Breaking; ಕೊಲೆ ಪ್ರಕರಣ, ರಾಮ್ ರಹೀಮ್ ಸಿಂಗ್ ದೋಷಿ
ನವದೆಹಲಿ, ಅಕ್ಟೋಬರ್ 08; ಡೇರಾ ಸಚ್ಚಾ ಸೌಧ ಮುಖ್ಯಸ್ಥರಾಗಿದ್ದ ರಾಮ್ ರಹೀಮ್ ಸಿಂಗ್ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಬಂಧಿಸಲಾಗಿತ್ತು. ಡೇರಾ ಸಚ್ಚಾ ಸೌಧದ ಅನುಯಾಯಿಯಾಗಿದ್ದ ರಂಜಿತ್ ಹತ್ಯೆ 2002ರ ಜುಲೈ 10ರಂದು ನಡೆದಿತ್ತು.

ಈ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥರಾಗಿದ್ದ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರು ದೋಷಿ ಎಂದು ಶುಕ್ರವಾರ ಹರ್ಯಾಣದ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ರಂಜಿತ್ ಸಿಂಗ್ ಕೊಲೆಯಾಗಿದೆ ಎಂದು ಪುತ್ರ ಜಗ್ ಸೀರ್ ಸಿಂಗ್ ದೂರು ನೀಡಿದ್ದರು. 2003ರ ಡಿಸೆಂಬರ್ 3ರಂದು ಸಿಬಿಐ ವಿಶೇಷ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಆದೇಶ ನೀಡಿತ್ತು.
ಡೇರಾ ಸಚ್ಚಾ ಸೌಧ ಮುಖ್ಯಸ್ಥರಾಗಿದ್ದ ರಾಮ್ ರಹೀಮ್ ಸಿಂಗ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಆಶ್ರಮದಲ್ಲಿದ್ದ ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈಗ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಅಕ್ಟೋಬರ್ 12ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗತ್ತದೆ ಕೋರ್ಟ್ ಹೇಳಿದೆ.
ರಹಸ್ಯ ಪೆರೋಲ್; ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಸಿಂಗ್ಗೆ ಹರ್ಯಾಣ ಸರ್ಕಾರ ಒಂದು ದಿನದ ರಹಸ್ಯ ಪೆರೋಲ್ ನೀಡಿದೆ ಎನ್ನುವ ಸುದ್ದಿ 2020ರ ನವೆಂಬರ್ನಲ್ಲಿ ಹಬ್ಬಿತ್ತು.
ರಾಮ್ ರಹೀಮ್ ಸಿಂಗ್ ಪತ್ನಿ ಹರ್ಜಿತ್ ಕೌರ್ ಮನವಿಯ ಮೇರೆಗೆ ಸುನಾರಿಯಾ ಜೈಲಿನಿಂದ ಗುರುಗ್ರಾಮದ ಆಸ್ಪತ್ರೆಗೆ ತೆರಳಿ ತಾಯಿ ನಾಸೀಬ್ ಕೌರ್ ನೋಡಲು ಪೆರೋಲ್ ನೀಡಲಾಗಿತ್ತು. ಇಡೀ ದಿನ ರಾಮ್ ರಹೀಮ್ ಸಿಂಗ್ ತಾಯಿಯ ಜೊತೆ ಆಸ್ಪತ್ರೆಯಲ್ಲಿದ್ದರು. ಆಗ 100 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು ಎಂಬ ಸುದ್ದಿಗಳು ಹಬ್ಬಿದ್ದವು.
ಪತ್ರಕರ್ತನ ಹತ್ಯೆ ಪ್ರಕರಣ; ಪತ್ರಕರ್ತ ರಾಮಚಂದ್ರ ಛತ್ರಪತಿ ಕೊಲೆ ಪ್ರಕರಣದಲ್ಲಿ ಸಹ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರು ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ 2019ರ ಜನವರಿಯಲ್ಲಿ ತೀರ್ಪು ನೀಡಿತ್ತು.
2002ರ ಅಕ್ಟೋಬರ್ನಲ್ಲಿ ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ನಡೆದಿತ್ತು. 2003ರಲ್ಲಿ ಪ್ರಕರಣ ದಾಖಲಾಗಿತ್ತು. 2006ರಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2019ರಲ್ಲಿ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರು ದೋಷಿಗಳು ಎಂಬ ತೀರ್ಪು ಪ್ರಕಟವಾಗಿತ್ತು.
ಪತ್ರಕರ್ತ ರಾಮಚಂದ್ರ ಛತ್ರಪತಿ 'ಪೂರಾ ಸಚ್' ಎಂಬ ಪತ್ರಿಕೆಯನ್ನು ಹೊರತರುತ್ತಿದ್ದರು. ಡೇರಾ ಸಚ್ಚಾ ಸೌಧ, ರಾಮ್ ರಹೀಮ್ ಸಿಂಗ್ ವಿರುದ್ಧ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದಿದ್ದರು.
ಡೇರಾ ಸಚ್ಚಾ ಸೌಧದಲ್ಲಿ ಮಹಿಳೆಯನ್ನು ಶೋಷಣೆ ಮಾಡಲಾಗುತ್ತಿದೆ. ಅವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ಪತ್ರವೊಂದನ್ನು ಪ್ರಕಟಿಸಿದ್ದರು. ಈ ವರದಿಗಳ ಬಳಿಕ ರಾಮಚಂದ್ರ ಛತ್ರಪತಿ ಹತ್ಯೆ ನಡೆದಿತ್ತು.
ಡೇರಾ ಸಚ್ಚಾ ಸೌಧದ ಮುಖ್ಯಸ್ಥರಾಗಿದ್ದ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿವಿಧ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ರಾಮ್ ರಹೀಮ್ ಸಿಂಗ್ ಬಂಧನ ಹರ್ಯಾಣ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಆತನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳಬಹುದು ಎಂದು ರಾಮ್ ರಹೀಮ್ ಸಿಂಗ್ ಕೋರ್ಟ್ಗೆ ಹಾಜರುಪಡಿಸುತ್ತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ವ್ಯವಸ್ಥೆ ಮಾಡಲಾಗುತ್ತದೆ.











Click it and Unblock the Notifications