ರೈತರ ಪ್ರತಿಭಟನೆ ಬಗ್ಗೆ ಕೆನಡಾ ಪ್ರಧಾನಿ ಹೇಳಿಕೆ: ಭಾರತದ ತಿರುಗೇಟು
ನವದೆಹಲಿ, ಡಿಸೆಂಬರ್ 1: ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿರುವ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತ್ಯುತ್ತರ ನೀಡಿದೆ. ಭಾರತದಲ್ಲಿನ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೆನಡಾ ಮುಖಂಡರಿಗೆ ತಪ್ಪು ಮಾಹಿತಿ ನೀಡಲಾಗಿದೆ ಮತ್ತು ಇದು ಅನಪೇಕ್ಷಿತವಾಗಿದೆ ಎಂದು ಭಾರತ ಹೇಳಿದೆ.
'ಭಾರತದ ರೈತರಿಗೆ ಸಂಬಂಧಿಸಿದಂತೆ ಕೆನಡಾದ ಮುಖಂಡರಿಂದ ಕೆಲವು ತಪ್ಪು ಮಾಹಿತಿಯ ಹೇಳಿಕೆಗಳನ್ನು ನೋಡಿದ್ದೇವೆ. ಅಂತಹ ಹೇಳಿಕೆಗಳು ಅನವಶ್ಯಕವಾಗಿದ್ದವು. ಮುಖ್ಯವಾಗಿ ಒಂದು ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಹೇಳಿಕೆ ಬೇಕಿರಲಿಲ್ಲ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಟ್ರುಡೋ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
'ರಾಜತಾಂತ್ರಿಕ ಮಾತುಕತೆಗಳನ್ನು ರಾಜಕೀಯ ಉದ್ದೇಶಕ್ಕೆ ಬೇರೆ ರೀತಿಯಲ್ಲಿ ತಪ್ಪಾಗಿ ಅರ್ಥೈಸದೆ ಇರುವುದು ಒಳಿತು' ಎಂದೂ ಅವರು ಹೇಳಿದ್ದಾರೆ.

ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದ ಟ್ರುಡೋ, ಶಾಂತಿಯುತ ಪ್ರತಿಭಟನೆಯ ಹಕ್ಕುಗಳನ್ನು ಕೆನಡಾ ಯಾವಾಗಲೂ ಸಮರ್ಥಿಸಿಕೊಳ್ಳುತ್ತದೆ ಎಂದಿದ್ದರು.
'ರೈತರ ಪ್ರತಿಭಟನೆಯ ಬಗ್ಗೆ ಭಾರತದಿಂದ ಸುದ್ದಿ ಬರುತ್ತಿದೆ. ಪರಿಸ್ಥಿತಿಯು ಕಳವಳಕಾರಿಯಾಗಿದೆ ಮತ್ತು ಕುಟುಂಬಗಳು ಮತ್ತು ಸ್ನೇಹಿತರ ಬಗ್ಗೆ ನಮಗೆ ಬಹಳ ಚಿಂತೆಯಾಗುತ್ತಿದೆ. ನಾವು ಮಾತುಕತೆಯ ಮಹತ್ವದ ಬಗ್ಗೆ ನಂಬಿಕೆ ಇರಿಸಿದ್ದೇವೆ. ನಮ್ಮ ಕಳವಳಗಳನ್ನು ತಿಳಿಸಲು ನಾವು ಭಾರತದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುತ್ತಿದ್ದೇವೆ. ಇದು ನಾವೆಲ್ಲರೂ ಜತೆಗೂಡಬೇಕಾದ ಸಮಯ' ಎಂದು ಟ್ರುಡೋ ಹೇಳಿಕೆ ನೀಡಿದ್ದರು.
ಟ್ರುಡೋ ಅವರ ಹೇಳಿಕೆಗೆ ಶಿವಸೇನಾ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದು ಭಾರತದ ಆಂತರಿಕ ವಿಚಾರ. ಬೇರೊಂದು ದೇಶದ ರಾಜಕೀಯಕ್ಕೆ ಆಹಾರವಲ್ಲ. ನಾವು ಇತರೆ ದೇಶಗಳಿಗೆ ಯಾವಾಗಲೂ ನೀಡುವ ಆದರಣೆಗಳನ್ನು ಗೌರವಿಸಿ. ಪ್ರಧಾನಿ ಮೋದಿ ಅವರೇ ಇತರೆ ದೇಶಗಳು ಈ ವಿಚಾರದಲ್ಲಿ ಮೂಗುತೂರಿಸುವ ಮೊದಲು ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಶಿವಸೇನಾ ಹೇಳಿದೆ.












Click it and Unblock the Notifications