ಈ ಬಾರಿಯ ಬಜೆಟ್ ನಲ್ಲಿ ಶ್ರೀಸಾಮಾನ್ಯನಿಗೇನು ಬೆನಿಫಿಟ್?
ಅಪನಗದೀಕರಣ ನಂತರದ ಮೊಟ್ಟ ಮೊದಲ ಬಜೆಟ್ ಇದಾಗಿರುವುದರಿಂದ ಈ ಬಾರಿ ಕ್ಯಾಶ್ ಲೆಸ್ ವ್ಯವಹಾರಗಳ ಮೇಲೆ ಹೆಚ್ಚಿನ ಉತ್ತೇಜನ ನಿರೀಕ್ಷಿಸಲಾಗಿದೆ.
ಮುಂದಿನ ತಿಂಗಳ ಮೊದಲ ದಿನ (ಫೆಬ್ರವರಿ 1) ಕೇಂದ್ರ ಸಚಿವ ಅರುಣ್ ಜೇಟ್ಲಿಯವರು 2017ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ. ಕೇಂದ್ರ ವಿತ್ತೀ ಯ ಹಾಗೂ ರೈಲ್ವೇ ಬಜೆಟ್ ಒಟ್ಟಿಗೇ ಮಂಡನೆಯಾಗುತ್ತಿರುವುದು ಈ ಬಾರಿಯ ಬಜೆಟ್ ವಿಶೇಷ.
ಕಳೆದ ಬಜೆಟ್ ಗಿಂತ ಈ ಬಾರಿಯ ಬಜೆಟ್ ಅನ್ನು ರೂಪಿಸುವುದು ಜೇಟ್ಲಿಯವರಿಗೆ ಭಾರೀ ಸವಾಲಿನ ಕೆಲಸ. ಏಕೆಂದರೆ, ಕಳೆದ ವರ್ಷಾಂತ್ಯದ ಹೊತ್ತಿಗೆ ಕೇಂದ್ರ ಸರ್ಕಾರದಿಂದ ಘೋಷಣೆಯಾದ ಅಪನಗದೀಕರಣದ ನಂತರ ಭಾರತದ ಆರ್ಥಿಕ, ಸಾಮಾಜಿಕ ವಲಯಗಳಲ್ಲಿ ಹಲವಾರು ಮಾರ್ಪಾಟುಗಳು, ಏರು ಪೇರುಗಳು ಉಂಟಾಗಿವೆ.
ಈ ಎಲ್ಲದನ್ನೂ ಗಮನದಲ್ಲಿಟ್ಟುಕೊಂಡು ದೇಶದ ಆರ್ಥಿಕ ಪ್ರಗತಿಯನ್ನು ಮುಖ್ಯವಾಗಿ ಕೇಂದ್ರೀಕರಿಸಿ ಈ ಬಾರಿಯ ಬಜೆಟನ್ನು ರೂಪಿಸಬೇಕಿದೆ.
ಇದು ಸರ್ಕಾರದ ದೃಷ್ಟಿಕೋನದ ಮಾತಾಯಿತು. ಆದರೆ, ಅಪನಗದೀಕರಣದಿಂದ ತತ್ತರಿಸಿರುವ ಜನ ಸಾಮಾನ್ಯರು ಜೇಟ್ಲಿಯವರಿಂದ ಈ ಬಾರಿ ಬಯಸುವುದೇನನ್ನು ಎಂಬುದರ ಸ್ಥೂಲವಾದ ಪರಿಚಯ ಇಲ್ಲಿದೆ.
ಇದಾದರೆ ನೌಕಕರಿಗೆ ಸಂತಸ
ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ವಿಧಿಸಲಾಗುವ ಆದಾಯ ಮಿತಿಯಲ್ಲಿ ಏರಿಕೆ ಕಾಣಬಹುದಾಗಿದೆ. ಈವರೆಗೆ 2.5 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ. ಇದನ್ನು ಹೆಚ್ಚಿಸುವ ಬಗ್ಗೆ ಕಳೆದೆರಡು ವರ್ಷಗಳಿಂದಲೂ ಮನವಿ ಸಲ್ಲಿಸಲಾಗುತ್ತಿದೆ. ಈ ಬಾರಿ ಈ ಬೇಡಿಕೆಗೆ ಮನ್ನಣೆ ಸಿಗುವ ಅವಕಾಶಗಳಿವೆ. ಹಾಗಾದಲ್ಲಿ, ಸುಮಾರು 4 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಸಿಗಲಿದೆ.
ನಗದು ರಹಿತ ವ್ಯವಹಾರಕ್ಕೆ ಉತ್ತೇಜನ
ಭಾರತೀಯ ಸಮಾಜವನ್ನು ಕ್ಯಾಶ್ ಲೆಸ್ ಮಾಡುವ ಹೆಬ್ಬಯಕೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹಾಗಾಗಿ, ಅಪನಗದೀಕರಣದ ನಂತರ ಮಂಡಿಸಲಾಗುತ್ತಿರುವ ಈ ಬಜೆಟ್ ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳು ಜಾರಿಗೊಳ್ಳಬಹುದು. ಅಲ್ಲದೆ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೇಮೆಂಟ್ ಬ್ಯಾಂಕುಗಳ ವ್ಯವಹಾರಕ್ಕೂ ಉತ್ತೇಜನ ಸಿಗಬಹುದು.
ರಿಯಲ್ ಎಸ್ಟೇಟ್ ಗೆ ಉತ್ತೇಜನ
ರಾಷ್ಟ್ರೀಯ ಒಟ್ಟು ಉತ್ಪನ್ನಕ್ಕೆ (ಜಿಡಿಪಿ) ತನ್ನದೇ ಕಾಣಿಕೆ ನೀಡುವ ರಿಯಲ್ ಎಸ್ಟೇಟ್ ಉದ್ಯಮ ಅಪನಗದೀಕರಣದಿಂದಾಗಿ ತತ್ತರಿಸಿದೆ. ಹಾಗಾಗಿ, ಈ ವಲಯದ ಉತ್ತೇಜನಕ್ಕಾಗಿ ಈ ಬಾರಿ ಗೃಹ ಸಾಲಗಳ ಬಡ್ಡಿ ಕಡಿತ, ಗೃಹ ನಿರ್ಮಾಣ ಕಚ್ಚಾವಸ್ತುಗಳ ದರದಲ್ಲಿ ಕಡಿತ, ವೇತನದಾರರಿಗೆ ನೀಡಲಾಗುವ ಗೃಹ ಭತ್ಯೆಯಲ್ಲಿ ಹೆಚ್ಚಳ ಮುಂತಾದ ಸೌಲಭ್ಯಗಳನ್ನು ನಿರೀಕ್ಷಿಸಬಹುದು.
ಗೃಹ ಸಾಲದ ಹೊರೆ ಇಳಿಸಲು ಕೇಂದ್ರದ ಸಜ್ಜು
'ಸರ್ವರಿಗೂ ಸೂರು' ಎಂಬುದು ಕೇಂದ್ರ ಸರ್ಕಾರದ ಮತ್ತೊಂದು ಮಹದೋದ್ದೇಶ ಯೋಜನೆ. ಈ ನಿಟ್ಟಿನಲ್ಲಿ ಬ್ಯಾಂಕುಗಳಿಂದ ಪಡೆಯಲಾಗುವ ಗೃಹ ಸಾಲಗಳ ಮೇಲಿನ ತೆರಿಗೆಯನ್ನು ಕೊಂಚ ಮಟ್ಟಿಗೆ ಇಳಿಸುವ ಆಲೋಚನೆಯಿದೆ. ಇದು ಜಾರಿಯಾದರೆ, ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಮನೆಯ ಕನಸು ನನಸಾಗಬಹುದು. ಪರೋಕ್ಷವಾಗಿ ಇದು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಚೇತೋಹಾರಿಯಾಗಲಿದೆ.
ಗ್ರಾಮೀಣ ಪ್ರದೇಶಗಳಿಗೆ ಬೇಕಿದೆ ಸೌಕರ್ಯ
ಅಪನಗದೀಕರಣದಿಂದಾಗಿ ರೈತರು ತಮ್ಮ ಹಿಂಗಾರು ಬೆಳೆಯನ್ನು ಮಾರಾಟ ಮಾಡದೇ ಕಷ್ಟ ಅನುಭವಿಸುತ್ತಿದ್ದಾರೆ. ಅಪನಗದೀಕರಣದಿಂದ ನಷ್ಟಕ್ಕೊಳಗಾದ ರೈತರಿಗೆ ಆರ್ಥಿಕ ಪರಿಹಾರ ಸಿಗಬಹುದು. ಇನ್ನು, ಗ್ರಾಮೀಣ ಪ್ರದೇಶಗಳಲ್ಲೂ ಕ್ಯಾಶ್ ಲೆಸ್ ವ್ಯವಹಾರ ತರಲು ಉದ್ದೇಶಿಸಿರುವುದರಿಂದ ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ ಅಥವಾ ಇನ್ಯಾವುದೇ ವ್ಯವಸಾಯ ಸಂಬಂಧಿ ಪರಿಕರಗಳನ್ನು ಕೊಳ್ಳುವಿಕೆಗೆ ಅನುಕೂಲವಾಗುವಂಥ ಯೋಜನೆ ಬರಬಹುದು.