ದೆಹಲಿ-ಪಟನಾ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ದರೋಡೆ
ಗಾಜೀಪುರ್(ಉತ್ತರ ಪ್ರದೇಶ), ಏಪ್ರಿಲ್ 09 : ದೆಹಲಿ- ಪಟನಾ ನಡುವೆ ಸಂಚರಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ನುಗ್ಗಿದ ದರೋಡೆಕೋರರು ಪ್ರಯಾಣಿಕರನ್ನು ಹೆದರಿಸಿ ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಭಾನುವಾರ ಮುಂಜಾನೆ ಮುಘಲ್ಸರಾಯಿ (ಉತ್ತರಪ್ರದೇಶ ) ಮತ್ತು ಬುಕ್ಸಾರ್ (ಬಿಹಾರ) ರೈಲ್ವೆ ನಿಲ್ದಾಣಗಳ ನಡುವೆ 12310 ಸಂಖ್ಯೆಯ ರಾಜಧಾನಿ ಎಕ್ಸ್ಪ್ರೆಸ್ ರೈಲು ಸಂಚಾರಿಸುವ ವೇಳೆ ಈ ಘಟನೆ ನಡೆದಿದೆ.[ಉತ್ತರಪ್ರದೇಶದ ಮೌಗ್ಲಿ ಹುಡುಗಿಯ ಅಸಲಿ ಕಥೆ ಇಲ್ಲಿದೆ!]

ರೈಲಿನ ಎ4, ಬಿ7 ಮತ್ತು ಬಿ8 ಸಂಖ್ಯೆಯ ಬೋಗಿಯೊಳಗೆ ನುಗ್ಗಿದ ದರೋಡೆಕೋರರು ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ, ನಗದು, ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.
ಈ ಘಟನೆ ಬಗ್ಗೆ ಪಟನಾದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೋಗಿಗಳ ಬಾಗಿಲು ತೆರೆದಿಡುವ ಮೂಲಕ ರೈಲ್ವೆ ಸಿಬ್ಬಂದಿಗಳು ದರೋಡೆಕೋರರರಿಗೆ ಸಹಾಯ ಮಾಡಿದ್ದಾರೆ.
ಈ ಕೃತ್ಯದಲ್ಲಿ ರೈಲ್ವೆ ಸಿಬ್ಬಂದಿಗಳ ಕೈವಾಡವೂ ಇದೆ ಎಂದು ಪ್ರಯಾಣಿಕರು ಆರೋಪಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂದಾಜು 20 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ವಸ್ತುಗಳು ದರೋಡೆಯಾಗಿದೆ ಎಂದು ಕಾನ್ಪುರದ ರಕ್ಷಣಾ ಸಿಬ್ಬಂದಿ ಎಸ್. ತ್ಯಾಗಿ ಅವರು ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶ ನೀಡಿದ್ದಾರೆ.












Click it and Unblock the Notifications