್ಲಿದೆ.
ತೆಲಂಗಾಣದಲ್ಲಿ ವಾಡಿಕೆಗಿಂತ ಶೇಕಡ 74 ರಷ್ಟು ಅಧಿಕ ಮಳೆಯಾಗಿದ್ದು, ರಾಜಸ್ಥಾನದಲ್ಲಿ ಶೇಕಡ 41ರಷ್ಟು ಅಧಿಕ ಮಳೆಯಾಗಿದೆ.
ಕರ್ನಾಟಕದಲ್ಲೂ ಹೆಚ್ಚು ಮಳೆ
ಕರ್ನಾಟಕ ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್ 15 ರ ಅವಧಿಯಲ್ಲಿ ವಾಡಿಕೆಗಿಂತ ಶೇಕಡ 34ರಷ್ಟು ಅಧಿಕ ಮಳೆಯಾಗಿದ್ದರೆ, ಗುಜರಾತ್ನಲ್ಲಿ ಶೇಕಡ 31, ಮಹಾರಾಷ್ಟ್ರದಲ್ಲಿ ಶೇಕಡ 30 ಮತ್ತು ಮಧ್ಯಪ್ರದೇಶದಲ್ಲಿ ಶೇಕಡ16ರಷ್ಟು ಅಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ, ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಶೇಕಡಾ 110 ರಷ್ಟು ಹೆಚ್ಚು ಮಳೆ ದಾಖಲಾಗಿದೆ.
ನೀಲಗಿರಿಯಲ್ಲಿ 64 ವರ್ಷಗಳ ದಾಖಲೆ ಮಳೆ
2022ರ ಮಾನ್ಸೂನ್ನಲ್ಲಿ ನೀಲಗಿರಿಯು ಅಸಾಮಾನ್ಯವಾಗಿ ಆರ್ದ್ರ ಮತ್ತು ತೀವ್ರವಾದ ನೈಋತ್ಯ ಮಾನ್ಸೂನ್ ಅನ್ನು ದಾಖಲಿಸಿದೆ. ಜಿಲ್ಲೆಯ 64 ವರ್ಷಗಳ ಮಳೆಯ ದತ್ತಾಂಶದ ವಿಶ್ಲೇಷಣೆಯ ಆಧಾರದ ಮೇಲೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೋಲ್ ಅಂಡ್ ವಾಟರ್ ಕನ್ಸರ್ವೇಶನ್ (IISWC-ICAR) ವಿಜ್ಞಾನಿಗಳು ಮಳೆ ದಿನಗಳ ಸಂಖ್ಯೆ ಮತ್ತು ಮಳೆಯ ತೀವ್ರತೆ 2022 ರಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಜೂನ್ ಮತ್ತು ಆಗಸ್ಟ್ ನಡುವೆ, ಸಾಮಾನ್ಯ ಮಾನ್ಸೂನ್ಗಿಂತ ಸುಮಾರು ಶೇಕಡ 50ಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದು ಹೇಳಿದ್ದಾರೆ.
ಮುಂಬೈಗೆ ಯೆಲ್ಲೋ ಅಲರ್ಟ್ ನೀಡಿದ ಐಎಂಡಿ
ಮುಂಬೈಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಳದಿ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಮುಂಬೈನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿದೆ. ಸೆಂಟ್ರಲ್ ಲೈನ್ ರೈಲು ಸೇವೆಗಳು ಮತ್ತು ಮುಂಬೈಗೆ ಆಗಮಿಸುವ ದೂರದ ರೈಲುಗಳ ಓಡಾಟದ ಮೇಲೂ ಪರಿಣಾಮ ಬೀರಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.