ವಾಹನ ಡಿಕ್ಕಿ: ಗಾಯಗೊಂಡ ಚಿರತೆಯ ಹೃದಯವಿದ್ರಾವಕ ವಿಡಿಯೋ
Recommended Video
ನವದೆಹಲಿ, ಜನವರಿ 30: ಕಾಡಿನ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳು ವನ್ಯಜೀವಿಗಳನ್ನು ಬಲಿತೆಗೆದುಕೊಳ್ಳುವ ಘಟನೆಗಳು ಸಾಮಾನ್ಯ ಎನಿಸಿವೆ. ತಮಗಿರುವ ಅಲ್ಪ ಆವಾಸ ಸ್ಥಾನದಲ್ಲಿಯೂ ಈ ವನ್ಯಪ್ರಾಣಿಗಳು ನೆಮ್ಮದಿಯಿಂದ ಓಡಾಡಿಕೊಳ್ಳಲು ಮನುಷ್ಯ ಬಿಟ್ಟಿಲ್ಲ. ಹೀಗೆ ತಮ್ಮ ಜಾಗದಲ್ಲಿ ಓಡಾಡಿಕೊಂಡಿರುವ ಪ್ರಾಣಿಗಳು ದೈತ್ಯ ವಾಹನಗಳ ಚಕ್ರಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿವೆ.
ಇಂತಹ ವನ್ಯಜೀವಿ ಅಪಘಾತದ ಹೃದಯ ವಿದ್ರಾವಕ ವಿಡಿಯೋವೊಂದನ್ನು ಬಾಲಿವುಡ್ ನಟ ರಣದೀಪ್ ಹೂಡಾ ಹಂಚಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆಯ ಪರ ಒಲವು ಹೊಂದಿರುವ ನಟ ರಣದೀಪ್, ಇಂತಹ ಹಲವು ವಿಡಿಯೋಗಳನ್ನು ಈ ಹಿಂದೆಯೂ ಹಂಚಿಕೊಂಡಿದ್ದರು.
ಆದರೆ, ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಚಿರತೆಯೊಂದರ ವಿಡಿಯೋ ಮನಕಲಕುವಂತಿದೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದ್ದು, ಮನುಷ್ಯನ ತಪ್ಪಿಗೆ ಮುಗ್ಧ ಪ್ರಾಣಿಗಳು ಬಲಿಯಾಗುವ ಘಟನೆಗಳಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಈ ವಿಡಿಯೋ ನೋಡಿದವರ ಕಣ್ಣಾಲಿಗಳು ತುಂಬಿಕೊಳ್ಳುತ್ತದೆ.

ಅವಘಡಗಳು ನಡೆಯುತ್ತಲೇ ಇವೆ
'ನಿನ್ನೆ ಚಿರತೆ, ಇಂದು ಒಂದು ಆನೆ. ಈ ರಸ್ತೆ ಹತ್ಯೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ವೇಳೆ ಅವು ಹೆಚ್ಚಾಗುತ್ತವೆ. ಇದನ್ನು ತಡೆಯಲು ಕಠಿಣವಾದ ಕ್ರಮಗಳು ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಗತ್ಯವಾಗಿದೆ' ಎಂದು ರಣದೀಪ್ ಟ್ವೀಟ್ ಮಾಡಿದ್ದಾರೆ.
|
ಕೇಂದ್ರ ಸಚಿವರ ಗಮನ ಸೆಳೆದ ರಣದೀಪ್
ತಮ್ಮ ಟ್ವೀಟ್ನಲ್ಲಿ ರಣದೀಪ್, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ನಿತಿನ್ ಗಡ್ಕರಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ. ಇದೇ ಟ್ವಿಟರ್ ಥ್ರೆಡ್ನಲ್ಲಿ ಅವರು ಚಿರತೆ ಮತ್ತು ಆನೆಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕುಸಿದು ಬೀಳುವ ಚಿರತೆ
ರಸ್ತೆಯಲ್ಲಿ ಬಿದ್ದಿದ್ದ ಚಿರತೆ ಕಷ್ಟಪಟ್ಟು ಎದ್ದು ನಿಲ್ಲಲು ಪ್ರಯತ್ನಿಸುತ್ತದೆ. ವಾಹನ ಡಿಕ್ಕಿಯಿಂದ ತೀವ್ರ ಗಾಯಗೊಂಡಿದ್ದ ಅದು ಅಸಹಾಯಕತೆಯಿಂದ ಆಕ್ರೋಶಗೊಂಡು ಒಮ್ಮೆಲೆ ಎದ್ದು ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಬಳಿ ದೇಹ ಎಳೆದುಕೊಂಡು ಹೋಗಿ ಅದರ ಚಕ್ರವನ್ನು ಕಚ್ಚುತ್ತದೆ. ಆದರೆ ಅಷ್ಟರಲ್ಲಿ ಮತ್ತೆ ನಿತ್ರಾಣಗೊಳ್ಳುವ ಚಿರತೆ, ಆಯಾಸದಿಂದ ಉಸಿರಾಡಲು ಕಷ್ಟಪಡುತ್ತಾ ರಸ್ತೆಯ ಮೇಲೆ ಬೀಳುತ್ತದೆ.

ಟ್ವಿಟ್ಟಿಗರ ಕಂಬನಿ
ಈ 48 ಸೆಕೆಂಡುಗಳ ವಿಡಿಯೋ ವೈರಲ್ ಆಗಿದೆ. ಚಿರತೆ ಅಪಘಾತ ಮತ್ತು ಆನೆಯ ಅಪಘಾತಗಳು ಎಲ್ಲಿ ಮತ್ತು ಯಾವಾಗ ಸಂಭವಿಸಿದ್ದವು ಎಂಬ ಮಾಹಿತಿ ಇಲ್ಲ. ಟ್ವಿಟ್ಟಿಗರು ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
'ದುರಂತ' ಎಂದು ಖ್ಯಾತ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಟ್ವೀಟ್ ಮಾಡಿದ್ದಾರೆ. 'ವನ್ಯಜೀವಿ ಕಾರಿಡಾರ್ಗಳ ಅಗತ್ಯವಿದೆ. ಪ್ರಾಣಿಗಳ ಓಡಾಟಕ್ಕೆ ಸೇತುವೆಗಳನ್ನು ನಿರ್ಮಿಸಿ' ಎಂದು ಸಲಹೆ ನೀಡಿದ್ದಾರೆ. ಮುಗ್ಧ ಪ್ರಾಣಿಗಳು ತಮ್ಮದಲ್ಲದ ತಪ್ಪಿಗೆ ಸಾಯುತ್ತಿವೆ. ಇದು ಸಹಿಸಲಾಗದು ಎಂದು ಅನೇಕರು ಹೇಳಿದ್ದಾರೆ.












Click it and Unblock the Notifications