Sabarimala:ನೆಚ್ಚಿನ ನಟರು, ರಾಜಕಾರಣಿಗಳ ಫೋಟೋ ತೆಗೆದುಕೊಂಡು ಹೋದರೆ ಶಬರಿಮಲೆಗೆ ಪ್ರವೇಶವಿಲ್ಲ: ಕೇರಳ ಹೈಕೋರ್ಟ್
ತಿರುವನಂತಪುರಂ, ಜ. 09 : ಅಯ್ಯಪ್ಪನ ದರ್ಶನಕ್ಕೆ ಹೋಗುವವರು ತಮ್ಮ ಜೊತೆಗೆ ನೆಚ್ಚಿನ ನಟ, ರಾಜಕಾರಣಿ ಅಥವಾ ಸೆಲಬ್ರಿಟಿಯ ಚಿತ್ರಗಳನ್ನು ತೆಗೆದುಕೊಂಡು ಹೋಗುವುದು ಇತ್ತಿಚಿನ ಟ್ರೆಂಡ್ ಆಗಿದೆ. ಇದಕ್ಕೆ ಕೇರಳ ಹೈಕೋರ್ಟ್ ಬ್ರೇಕ್ ಹಾಕಿದೆ.
ಶಬರಿಮಲೆ ಸನ್ನಿಧಾನಂ ಪ್ರವೇಶಿಸುವ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್ಗಳು ಮತ್ತು ದೊಡ್ಡ ಛಾಯಾಚಿತ್ರಗಳನ್ನು ಹೊಂದಿದ್ದರೆ ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಕೇರಳ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಇತ್ತಿಚೆಗೆ ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಗಳನ್ನು ಹಲವು ಯಾತ್ರೆಗಳು ಶಬರಿಮಲೆಗೆ ಹೋಗುವಾಗ ತೆಗೆದುಕೊಂಡು ಹೋದ ಉದಾಹರಣೆಗಳಿವೆ. ಇನ್ನು ಮುಂದೆ ಹೀಗೆ ಪೋಟೋಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ.

ಈ ಕುರಿತು ಶಬರಿಮಲೆ ಯಾತ್ರಾರ್ಥಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಕೇರಳ ನ್ಯಾಯಾಲಯವು, ಶಬರಿಮಲೆಯಲ್ಲಿ ದೇವಸ್ಥಾನದ ಅಭ್ಯಾಸ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಅಯ್ಯಪ್ಪ ಸ್ವಾಮಿಯ ಭಕ್ತರು ತಮ್ಮ ಪೂಜೆಯ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಬೇಕು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಗೆ ಸೂಚಿಸಿದೆ.
"ಯಾವುದೇ ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಪಥಿನೆಟ್ಟಂಪಾಡಿ ಮೂಲಕ ಅಥವಾ ಶಬರಿಮಲೆ ಸನ್ನಿಧಾನಂನ ಸೋಪಾನಂನ ಮುಂದೆ ದರ್ಶನ ಪಡೆಯಲು, ನಟರು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್ಗಳು ಅಥವಾ ಬೃಹತ್ ಛಾಯಾಚಿತ್ರಗಳನ್ನು ತೆಗೆದುಕೊಂಡು ಬಂದಿದ್ದರೇ ಅವರಿಗೆ ಸನ್ನಿಧಾನಕ್ಕೆ ಪ್ರವೇಶ ಅನುಮತಿಸಲಾಗುವುದಿಲ್ಲ" ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್ಕುಮಾರ್ ಅವರ ವಿಭಾಗೀಯ ಪೀಠವು ತಿಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಶಬರಿಮಲೆಯಲ್ಲಿನ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟು ಒಗ್ಗಿಕೊಂಡಿರುವ ರೀತಿಯಲ್ಲಿ ಪೂಜೆ ಮಾಡುವ ಹಕ್ಕನ್ನು ಚಲಾಯಿಸುವುದು ಭಕ್ತರ ಕರ್ತವ್ಯ ಎಂದು ಸಜೀವ್ ಶಾಸ್ತ್ರಾಂ ವರ್ಸಸ್ ಸ್ಟೇಟ್ ಆಫ್ ಕೇರಳ ಮತ್ತು ಇತರರ ಹಿಂದಿನ ಆದೇಶವನ್ನು ನ್ಯಾಯಾಲಯ ಮತ್ತೊಮ್ಮೆ ಉಲ್ಲೇಖಿಸಿದೆ.
ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಶಬರಿಮಲೆ ಸನ್ನಿಧಾನಂನ ಸೋಪಾನಂ ಮುಂದೆ ಡ್ರಮ್ಮರ್ ಶಿವಮಣಿ ಅವರ ಕಾರ್ಯಕ್ರಮದ ಕುರಿತು ಮಾಧ್ಯಮ ವರದಿಯನ್ನು ಗಮನಿಸಿದ ಪೀಠವು, ದೇವಸ್ಥಾನದಲ್ಲಿ ಡ್ರಮ್ ಅಥವಾ ಇತರ ರೀತಿಯ ವಾದ್ಯಗಳನ್ನು ನುಡಿಸುವುದನ್ನು ನಿರ್ಬಂಧಿಸಿದೆ.












Click it and Unblock the Notifications