ಗೆಹ್ಲೋಟ್, ಪೈಲೆಟ್ ಒಂದಾದರೂ ಟಿಕೆಟ್ ಹಂಚಿಕೆ ತಾಪತ್ರಯ ಮುಗಿದಿಲ್ಲ!
ಜೈಪುರ, ಅಕ್ಟೋಬರ್ 15: ಇಡೀ ದೇಶದಲ್ಲೂ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆ ಬಹಳ ಮಹತ್ವದ್ದೆನ್ನಿಸಿದೆ.
ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತವಿರೋಧಿ ಅಲೆ ಇರುವುದನ್ನು ಬಲ್ಲ ಕಾಂಗ್ರೆಸ್, ಅ ದನ್ನೇ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಮುಖಂಡ ಸಚಿನ್ ಪೈಲೆಟ್ ವರ ನಡುವಿದ್ದ ವೈಮನಸ್ಯವೂ ಇದೀಗ ತಹಬಂದಿಗೆ ಬಂದಿದೆ.
ಇಷ್ಟಾದರೂ ಕಾಂಗ್ರೆಸ್ಸಿಗೆ ರಾಜಸ್ಥಾನದಲ್ಲಿ ಟಿಕೆಟ್ ಹಂಚಿಕೆಯ ವಿಚಾರ ಸಾಕಷ್ಟು ಗೊಂದಲವನ್ನುಂಟು ಮಾಡಿದೆ. ಈ ರಾಜ್ಯವನ್ನು ಮರಳಿ ತನ್ನತೆಕ್ಕೆಗೆ ಪಡೆಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿಗೆ ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸುವುದು ಅನಿವಾರ್ಯವಾಗಿದೆ.

ಗೆಹ್ಲೋಟ್-ಪೈಲೆಟ್ ಒಂದಾದರೂ ಸಮಸ್ಯೆ ಮುಗಿದಿಲ್ಲ!
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಇಬ್ಬರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಅದೇ ಕಾರಣಕ್ಕಾಗಿ ಇಬ್ಬರು ನಾಯಕರ ನಡುವಲ್ಲೂ ಭಿನ್ನಾಭಿಪ್ರಾಯವಿತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಎಲ್ಲ ಭಿನ್ನಾಭಿಪ್ರಾಯಕ್ಕೂ ತೇಪೆ ಹಚ್ಚಿದ್ದಾರೆ. ಚುನಾವಣೆಯ ಹೊತ್ತಲ್ಲಿ ಪಕ್ಷದಲ್ಲೇ ಒಡಕು ಮೂಡುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಕಾರಣಕ್ಕೆ, ಇಬ್ಬರು ನಾಯಕರನ್ನೂ ಒಂದಾಗಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ಮೊದಲ ಉದ್ದೇಶವಾದ್ದರಿಂದ ಈ ಇಬ್ಬರು ನಾಯಕರೂ ರಾಹುಲ್ ಗಾಂಧಿ ಅವರ ಮಾತಿಗೆ ತಲೆಬಾಗಿದ್ದಾರೆ.

ಸೀಟು ಹಂಚಿಕೆಯೇ ದೊಡ್ಡ ತಲೆನೋವು
ರಾಜಸ್ಥಾದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಅಲ್ಲದೆ ಬೇರೆ ಪಕ್ಷಗಳಿಂದ ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಸೇರಿದ ಯಾರಿಗೂ ಟಿಕೆಟ್ ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ರಾಹುಲ್ ಗಾಂಧಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಲಸಿಗರಿಗೆ ಟಿಕೆಟ್ ನೀಡುವುದರಿಂದ ಮೂಲಕಾಂಗ್ರೆಸ್ಸಿಗರ ಮನಸ್ಸಿಗೆ ನೋವಾಗುತ್ತದೆ, ಮತ್ತು ಕಾರ್ಯಕರ್ತರಲ್ಲೂ ಇದು ಪಕ್ಷದ ಮುಖಂಡರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುವುದಿಲ್ಲ ಎಂಬುದು ರಾಹುಲ್ ಗಾಂಧಿ ಅವರ ಅನಿಸಿಕೆ. ಆದ್ದರಿಂದ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಬಾಗಿಲುಬಡಿದವರಿಗೆ ಪಕ್ಷದ ಸದಸ್ಯತ್ವವಷ್ಟೇ ಸಿಕ್ಕೀತೇ ಹೊರತರು ಸೀತು ಸಿಗುವುದು ಕಷ್ಟ!

ಕಾಂಗ್ರೆಸ್-ಬಿಎಸ್ಪಿ ಮೈತ್ರಿ ಇಲ್ಲ!
ಕಾಂಗ್ರೆಸ್ ಜೊತೆ ಕೈಜೋಡಿಸಲು ಮಾಯಾವತಿ ನೇತೃತವದ ಬಹುಜನ ಸಮಾಜವಾದಿ ಪಕ್ಷ ಹಿಂದೆ ಸರಿದಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮತಕ್ಕಾಗಿ ಬಿಎಸ್ಪಿಯನ್ನೇ ಅವಲಂಬಿಸಿದ್ದ ಕಾಂಗ್ರೆಸ್, ಇದೀಗ ಪರ್ಯಾಯ ಉಪಾಯ ಮಾಡಬೇಕಿದೆ. ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಗೆ ಸುಲಭದ ಮಾತಲ್ಲ.

ರಾಜಸ್ಥಾನದಲ್ಲಿ ಯಾವತ್ತು ಚುನಾವಣೆ?
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸೂಚನೆ ನೀಡಿವೆ. ಮತ್ತೂ ಕೆಲವು ಸಮೀಕ್ಷೆಗಳು ಬಿಜೆಪಿ ಈ ರಾಜ್ಯವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಲಿದೆ ಎಂದು ಹೇಳಿವೆ.











Click it and Unblock the Notifications