ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯವಿಲ್ಲ
ನವದೆಹಲಿ, ಆಗಸ್ಟ್ 10: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ 7 ಮಂದಿಗೆ ಈ ಬಾರಿಯೂ ಬಿಡುಗಡೆ ಭಾಗ್ಯವಿಲ್ಲ. ಈ ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಶುಕ್ರವಾರದಂದು ಸುಪ್ರೀಂಕೋರ್ಟ್ಗೆ ಹೇಳಿದೆ.
ಕಳೆದ 27 ವರ್ಷಗಳಿಂದ ಜೈಲುಶಿಕ್ಷೆ ಅನುಭವಿಸುತ್ತಿರುವ ಈ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಆದರೆ, ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರವು, ಯಾವುದೇ ಕಾರಣಕ್ಕೂ ರಾಜೀವ್ ಹತ್ಯೆ ಆರೋಪಿಗಳನ್ನು ಬಿಡುಗಡೆ ಮಾಡುವುದಿಲ್ಲ, ಇಂಥ ಅಪರಾಧಿಗಳನ್ನು ಬಿಡುಗಡೆ ಮಾಡಿದರೆ, ತಪ್ಪು ಸಂದೇಶ ರವಾನಿಸಿದ್ದಂತಾಗುತ್ತದೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.
ರಾಜೀವ್ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಕೂಡಾ ಅಪರಾಧಿಗಳ ಬಿಡುಗಡೆ ಮನವಿಯನ್ನು ವಿರೋಧಿಸಿದೆ.
2015ರಲ್ಲಿ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಕೇಂದ್ರ ಸಮ್ಮಿತಿ ಇಲ್ಲದೆ ಅಪರಾಧಿಗಳನ್ನು ಬಿಡುಗಡೆ ಮಾಡಲಾಗದು ಎಂದು ಹೇಳಿತ್ತು. ಮಹಿಳಾ ಪ್ರಭಾಕರನ್ ನೇತೃತ್ವದ ಎಲ್ ಟಿಟಿಐನ ಆತ್ಮಾಹುತಿ ದಳದ ಮೂಲಕ ರಾಜೀವ್ ಗಾಂಧಿ ಅವರನ್ನು ಮೇ 21, 1991ರಂದು ಹತ್ಯೆ ಮಾಡಲಾಗಿತ್ತು.
ನಳಿನಿ, ಮುರುಗನ್, ಎಜೆ ಪೆರಾರಿವಾಲನ್, ರಾಬರ್ಟ್ ಫಿಯೋಸ್, ಜಯಕುಮಾರ್, ರವಿಚಂದ್ರನ್ ಅವರಿಗೆ ಶಿಕ್ಷೆಯಾಗಿದೆ.
ಇತ್ತೀಚೆಗೆ ಮಲೇಷ್ಯಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ನಮ್ಮ ತಂದೆಯ ಹತ್ಯೆ ಮಾಡಿದವರ ಬಗ್ಗೆ ನಮಗೆ ಹಲವು ವರ್ಷಗಳ ಕಾಲ ದ್ವೇಷವಿತ್ತು. ಆದರೆ ಕ್ರಮೇಣ ನಾವು ಎಲ್ಲರನ್ನೂ ಪ್ರೀತಿಸುವುದನ್ನು ಕಲಿತೆವು. ನಾನು ಮತ್ತು ಸಹೋದರಿ ಪ್ರಿಯಾಂಕಾ ಇಬ್ಬರೂ ನಮ್ಮ ತಂದೆಯನ್ನು ಕೊಂದವರನ್ನು ಕ್ಷಮಿಸಿದ್ದೇವೆ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications