Ramnavami clash: ಲಕ್ನೋ ರಾಮನವಮಿ ಮೆರವಣಿಗೆ ವೇಳೆ 2 ಗುಂಪುಗಳ ಘರ್ಷಣೆ, ಕಲ್ಲು ತೂರಾಟ!
ಲಕ್ನೋ ಮಾರ್ಚ್ 31: ರಾಮನವಮಿಯ ಶೋಭಾ ಯಾತ್ರೆಯ ವೇಳೆ ಉತ್ತರ ಪ್ರದೇಶದ ಲಕ್ನೋದ ಹಳ್ಳಿಯೊಂದರ ಶಾಹಿ ಮಸೀದಿ ಬಳಿ ಗುರುವಾರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಮೂಲಗಳ ಪ್ರಕಾರ, ಹೊಡೆದಾಟದಲ್ಲಿ ಕಲ್ಲು ತೂರಾಟ ಮತ್ತು ದೈಹಿಕ ಹಲ್ಲೆ ನಡೆದಿದೆ. ಜಾಂಕಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಯಾವ್ ಗ್ರಾಮದಲ್ಲಿ ಮಧ್ಯಾಹ್ನ 1.30ಕ್ಕೆ ಈ ಘಟನೆ ನಡೆದಿದೆ.
ಸುಮಿತ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಇತರ 10-15 ಜನರೊಂದಿಗೆ ಡಿಜೆಯಲ್ಲಿ ಮ್ಯೂಸಿಕ್ ನುಡಿಸಿದಾಗ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಮತ್ತೊಂದು ಗುಂಪು ಆಕ್ಷೇಪಿಸಿದ್ದು ಘರ್ಷಣೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 10 ನಿಮಿಷಗಳ ಕಾಲ ನಡೆದ ವಿವಾದದಲ್ಲಿ ಎರಡೂ ಕಡೆಯವರು ಕಲ್ಲು ತೂರಾಟ, ದೈಹಿಕ ಹಲ್ಲೆ ಮತ್ತು ಆಸ್ತಿ ನಾಶದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಗೊಂದಲದ ನಡುವೆ, ಡಿಜೆ ಕಾರ್ಟ್ಗೆ ಹಾನಿಯಾಗಿದೆ. ಮಾಹಿತಿ ತಿಳಿದ ಜಾಂಕಿಪುರಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಬಿಗಿ ಭದ್ರತೆ
ಘಟನೆಯ ಬಳಿಕ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೆರವಣಿಗೆಯಲ್ಲಿ ಅಧಿಕ ಜನ ಸೇರಿದ್ದರಿಂದ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಘರ್ಷಣೆಯಿಂದ ನೂಕುನುಗ್ಗಲು ನಡೆದಿದೆ ಎನ್ನಲಾಗುತ್ತಿದೆ. ಗುಂಪುಗಾರಿಕೆಯನ್ನು ನಿಷೇಧಿಸಲಾಗಿದೆ. ಹಲವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ.
ಡಿಸಿಪಿ ಖಾಸಿಂ ಅಬಿದಿ, "ಮೆರವಣಿಗೆಗೆ ಯಾವುದೇ ಅನುಮತಿಯನ್ನು ಪಡೆಯಲಾಗಿಲ್ಲ, ಹೀಗಾಗಿ ಎರಡೂ ಗುಂಪುಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ. ಪ್ರದೇಶದಲ್ಲಿ ಯಾವುದೇ ಶಾಂತಿಗೆ ಭಂಗ ಉಂಟಾಗಿಲ್ಲ" ಎಂದು ಹೇಳಿದರು. ಪ್ರಮುಖವಾಗಿ, ಪೊಲೀಸರು ಮಸೀದಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ತಮ್ಮ ಪರಿಗಣನೆಗೆ ತೆಗೆದುಕೊಂಡಿದ್ದಾರೆ ಮತ್ತು ಸಂಗ್ರಹಿಸಿದ ದೃಶ್ಯಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಮೆರವಣಿಗೆ ನಡೆಸಲು ಅನುಮತಿ ಪಡೆದಿದ್ದೇವೆ ಎಂದು ಹಿಂದೂ ಗುಂಪು ಹೇಳಿಕೊಂಡರೂ ಮಾರ್ಗವಾಗಿ ಯಾರೂ ಕೂಡ ಶೋಭಾ ಯಾತ್ರೆಯನ್ನು ಕೈಗೊಂಡಿಲ್ಲ. ಯಾವುದೋ ಗುಂಪು ಮೆರವಣಿಗೆ ನಡೆಸುವ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದೆ ಎಂದು ಆ ಪ್ರದೇಶದ ಕೌನ್ಸಿಲರ್ ಚಾಂದ್ ಸಿದ್ದಿಕಿ ಹೇಳಿದ್ದಾರೆ. ಈ ಬಗ್ಗೆ ಸಿದ್ದಿಕಿ ಮಾತನಾಡಿ, ಯಾವುದೇ ಕಾರಣವಿಲ್ಲದೆ ಹಿಂದೂ ಗುಂಪು ಹಾಗೂ ಮಸೀದಿಯ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಮನವಮಿ ವೇಳೆ ಹಲವೆಡೆ ಘರ್ಷಣೆ
ಜಂಕಿಪುರಂ ಪೊಲೀಸ್ ಠಾಣೆಯ ಪೊಲೀಸರು ಡಿಜೆ ಬಾಕ್ಸ್ಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಘಟನೆಯ ನಂತರ ಹಿಂದೂ ಸಮುದಾಯದ ಜನರ ಗುಂಪು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿತು.
ಗುರುವಾರ ವಿವಿಧ ರಾಜ್ಯಗಳಲ್ಲಿ ಹಿಂಸಾಚಾರದ ಘಟನೆಗಳು ರಾಮನವಮಿ ಆಚರಣೆಯನ್ನು ಹಾಳುಮಾಡಿವೆ. ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಎರಡು ಗುಂಪುಗಳು ಘರ್ಷಣೆಗೊಂಡು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದೆ. ಜೊತೆಗೆ ಗುಜರಾತ್ನ ವಡೋದರಾ ನಗರದಲ್ಲಿ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್ಗಳನ್ನು ಹಲವೆಡೆ ಹಾರಿಸಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ.












Click it and Unblock the Notifications