Hijab ban: ಹಿಜಾಬ್ ಆದೇಶ, ಸೋಮವಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
ನವದೆಹಲಿ , ಆಗಸ್ಟ್ 28: ಶಾಲಾ ಕಾಲೇಜುಗಳಲ್ಲಿ ಹಿಜಾಬ್ಗಳನ್ನು ನಿಷೇಧಿಸುವ ರಾಜ್ಯ ಸರಕಾರದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಲಿದೆ.
ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಪೀಠದಲ್ಲಿದ್ದಾರೆ. ಪೀಠವು ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸಲಿದೆ.
ಭಾರತದ ಸಾಮೂಹಿಕ ಶಕ್ತಿ ಅನಾವರಣಗೊಂಡಿದೆ: ಮೋದಿ
ಈ ಹಿಂದೆ, ಆಗಿನ ಸಿಜೆಐ ಎನ್. ವಿ. ರಮಣ ನೇತೃತ್ವದ ಪೀಠದ ಮುಂದೆ ಹಲವಾರು ಸಂದರ್ಭಗಳಲ್ಲಿ ತುರ್ತು ವಿಚಾರಣೆಗಾಗಿ ಅರ್ಜಿಗಳನ್ನು ಉಲ್ಲೇಖಿಸಲಾಗಿತ್ತು. ಆದರೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ.
ಶಾಲಾ-ಕಾಲೇಜುಗಳ ಏಕರೂಪದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸಿದ ಕರ್ನಾಟಕ ಸರಕಾರದ ಆದೇಶವನ್ನು ಎತ್ತಿಹಿಡಿಯುವ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಉನ್ನತ ನ್ಯಾಯಾಲಯದ ಮೇಲ್ಮನವಿಗಳಲ್ಲಿ ಒಂದು "ಸರಕಾರಿ ಅಧಿಕಾರಿಗಳ ಮಲತಾಯಿ ವರ್ತನೆಯು ವಿದ್ಯಾರ್ಥಿಗಳ ನಂಬಿಕೆಯ ಮೇಲೆ ಕೆಟ್ಟ ಪರಿಣಾ ಬೀರುತ್ತದೆ ಮತ್ತು ಅನಗತ್ಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಕಾರಣವಾಗುತ್ತದೆ" ಎಂದು ಆರೋಪಿಸಿದೆ.
"ಭಾರತದ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಪ್ರತಿಪಾದಿಸಲಾದ ಅಗತ್ಯ ಧಾರ್ಮಿಕ ಆಚರಣೆಗಳ ಮೂಲಭೂತ ಅಂಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ" ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
"ಹಿಜಾಬ್ ಅಥವಾ ಶಿರಸ್ತ್ರಾಣವನ್ನು ಧರಿಸುವುದು ಇಸ್ಲಾಂ ಧರ್ಮದ ಆಚರಣೆಗೆ ಅಗತ್ಯವಾದ ಅಭ್ಯಾಸವಾಗಿದೆ" ಎಂದು ಅದರಲ್ಲಿ ಸೇರಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ಮಾರ್ಚ್ನಲ್ಲಿ, ಸಮವಸ್ತ್ರದ ಆದೇಶ ಸಮಂಜಸವಾದ ನಿರ್ಬಂಧವಾಗಿದೆ ಎಂದು ಹೇಳಿತ್ತು. ಜೊತೆಗೆ ಇದಕ್ಕೆ ವಿದ್ಯಾರ್ಥಿಗಳು ಆಕ್ಷೇಪಿಸುವಂತಿಲ್ಲ ಎಂದು ತೀರ್ಪು ನೀಡಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿದ್ದ ವಿವಿಧ ಅರ್ಜಿಗಳನ್ನು ವಜಾಗೊಳಿಸಿದೆ.
ರಾಜ್ಯದಲ್ಲಿ ಈ ವರ್ಷದ ಜನವರಿಯಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜು ಹಿಜಾಬ್ ಧರಿಸಿದ ಆರು ಹುಡುಗಿಯರನ್ನು ಪ್ರವೇಶಿಸದಂತೆ ನಿರ್ಬಂಧಿಸಿದಾಗ ಹಿಜಾಬ್ ವಿವಾದ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರವೇಶ ನಿರಾಕರಿಸಿದ್ದಕ್ಕೆ ಮುಸ್ಲಿಂ ಬಾಲಕಿಯರು ಕಾಲೇಜಿನ ಹೊರಗೆ ಕುಳಿತು ಪ್ರತಿಭಟನೆ ನಡೆಸಿದರು.
ಇದಾದ ನಂತರ ಉಡುಪಿಯ ಹಲವಾರು ಕಾಲೇಜುಗಳ ಹುಡುಗರು ಕೇಸರಿ ಸ್ಕಾರ್ಫ್ ಧರಿಸಿ ತರಗತಿಗಳಿಗೆ ಹಾಜರಾಗಲು ಆರಂಭಿಸಿದರು. ಈ ಪ್ರತಿಭಟನೆಯು ರಾಜ್ಯದ ಇತರ ಭಾಗಗಳಿಗೆ ಹರಡಿತ್ತು. ಇದರಿಂದಾಗಿ ರಾಜ್ಯದ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಆಂದೋಲನಗಳಿಗೆ ಕಾರಣವಾಯಿತು.
ಬಳಿಕ ಸರಕಾರವು ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರಕ್ಕೆ ಬದ್ಧವಾಗಿರಬೇಕು ಮತ್ತು ತಜ್ಞರ ಸಮಿತಿಯು ಈ ವಿಷಯದ ಬಗ್ಗೆ ನಿರ್ಧರಿಸುವವರೆಗೆ ಹಿಜಾಬ್ ಮತ್ತು ಕೇಸರಿ ಸ್ಕಾರ್ಫ್ ಎರಡನ್ನೂ ನಿಷೇಧಿಸಿದೆ ಎಂದು ಆದೇಶಿಸಿತ್ತು.
ಫೆಬ್ರವರಿ 5 ರಂದು, ವಿಶ್ವವಿದ್ಯಾಲಯದ ಪೂರ್ವ ಶಿಕ್ಷಣ ಮಂಡಳಿಯು ಸುತ್ತೋಲೆಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಶಾಲಾ ಆಡಳಿತವು ಅನುಮೋದಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬಹುದು ಮತ್ತು ಇತರ ಯಾವುದೇ ಧಾರ್ಮಿಕ ಉಡುಗೆಗಳನ್ನು ಕಾಲೇಜುಗಳಲ್ಲಿ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿತು.
ನಿರ್ವಹಣಾ ಸಮಿತಿಗಳು ಸಮವಸ್ತ್ರವನ್ನು ಸೂಚಿಸದಿದ್ದಲ್ಲಿ, ವಿದ್ಯಾರ್ಥಿಗಳು ಸಮಾನತೆ ಮತ್ತು ಏಕತೆಯ ಕಲ್ಪನೆಯೊಂದಿಗೆ ಉತ್ತಮವಾದ ಉಡುಪುಗಳನ್ನು ಧರಿಸಬೇಕು ಮತ್ತು ಆ ವಸ್ತ್ರಗಳು ಸಾಮಾಜಿಕ ಸುವ್ಯವಸ್ಥೆಗೆ ಧಕ್ಕೆಯಾಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಕೆಲವು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ನಲ್ಲಿ ಸರಕಾರದ ನಿಯಮದ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಿದ್ದರು.
ಫೆಬ್ರವರಿ 10 ರಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ನ್ಯಾಯಾಲಯ ಅಂತಿಮ ಆದೇಶ ನೀಡುವವರೆಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರಗಳನ್ನು ತರಗತಿಗಳಿಗೆ ಧರಿಸಬಾರದು ಎಂದು ತಿಳಿಸಿತ್ತು. ಹಿಜಾಬ್ ಧರಿಸುವುದು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ರಕ್ಷಿಸಬಹುದಾದ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿವೆ.