ರಾಜಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ, ಬಿಜೆಪಿಗೆ ನಡುಕ
ಜೈಪುರ, ಫೆಬ್ರವರಿ 02: ರಾಜಸ್ಥಾನದ ಅಲ್ವಾರ್ ಮತ್ತು ಅಜ್ಮೇರ್ ಲೋಕಸಭೆ ಮತ್ತು ಮಂದಲ್ಗ್ರಹ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ರಾಜಸ್ಥಾನದ ಆಡಳಿತರೂಢ ಬಿಜೆಪಿಗೆ ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯ ಸೂಚನೆ ಎಂದೇ ಬಿಂಬಿತವಾಗುತ್ತಿದೆ.
ಮೂರು ಕ್ಷೇತ್ರದಲ್ಲಿ ಭರ್ಜರಿ ವಿಜಯವನ್ನೇ ಸಾಧಿಸಿರುವ ಕಾಂಗ್ರೆಸ್ ರಾಜಸ್ಥಾನದಲ್ಲಿ ಇದೇ ವರ್ಷಾಂತ್ಯಕ್ಕೆ ಘೋಷಣೆಯಾಗಲಿರುವ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಎಚ್ಚರಿಕೆ ನೀಡಿದೆ. ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಕರೆಯಲಾಗಿದ್ದ ಈ ಉಪಚುನಾವಣೆಯನ್ನು ಕಾಂಗ್ರೆಸ್ ಅಧಿಕಾರಯುತವಾಗಿ ಗೆದ್ದಿದೆ.
ರಾಜಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿರುಗಾಳಿಗೆ ಬಿಜೆಪಿ ಧೂಳೀಪಟ
ಉಪಚುನಾವಣೆ ನಡೆದ ಎರಡು ಲೋಕಸಭಾ ಕ್ಷೇತ್ರಗಳು (ಅಲ್ವಾರ್ ಮತ್ತು ಅಜ್ಮೇರ್) ಒಟ್ಟು 16 ವಿಧಾನಸಭೆಗಳನ್ನು ಒಳಗೊಂಡಿದೆ. ಜೊತೆಗೆ ಒಂದು ವಿಧಾನಸಭೆ ಅಂದರೆ ಒಟ್ಟು 17 ವಿಧಾನಸಭಾ ಕ್ಷೇತ್ರದ ಜನರು ಉಪಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಮತ ಹಾಕಿದ್ದಾರೆ. ರಾಜಸ್ಥಾನದ ಒಟ್ಟು ಮತದ ಶೇ 8.5 ಮತಗಳು ಈ 18 ಕ್ಷೇತ್ರದಲ್ಲಿವೆ. ಇದು ಬಿಜೆಪಿಗೆ ತಲೆ ನೋವಾಗಿದೆ.
ಅಲ್ವಾರ್ ಹರಿಯಾಣ ರಾಜ್ಯದ ಗಡಿಯಲ್ಲಿದೆ, ಅಜ್ಮೇರ್ ರಾಜಸ್ಥಾನದ ಮಧ್ಯಭಾಗದಲ್ಲಿದೆ, ಮತ್ತು ಮಂದಲ್ಗ್ರಹ್ ವಿಧಾನಸಭಾ ಕ್ಷೇತ್ರ ಇರುವುದು ಮಧ್ಯಪ್ರದೇಶದ ಹತ್ತಿರ ಹಾಗಾಗಿ ಈ ಜನಾಭಿಪ್ರಾಯ ಕೇವಲ ರಾಜಸ್ಥಾನದ ಒಂದು ಭಾಗದ್ದಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.
ಬಿಜೆಪಿ ಮುಜುಗರ ತಪ್ಪಿಸಿಕೊಳ್ಳಲು 'ಉಪಚುನಾವಣೆ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಅಲ್ಲ' ಎನ್ನುತ್ತಿದೆಯಾದರೂ ಅಂತರಂಗದಲ್ಲಿ ಅದಕ್ಕೂ ಉಪ ಚುನಾವಣೆಯ ಮಹತ್ವದ ಅರಿವಿದೆ. ಹಾಗಾಗಿ ಬಿಜೆಪಿ ತನ್ನ ಸೋಲಿಗೆ ಕಾರಣಗಳನ್ನು ಹುಡುಕುವಲ್ಲಿ ನಿರತವಾಗಿದೆ. ಅಮಿತ್ ಶಾ ಸಹ ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಗುಜ್ಜರ್ ಸಮುದಾಯದ ಮೀಸಲಾತಿಗೆ ತಂದ ಎರಡು ವಿಧೇಯಕಗಳಿಗೂ ಹೈಕೋರ್ಟ್ ತಡೆ ನೀಡಿದ್ದು ರಾಜಸ್ಥಾನದಲ್ಲಿ ಬಿಜೆಪಿಯ ಜನಪ್ರಿಯತೆ ಕುಸಿಯಲು ಪ್ರಮುಖ ಕಾರಣ ಎನ್ನಲಾಗಿದೆ. ಅದನ್ನು ಹೊರತು ಪಡಿಸಿದರೆ ಪದ್ಮಾವತ್ ವಿವಾದ, ಜಿಎಸ್ಟಿ ಮತ್ತು ನೋಟ್ಬ್ಯಾನ್ನಿಂದ ರಾಜಸ್ಥಾನಿ ವ್ಯಾಪಾರಿಗಳು ತಿಂದ ಪೆಟ್ಟು ಬಿಜೆಪಿ ಸೋಲಲು ಪ್ರಮುಖ ಕಾರಣ.
ಈ ಉಪಚುನಾವಣೆಯ ವಿಜಯ ಬಿಜೆಪಿಯ ಆಡಳಿತಕ್ಕೆ ಜನರಿಂದ ಸಿಕ್ಕ ಪ್ರಶಂಸೆ ಎಂದು ಭಾವಿಸಲಾಗುತ್ತದೆ ಎಂದು ಚುನಾವಣೆಗೆ ಮೊದಲು ಬಿಜೆಪಿ ಮುಖಂಡರು ಹೇಳಿದ್ದರು ಆದರೆ ಈಗ ಚುನಾವಣೆ ಸೋತಿರುವುದು ನೋಡಿದಲ್ಲಿ ವಸುಂದರಾ ರಾಜೆ ಅವರ ಆಡಳಿತ ರಾಜಸ್ಥಾನಿಗಳಿಗೆ ತೃಪ್ತಿ ನೀಡಿಲ್ಲ ಎಂದೇ ಭಾವಿಸಬೇಕಾಗುತ್ತದೆ.
ಮುಂದಿನ ವರ್ಷ ಜನವರಿ 20ಕ್ಕೆ ರಾಜಸ್ಥಾನದ ಸರ್ಕಾರದ ಅವಧಿ ಮುಗಿಯಲಿದ್ದು ಈ ವರ್ಷಾಂತ್ಯಕ್ಕೆ ಚುನಾವಣಾ ಕಾರ್ಯಗಳು ಭಿರುಸುಗೊಳ್ಳುತ್ತವೆ. ಇಂತಹಾ ಸಮಯದಲ್ಲಿ ಉಪಚುನಾವಣೆ ಸೋತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿಯ 'ಕಾಂಗ್ರೆಸ್ ಮುಕ್ತ ಭಾರತ' ಹೇಳಿಕೆ ಕೇವಲ ಕನಸು ಎಂದೆನಿಸುತ್ತಿದೆ.