ರಾಹುಲ್ ವರ್ಚಸ್ಸು ವೃದ್ಧಿಯ ಹಿಂದಿನ ಗುಟ್ಟು ರಮ್ಯಾ!
Recommended Video

ರಾಹುಲ್ ಗಾಂಧಿಯವರು ಜನರೊಂದಿಗೆ ಸ್ಪಂದಿಸುವ ರೀತಿಯಲ್ಲಿ ಬದಲಾವಣೆ ಕಂಡಿದ್ದರೆ, ಸಾರ್ವಜನಿಕವಾಗಿ ಅವರ ವರ್ಚಸ್ಸು ವೃದ್ಧಿಯಾಗಿದ್ದೇ ಆದಲ್ಲಿ, ರಾಹುಲ್ ಅವರು ಚುನಾವಣೆ ಗೆಲ್ಲುವ ದಾರಿಯನ್ನು ಕಂಡುಕೊಂಡಿದ್ದೇ ಆದಲ್ಲಿ, ಆ ಶ್ರೇಯಸ್ಸಿನ ಅರೆಪಾವು ಕನ್ನಡ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೂ ಸಲ್ಲಬೇಕು.
ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಕಾಂಗ್ರೆಸ್ಸಿನ ಸೋಷಿಯಲ್ ಮತ್ತು ಡಿಜಿಟಲ್ ಮೀಡಿಯಾ ತಂಡದ ನೇತೃತ್ವ ವಹಿಸಿದ ಮೇಲೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅದೃಷ್ಟದ ರೇಖೆಯೂ ಬದಲಾಗಿದೆ ಎಂಬುದನ್ನು ಅವರ ವಿರೋಧಿಗಳೂ ಅಲ್ಲಗಳೆಯಲು ಸಾಧ್ಯವಿಲ್ಲ.
ಉತ್ತರ ಪ್ರದೇಶ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯವರು ರಮ್ಯಾ ಅವರನ್ನು ಸೋಷಿಯಲ್ ಮೀಡಿಯಾ ಹೆಡ್ ಆಗಿ ಮೇ ತಿಂಗಳಲ್ಲಿ ಮಾಡಿದಾಗ, ಹಲವರು ನಕ್ಕಿದ್ದರು, ಕೆಲವರು ಅಪಹಾಸ್ಯ ಮಾಡಿದ್ದರು, ಮತ್ತೊಂದಿಷ್ಟು ಜನ ಭಲೇ ಅಂದಿದ್ದರು. ರಮ್ಯಾ ಅವರಿಗೆ ಎಸೆದ ಸವಾಲು ಸಾಮಾನ್ಯದ್ದಾಗಿರಲಿಲ್ಲ. ಅದಕ್ಕೆ ಸಾಕಷ್ಟು ಪೂರ್ವತಯಾರಿ ಬೇಕಿತ್ತು.
ರಾಜಕೀಯಕ್ಕೆ ಧುಮುಕಿದ ಮೇಲೆ ನಾವು ಕೂಡ ನಮ್ಮ ರಾಜಕೀಯದಾಟವನ್ನು ಆಡಲೇಬೇಕಲ್ಲ ಎಂದಿದ್ದರು ರಮ್ಯಾ. ತಮ್ಮ ತಂಡದಲ್ಲಿ ರಮ್ಯಾ ಅವರು ಹೆಚ್ಚು ಮಹಿಳೆಯರನ್ನು ಆರಿಸಿಕೊಂಡಿದ್ದಾರೆ. ಮಹಿಳೆಯರು ಯಾವಾಗಲೂ ವಿಭಿನ್ನವಾಗಿ ಚಿಂತಿಸುತ್ತಾರೆ, ಅವರ ಕಾರ್ಯವೈಖರಿಯೂ ವಿಭಿನ್ನ ಎಂದು ತಮ್ಮ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡಿದ್ದರು. ಇದೆಲ್ಲ ಆಗಿದ್ದು ಹೇಗೆ? ರಾಹುಲ್ ಅವರಲ್ಲಿ ಮಂದಹಾಸ ಮೂಡಿದ್ದು ಹೇಗೆ?

ನಂತರವೂ ರಾಹುಲ್ ಅವರನ್ನು ತೆಗಳಿದವರಿದ್ದಾರೆ
ಈ ಬೆಳವಣಿಗೆ ನಡೆದ ನಂತರವೂ ರಾಹುಲ್ ಅವರ ಸೋಷಿಯಲ್ ಪೋಸ್ಟ್ ಗಳನ್ನು ತೆಗಳಿದವರಿದ್ದಾರೆ, ಅಪ್ರಬುದ್ಧ ಅಂದವರಿದ್ದಾರೆ, ಅಪಹಾಸ್ಯ ಮಾಡಿ ಗಹಗಹಿಸಿ ನಕ್ಕವರಿದ್ದಾರೆ, ನಿರ್ಲಕ್ಷಿಸಿದವರೂ ಇದ್ದಾರೆ. ಸೋಷಿಯಲ್ ಹಿಡಿತ ಕಂಡುಕೊಳ್ಳಲು ಕೂಡ ಸಮಯ ಬೇಕಲ್ಲವೆ? ಇದೀಗ ರಾಹುಲ್ ಗಾಂಧಿ ಅವರನ್ನು ಸಮರ್ಥ ನಾಯಕನೆಂದು ಜನರು ಗುರುತಿಸಲು ಆರಂಭಿಸಿದ್ದಾರೆ. ಅವರ ಟ್ವೀಟುಗಳಿಗೆ ಭಾರೀ ಸ್ಪಂದನೆ ಕಂಡುಬರುತ್ತಿದೆ.

ರಮ್ಯಾ ವಾಗ್ದಾಳಿಗೆ ಮುಟ್ಟಿ ನೋಡಿಕೊಳ್ಳುವಂತಿವೆ
ರಮ್ಯಾ ಅವರು ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರಿನಲ್ಲಿ ಮತ್ತು ಫೇಸ್ ಬುಕ್ಕಿನಲ್ಲಿ ಮಾಡಿರುವ ಕೆಲ ವಾಗ್ದಾಳಿಗಳು ಬಿಜೆಪಿಯವರು ಮುಟ್ಟಿ ನೋಡಿಕೊಳ್ಳುವಂತಿದ್ದವು. ಈ ಧೈರ್ಯವನ್ನು ಕಾಂಗ್ರೆಸ್ಸಿನಲ್ಲಿ ಇರುವ ಹಲವಾರು ಯುವ ಮತ್ತು ಪ್ರತಿಭಾವಂತ ರಾಜಕಾರಣಿಗಳು ಕೂಡ ತೋರಿದ್ದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕೂಡ ವಿರೋಧಿಗಳನ್ನು ಹಣಿಯಬಹುದು ಎಂಬುದನ್ನು ರಮ್ಯಾ ತೋರಿಸಿಕೊಟ್ಟಿದ್ದಾರೆ.

ರಾಹುಲ್ ಪ್ರಶ್ನೆಗಳಲ್ಲಿ ಸ್ಪಷ್ಟತೆ, ನಿಖರತೆ
ಪ್ರಚಾರಕ್ಕೆ ಹೋದಾಗಲೆಲ್ಲ ರಾಹುಲ್ ಗಾಂಧಿಯವರು ಅತ್ಯಂತ ನಿಖರವಾಗಿ, ಸ್ಪಷ್ಟ ವಿಚಾರಗಳಿಂದ ವಿರೋಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಪೂರ್ವತಯಾರಿಯಿಂದ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಅಲ್ಲದೆ, ಹಿಂದೆ ನೀರಸವಾಗಿದ್ದ ಅವರ ಟ್ವೀಟ್ ಗಳಲ್ಲಿ ಈಗ ಶಾಯರಿಗಳು, ಕವನಗಳು ಕಂಡುಬಂದಿವೆ. ಟ್ವಿಟ್ಟಿಗರು ಅವರಿಗೇ ತಿಳಿಯದಂತೆ ರಾಹುಲ್ ಅವರನ್ನು ಮೆಚ್ಚಲು ಆರಂಭಿಸಿದ್ದಾರೆ.

ಹೊಸಸ್ಫೂರ್ತಿ, ಲವಲವಿಕೆ ತಂದ ರಮ್ಯಾ
ಉತ್ತರ ಪ್ರದೇಶ ಚುನಾವಣೆಗೂ ಮೊದಲು ಬದುಕಿದ್ದರೂ ಸತ್ತಂತಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡ, ರಮ್ಯಾ ಅವರ ಆಗಮನದಿಂದ ಹೊಸಸ್ಫೂರ್ತಿಯನ್ನು, ಲವಲವಿಕೆಯನ್ನು ಪಡೆಯಿತು. ರಮ್ಯಾ ಅವರ ಹಲವಾರು ಆಕ್ರೋಶಭರಿತ ಮಾತುಗಳು ಟ್ವಿಟ್ಟರಿನಲ್ಲಿ ಟೀಕೆಗೊಳಗಾದರೂ, ಕೆಲಬಾರಿ ಅಪ್ರಬುದ್ಧ ಅನಿಸಿದರೂ, ಹಲವರು ಗುರುತಿಸುವಂತೆ, ಪ್ರತಿಕ್ರಿಯಿಸುವಂತೆ ಮಾಡಿತು.

ಟ್ರೋಲ್ ಗಳಿಗೆ ಎದೆಗುಂದ ದಿವ್ಯಾ ಸ್ಪಂದನಾ
ರಮ್ಯಾ, ರಾಹುಲ್ ಅವರನ್ನು ಪ್ರತಿಬಾರಿ ಟ್ರೋಲ್ ಮಾಡಲಾಗಿದೆ. ಇದಕ್ಕೆ ಎದೆಗುಂದದೆ ರಮ್ಯಾ ಟ್ರೋಲಿಗರಿಗೆ ತಿರುಗುಬಾಣ ಬಿಟ್ಟಿದ್ದಾರೆ. ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿದ ರಮ್ಯಾ ಅಕಾ ದಿವ್ಯಾ ಸ್ಪಂದನಾ ತಮ್ಮದೇ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಅವರು ಬಸವನಗುಡಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತ.

ಶೇ.85ರಷ್ಟು ಜನರು ಮಹಿಳಾಮಣಿಗಳು
ರಮ್ಯಾ ಅವರು ತಮ್ಮ ತಂಡದಲ್ಲಿ ಹೊಸಹೊಸ ಮುಖಗಳನ್ನು ಸೇರಿಸಿಕೊಂಡಿದ್ದಾರೆ. ಅವರಲ್ಲಿ ಶೇ.85ರಷ್ಟು ಜನರು ಮಹಿಳಾಮಣಿಗಳು ಎಂಬುದು ವಿಶೇಷ. ಈ ಮೊದಲು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಇದ್ದದ್ದು ಕೇವಲ ಮೂವರು ಮಹಿಳೆಯರು ಮಾತ್ರ. ರಮ್ಯಾ ಅವರನ್ನು ಸೋಷಿಯಲ್ ಮುಖ್ಯಸ್ಥೆಯನ್ನಾಗಿ ಮಾಡಿ ರಾಹುಲ್ ಗಾಂಧಿಯವರು ರಾಜಕಾರಣದಲ್ಲಿ ಮೊದಲ ಜಯ ಕಂಡಿದ್ದಾರೆ.

ಈ ದಾರಿ ಮೊದಲು ಕಂಡುಕೊಂಡವರು ಮೋದಿ
2014ರಲ್ಲಿ ಲೋಕಸಭೆ ಚುನಾವಣೆ ನಡೆದಾಗ ಚುನಾವಣೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಹೇಗೆ ಸಮರ್ಥವಾಗಿ ಗೆಲ್ಲಬಹುದು ಮತ್ತು ಜನರನ್ನು ಯಾವ ರೀತಿ ಸಮರ್ಥವಾಗಿ ತಲುಪಬಹುದು ಎಂಬುದನ್ನು ನರೇಂದ್ರ ಮೋದಿ ತೋರಿಸಿಕೊಟ್ಟಿದ್ದರು. ರಮ್ಯಾ ಅವರು ಅದೇ ದಾರಿಯಲ್ಲಿ ಸಾಗಿದ್ದಾರೆ ಮತ್ತು ಅವರಿಗೆ ತಿರುಗುಬಾಣ ಬಿಟ್ಟಿದ್ದಾರೆ. ಗುರುವಿಗೆ ಶಿಷ್ಯೆಯ ತಿರುಮಂತ್ರ.












Click it and Unblock the Notifications