T20 World Cup victory: ಟಿ20 ವಿಶ್ವಕಪ್ ವಿಜಯೋತ್ಸವದಲ್ಲಿ ಭಾಗಿಯಾಗಿ ಮೂರ್ಛೆ ಹೋದ ಕ್ರಿಕೆಟ್ ಪ್ರೇಮಿಗಳು!
ಮುಂಬೈ, ಜುಲೈ. 05: ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಮೆರೆವಣಿಗೆ ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಸಂಭ್ರಮದ ಜತೆಗೆ ಮುಂಬೈನ ಮರೀನ್ ಡ್ರೈವ್ನಲ್ಲಿ ನಡೆದ ಈ ವಿಜಯೋತ್ಸವದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ.
ಮರೀನ್ ಡ್ರೈವ್ನಲ್ಲಿ ನಡೆದ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವಿಜಯೋತ್ಸವದ ಪರೇಡ್ಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ನೋಡಲು ಲಕ್ಷಗಟ್ಟಲೆ ಜನರು ಆಗಮಿಸಿದ್ದರು. ವರದಿಗಳ ಪ್ರಕಾರ, ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು 3,00,000ಕ್ಕೂ ಹೆಚ್ಚು ಅಭಿಮಾನಿಗಳು ಮರೀನ್ ಡ್ರೈವ್ಗೆ ಬಂದಿದ್ದರು.

ವಿಜಯೋತ್ಸವದಲ್ಲಿ ಗಾಯಗೊಂಡ ಅಭಿಮಾನಿಗಳು
ಜನಸಂದಣಿಯನ್ನು ನಿಯಂತ್ರಿಸಲು ಮುಂಬೈ ಪೊಲೀಸರು ಮರೀನ್ ಡ್ರೈವ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ 5,000 ಸಿಬ್ಬಂದಿಯನ್ನು ನಿಯೋಜಿಸಿದ್ದರು. ಟಿ20 ವಿಶ್ವಕಪ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ಕೆಲವು ಅಭಿಮಾನಿಗಳು ಗಾಯಗೊಂಡಿದ್ದು, ಉಸಿರಾಟದ ತೊಂದರೆ ಅನುಭವಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮೂರ್ಛೆ ಹೋದದ್ದು, ಪ್ರಜ್ಞಾಹೀನರಾಗಿದ್ದು, ಉಸಿರಾಟದ ತೊಂದರೆ ಇಂತಹ ವಿವಿಧ ಸಮಸ್ಯೆಗಳ ಬಗ್ಗೆ ದೂರು ನೀಡಿದ ನಂತರ 10 ಜನರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಬ್ಬರು ಅಭಿಮಾನಿಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರಿಗೆ ಮೂಳೆ ಮುರಿತವಾಗಿದೆ ಮತ್ತು ಇನ್ನೊಬ್ಬರಿಗೆ ಉಸಿರಾಟದ ತೊಂದರೆ ಇತ್ತು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತ್ಯಕ್ಷದರ್ಶಿ ರವಿ ಸೋಲಂಕಿ ಅವರು ಎಎನ್ಐ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. "ನಾನು ಕಚೇರಿಯಿಂದ ಬರುತ್ತಿದ್ದೆ. ಭಾರತ ತಂಡವು ಸಂಜೆ 5-6 ರ ನಡುವೆ ಇಲ್ಲಿಗೆ ತಲುಪುತ್ತದೆ ಎಂದು ತಿಳಿದುಕೊಂಡೆ. ಆದರೆ ಆದಾಗಲಿಲ್ಲ. ಜನಸಂದಣಿ ಹೆಚ್ಚುತ್ತಲೇ ಇತ್ತು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲಿಲ್ಲ. ಜನರು ಇದ್ದಕ್ಕಿದ್ದಂತೆ ಕೂಗಲಾರಂಭಿಸಿದರು, ನಂತರ ಕೆಲವರು ಪರಸ್ಪರರ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಇದು ತುಂಬಾ ಅಸಂಘಟಿತವಾಗಿತ್ತು. ನಿರ್ವಹಣೆ ಮಾಡಲು ಯಾರೂ ಇರಲಿಲ್ಲ. ಇಂತಹ ಘಟನೆ ರಾತ್ರಿ 8:15 ರಿಂದ 8:45 ರ ನಡುವೆ ಸಂಭವಿಸಿದೆ" ಎಂದು ಹೇಳಿದ್ದಾರೆ.
ವಿಜಯೋತ್ಸವದ ಮೆರವಣಿಗೆಯ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತ ರಿಷಬ್ ಮಹೇಶ್ ಯಾದವ್ ಎಎನ್ಐ ಜೊತೆಗೆ ಮಾತನಾಡಿದ್ದು, "ಜನಸಂದಣಿ ಹೆಚ್ಚುತ್ತಿದೆ, ನಾನು ಬಿದ್ದು ಉಸಿರುಗಟ್ಟಿದೆ, ನಾನು ಪ್ರಜ್ಞಾಹೀನನಾಗಿದ್ದೆ. ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ನನಗೆ ಚಿಕಿತ್ಸೆ ನೀಡಲಾಯಿತು, ಈಗ ನಾನು ಚೆನ್ನಾಗಿದ್ದೇನೆ. ಮೆರವಣಿಗೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಜನಸಂದಣಿ ಇತ್ತು. ಆದರೂ ಪೋಲೀಸರೂ ಎಚ್ಚೆತ್ತುಕೊಂಡಿಲ್ಲ" ಎಂದು ಆರೋಪಿಸಿದ್ದಾರೆ.
ತೆರೆದ ಬಸ್ನಲ್ಲಿ ವಿಜಯೋತ್ಸವದ ಮೆರವಣಿಗೆ
ಇದಕ್ಕೂ ಮುನ್ನ ರೋಹಿತ್ ಶರ್ಮಾ ನೇತೃತ್ವದ ತಂಡ ಮರೀನ್ ಡ್ರೈವ್ನಿಂದ ತೆರೆದ ಬಸ್ ಪರೇಡ್ಗೆ ಚಾಲನೆ ನೀಡಿತು. ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ, ಭಾರತದ ಯಶಸ್ಸಿನ ರಾಗಕ್ಕೆ ಹೆಜ್ಜೆ ಹಾಕಿದ್ದಾರೆ. T20 ವಿಶ್ವಕಪ್ ವಿಜೇತ ತಂಡದ ಆಗಮನವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಮೆರವಣಿಗೆಯುದ್ದಕ್ಕೂ, ಆಟಗಾರರು ಟ್ರೋಫಿಯನ್ನು ತೋರಿಸುತ್ತಾ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ವಿಶ್ವಕಪ್ ವಿಜೇತ ಭಾರತದ ಆಟಗಾರರು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಚೆಂಡುಗಳನ್ನು ವಿತರಿಸಿದ್ದಾರೆ. ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಕ್ರಿಕೆಟಿಗರಿಂದ ಆಟೋಗ್ರಾಫ್ ಪಡೆದಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಗಳು ಟಿ 20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ 125 ಕೋಟಿ ರೂಪಾಯಿಯ ಚೆಕ್ ನೋಡಿದೆ.












Click it and Unblock the Notifications